ಸಿಎಎ ಕಾಯ್ದೆ: ಅಮಿತ್ ಶಾಗೆ ಟಿಎಂಸಿ ಮುಖಂಡ ಅಭಿನಂದನೆ
ಕೋಲ್ಕತಾ, ಡಿಸೆಂಬರ್ 8: ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ (ಸಿಎಎ) ಉಲ್ಲೇಖಿಸಿರುವ 'ಭಾರತದಲ್ಲಿ ಐದು ವರ್ಷಗಳ ಅವಧಿಯ ಕಡ್ಡಾಯ ವಾಸ' ನಿಯಮದಲ್ಲಿ ತಿದ್ದುಪಡಿ ಮಾಡುವಂತೆ ತೃಣಮೂಲ ಕಾಂಗ್ರೆಸ್ ಮುಖಂಡ ಉಪೇಂದ್ರ ನಾಥ್ ಬಿಸ್ವಾಸ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ. ಸಿಎಎಗೆ ತೃಣಮೂಲ ಕಾಂಗ್ರೆಸ್ ಪಕ್ಷ ತೀವ್ರ ವಿರೋಧ ವ್ಯಕ್ತಪಡಿಸಿರುವ ನಡುವೆಯೇ ಈ ನಡೆ ಕುತೂಹಲ ಮೂಡಿಸಿದೆ. ಫೆಬ್ರವರಿಯಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆ ಸಿಎಎ ವಿರೋಧಿ ನಿರ್ಣಯವನ್ನು ಅಂಗೀಕರಿಸಿತ್ತು.
'ಗೃಹ ಸಚಿವ ಅಮಿತ್ ಶಾ ಅವರಿಗೆ ನಾನು ಪತ್ರ ಮತ್ತು ಇ-ಮೇಲ್ ಕೂಡ ಬರೆದಿದ್ದು, ಭಾರತದಲ್ಲಿ ಐದು ವರ್ಷದ ಅವಧಿಯ ಕಡ್ಡಾಯ ವಾಸವಾಗಿರಬೇಕು ಎಂಬ ನಿಯಮವನ್ನು ತೆಗೆದುಹಾಕುವಂತೆ ಮನವಿ ಮಾಡಿದ್ದೇನೆ. ಈ ಮುಂದೆ ಅದು 11 ವರ್ಷಗಳ ಅವಧಿಯದ್ದಾಗಿತ್ತು. ಆದರೆ ಈಗಿನ ಪೌರತ್ವ ತಿದ್ದುಪಡಿ ಕಾಯ್ದೆಯ ಸೆಕ್ಷನ್ 6ರ ಪ್ರಕಾರ ಈಗ ಐದು ವರ್ಷಕ್ಕೆ ನಿಗದಿಗೊಳಿಸಲಾಗಿದೆ. ಆದರೆ ಆ ನಿಯಮವನ್ನು ಅಳಿಸಿ ಹಾಕುವಂತೆ ನಾನು ಮನವಿ ಮಾಡಿದ್ದೇನೆ. ಏಕೆಂದರೆ ಭಾರತಕ್ಕೆ ಮರಳಿ ಬರಲು ಬಯಸುವವರಿಗೆ ತಕ್ಷಣ ಪೌರತ್ವ ಪಡೆಯಲು ಸಾಧ್ಯವಾಗುತ್ತದೆ' ಎಂದು ತಿಳಿಸಿದರು.
ಜನವರಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ: ಬಿಜೆಪಿ
'ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಭಾರತಕ್ಕೆ ಮರಳಿ ಬರುವವರ ಬಗ್ಗೆ ಮಾತ್ರ ನಾನು ಕಾಳಜಿ ವ್ಯಕ್ತಪಡಿಸಿದ್ದೇನೆ. ಹೀಗೆ ಬರುವ ಜನರು ಪೌರತ್ವ ಪಡೆಯಲು ಅವರು ಐದು ವರ್ಷಗಳವರೆಗೆ ಕಾಯಬೇಕೇ ಎನ್ನುವುದು ನನ್ನ ಪ್ರಶ್ನೆ. ಹೀಗಾಗಿ ಸೆಕ್ಷನ್ 6ಕ್ಕೆ ತಿದ್ದುಪಡಿ ತರುವಂತೆ ಕೋರಿದ್ದೇನೆ' ಎಂದರು.
ಬಿಸ್ವಾಸ್ ಅವರ ಮನವಿಯನ್ನು ಬಿಜೆಪಿ ಸ್ವಾಗತಿಸಿದೆ. ಸಿಎಎ ಜಾರಿಗೆ ತಂದಿರುವುದಕ್ಕೆ ಅಮಿತ್ಬ ಶಾ ಅವರನ್ನು ಅಭಿನಂದಿಸಿದ್ದಾರೆ. ಈ ಪತ್ರವನ್ನು ಸ್ವಾಗತಿಸುತ್ತೇನೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ವಕ್ತಾರ ಶಮಿಕ್ ಭಟ್ಟಾಚಾರ್ಯ ಹೇಳಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಕೋವಿಡ್ ಪರಿಸ್ಥಿತಿ ಮೇಲೆ ಅವಲಂಬಿತ: ಅಮಿತ್ ಶಾ
ಬಿಸ್ವಾಸ್ ಅವರು 2002ರಲ್ಲಿ ಸಿಬಿಐನ ಹೆಚ್ಚುವರಿ ನಿರ್ದೇಶಕ ಹುದ್ದೆಯಿಂದ ನಿವೃತ್ತರಾದ ಬಳಿಕ ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾಗಿದ್ದರು.