ಟಿಎಂಸಿ ನಾಯಕ ಮುಕುಲ್ ರಾಯ್ ಆಸ್ಪತ್ರೆಗೆ ದಾಖಲು
ಕೋಲ್ಕತ್ತಾ, ಸೆಪ್ಟೆಂಬರ್ 02: ತೃಣಮೂಲ ಕಾಂಗ್ರೆಸ್ನ (ಟಿಎಂಸಿ) ಹಿರಿಯ ನಾಯಕ ಮುಕುಲ್ ರಾಯ್ಗೆ ಅನಾರೋಗ್ಯ ಕಾಣಿಸಿಕೊಂಡಿದ್ದು ಈ ಹಿನ್ನೆಲೆ ಮುಕುಲ್ ರಾಯ್ ಕೋಲ್ಕತ್ತಾದ ಎಸ್ ಎಸ್ ಕೆ ಎಂ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮುಕುಲ್ ರಾಯ್ರನ್ನು ಗುರುವಾರ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮುಕುಲ್ ರಾಯ್ರನ್ನು ಸರಕಾರಿ ಎಸ್ಎಸ್ಕೆಎಂ ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭದಲ್ಲಿ ಅವರ ಜೊತೆಯಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಇತರರು ಇದ್ದರು.
ಬಿಜೆಪಿ ತೊರೆದು ಮತ್ತೆ ಟಿಎಂಸಿ ಸೇರಿದ ಮುಕುಲ್ ರಾಯ್
ತನಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆ ಮುಕುಲ್ ರಾಯ್ ತನ್ನನ್ನು ಸುತ್ತವರಿದ ಭದ್ರತಾ ಅಧಿಕಾರಿಯೊಂದಿಗೆ ಆಸ್ಪತ್ರೆಗೆ ದಾಖಲಾಗಲು ನಡೆದುಕೊಂಡು ಹೋಗುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ.
ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷವನ್ನು ತೊರೆದು ನಾಲ್ಕು ವರ್ಷಗಳ ಹಿಂದೆ ಬಿಜೆಪಿಗೆ ಸೇರ್ಪಡೆಯಾಗಿ ಬಿಜೆಪಿ ಶಾಸಕರಾಗಿದ್ದ ಮತ್ತು ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ಮುಕುಲ್ ರಾಯ್ ಕಳೆದ ಜೂನ್ ತಿಂಗಳಿನಲ್ಲಿ ಟಿಎಂಸಿಗೆ ಮತ್ತೆ ಸೇರ್ಪಡೆಯಾಗಿದ್ದರು.
ಹಿರಿಯ ಟಿಎಂಸಿ ನಾಯಕ, 67 ವರ್ಷ ವಯಸ್ಸಿನ ಮುಕುಲ್ ರಾಯ್ರ ಜುಲೈನಲ್ಲಿ ತನ್ನ ಪತ್ನಿಯ ಮರಣದ ನಂತರ ಸ್ವಲ್ಪ ಚಿಂತಿತರಾಗಿದ್ದಾರೆ ಎಂದು ಆಪ್ತರು ಹೇಳಿದ್ದಾರೆ. "ಮುಕುಲ್ ರಾಯ್ ಅವರು ತನ್ನ ಪತ್ನಿಯು ಸಾವನ್ನಪ್ಪಿದ ಬಳಿಕ ಹೆಚ್ಚು ಮೌನವಾಗಿ ಇರುತ್ತಾರೆ. ಇದು ಮುಕುಲ್ ರಾಯ್ರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ," ಎಂದು ಹೇಳಿದ್ದಾರೆ.
SSKM হসপিটাল এ ভর্তি হলেন মুকুল রায় pic.twitter.com/iRkAjoMARz
— ইন্দ্রজিৎ | Indrajit (@iindrojit) September 2, 2021
ಇನ್ನು ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಬಿಜೆಪಿಯ ಮುಕುಲ್ ರಾಯ್ ತೃಣಮೂಲ ಕಾಂಗ್ರೆಸ್ಗೆ ಮರಳುವ ಮುನ್ನ ಭಾರೀ ಚರ್ಚೆ ನಡೆದಿತ್ತು. ತೃಣಮೂಲ ಕಾಂಗ್ರೆಸ್ನ ಘರ್ ವಾಪಾಸಿ ಸಂದರ್ಭದಲ್ಲಿ ಹಲವಾರು ಮಂದಿ ಬಿಜೆಪಿ, ಕಾಂಗ್ರೆಸ್ ತೊರೆದು ಮತ್ತೆ ಟಿಎಂಸಿಗೆ ಸೇರ್ಪಡೆಯಾಗಿದ್ದರು.
ಬಿಜೆಪಿ ಮುಖಂಡ ಮುಕುಲ್ ರಾಯ್ ಪತ್ನಿ ಆಸ್ಪತ್ರೆಯಲ್ಲಿದ್ದ ಸಂದರ್ಭ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಆಸ್ಪತ್ರೆಗೆ ಭೇಟಿ ನೀಡಿರುವ ವಿಚಾರ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿತ್ತು. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡಾ ಬಿಜೆಪಿ ಮುಖಂಡ ಮುಕುಲ್ ರಾಯ್ಗೆ ಕರೆ ಮಾಡಿ ಮಾತನಾಡಿದ್ದರು. ಈ ಬೆನ್ನಲ್ಲೇ ಮುಕುಲ್ ರಾಯ್ ಬಿಜೆಪಿ ತೊರೆದು ತೃಣಮೂಲ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ.