ಚುನಾವಣೆ ಸಮೀಪದಲ್ಲೇ ಟಿಎಂಸಿಗೆ ಎದುರಾಯ್ತು ಮತ್ತೊಂದು ಹಿನ್ನಡೆ
ಕೋಲ್ಕತ್ತಾ, ಮಾರ್ಚ್ 03: ಚುನಾವಣೆಗೆ ಇನ್ನೇನು ಕೆಲವೇ ದಿನಗಳಿರುವಾಗಲೇ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ಗೆ ಮತ್ತೊಂದು ಹಿನ್ನಡೆಯಾಗಿದೆ. ಸಾಲು ಸಾಲು ಸದಸ್ಯರ ರಾಜೀನಾಮೆಗಳನ್ನು ಕಂಡಿದ್ದ ಟಿಎಂಸಿಗೆ ಮಂಗಳವಾರ ಮತ್ತೊಬ್ಬ ಸದಸ್ಯ ರಾಜೀನಾಮೆ ನೀಡಿದ್ದಾರೆ.
ತೃಣಮೂಲ ಕಾಂಗ್ರೆಸ್ನ ಶಾಸಕ ಹಾಗೂ ಅಸನ್ಸೋಲ್ ಮಾಜಿ ಮೇಯರ್ ಜಿತೇಂದ್ರ ತಿವಾರಿ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಉಪಸ್ಥಿತಿಯಲ್ಲಿ ಬಿಜೆಪಿಗೆ ಸೇರಿದ್ದಾರೆ.
ಮತದಾರ ಹೀಗೇಕೆ: ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸ ಮತ್ತು ಭವಿಷ್ಯ
ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಟಿಎಂಸಿ, ಮತ್ತೊಂದು ಸಮಸ್ಯೆ ದೂರವಾಯಿತು ಎಂದು ಹೇಳಿದೆ.
ಟಿಎಂಸಿ ನಾಯಕತ್ವದ ವಿರುದ್ಧ ಈ ಹಿಂದೆ ತಿವಾರಿ ದಂಗೆ ಎದ್ದಿದ್ದರೂ ಕಳೆದ ಡಿಸೆಂಬರ್ನಲ್ಲಿ ಬಿಜೆಪಿ ತಿವಾರಿಯವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿದ ನಂತರ ತಣ್ಣಗಾಗಿದ್ದರು. ನಂತರ ಮಂಗಳವಾರ ಶ್ರೀರಾಂಪುರದ ಹೂಗ್ಲಿ ಜಿಲ್ಲೆಯಲ್ಲಿ ಬಿಜೆಪಿ ಸೇರಿದ್ದಾರೆ.
"ರಾಜ್ಯದ ಅಭಿವೃದ್ಧಿಗಾಗಿ ನಾನು ಬಿಜೆಪಿ ಸೇರಿದ್ದೇನೆ. ಇನ್ನೂ ಪಕ್ಷಕ್ಕಾಗಿ ದುಡಿಯುವುದು ಸಾಧ್ಯವಿಲ್ಲ" ಎಂದು ತಿವಾರಿ ಹೇಳಿದ್ದಾರೆ. "ತೃಣಮೂಲ ಕಾಂಗ್ರೆಸ್ನ ಹಿರಿಯ ನಾಯಕರು ಪಕ್ಷ ತೊರೆದು ಬಿಜೆಪಿ ಸೇರುತ್ತಿರುವುದು ಟಿಎಂಸಿ ಭವಿಷ್ಯವನ್ನು ಬಿಂಬಿಸುತ್ತಿದೆ. ಈ ಮುನ್ನ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಅಸ್ತಿತ್ವವೇ ಇರಲಿಲ್ಲ. ಈಗ ನಾವು ಎಲ್ಲವನ್ನೂ ಮೀರಿ ಇಲ್ಲಿ ಬೆಳೆಯುತ್ತಿದ್ದೇವೆ" ಎಂದು ದಿಲೀಪ್ ಘೋಷ್ ಹೇಳಿಕೆ ನೀಡಿದ್ದಾರೆ.
ಎಬಿಪಿ ಸಮೀಕ್ಷೆ: ಬೆಂಗಾಳದಲ್ಲಿ ಬಿಜೆಪಿ ಏಳಿಗೆ ನಡುವೆ ಟಿಎಂಸಿಗೆ ಗೆಲುವು
ಪಶ್ಚಿಮ ಬಂಗಾಳದ 294 ವಿಧಾನಸಭೆ ಕ್ಷೇತ್ರಗಳಿಗೆ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಈ ಚುನಾವಣೆಯಲ್ಲಿ ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ನಡುವೆ ಹಣಾಹಣಿ ಏರ್ಪಟ್ಟಿದೆ.
ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಪಶ್ಚಿಮ ಬಂಗಾಳ ಭೇಟಿ ಸಂದರ್ಭ ನಡೆದ ಕಲ್ಲು ತೂರಾಟ, ಟಿಎಂಸಿ ಸದಸ್ಯರ ರಾಜೀನಾಮೆಯಂಥ ಹಲವು ಸಂಗತಿಗಳು ಈ ಎರಡು ಪಕ್ಷಗಳ ನಡುವಿನ ಸ್ಪರ್ಧೆಯನ್ನು ಹೆಚ್ಚಿಸಿವೆ. ಬಿಜೆಪಿ ಸೋಲಿಸಲು ಹಲವು ಕಾರ್ಯತಂತ್ರಗಳನ್ನು ಟಿಎಂಸಿ ಹೆಣೆಯುತ್ತಿದೆ. ಈ ಬೆನ್ನಲ್ಲೇ ಮತ್ತೊಬ್ಬ ಸದಸ್ಯ ಪಕ್ಷಕ್ಕೆ ರಾಜೀನಾಮೆ ನೀಡಿರುವುದು ಪಕ್ಷಕ್ಕೆ ಹಿನ್ನಡೆಯಾಗಿದೆ.