ಬಿಜೆಪಿ ಪರ ಪಕ್ಷಪಾತ: ಚುನಾವಣಾ ಆಯೋಗದ ವಿರುದ್ಧ ಟಿಎಂಸಿ ಆರೋಪ
ಕೋಲ್ಕತಾ, ಏಪ್ರಿಲ್ 15: ಚುನಾವಣಾ ಆಯೋಗಕ್ಕೆ ಬುಧವಾರ ಪತ್ರ ಬರೆದಿರುವ ತೃಣಮೂಲ ಕಾಂಗ್ರೆಸ್, ಚುನಾವಣಾ ಸಮಿತಿಯು ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಅದರ ನೀತಿ ಪಾಲನೆಗಳು ಶೋಚನೀಯವಾಗಿದೆ ಎಂದು ಆರೋಪಿಸಿದೆ.
ಚುನಾವಣಾ ಆಯೋಗಕ್ಕೆ ಎರಡು ಪುಟಗಳ ಪತ್ರ ಬರೆದಿರುವ ಟಿಎಂಸಿ, ಆಯೋಗವು ಟಿಎಂಸಿ ಮತ್ತು ಬಿಜೆಪಿ ನೀಡಿದ ದೂರುಗಳಲ್ಲಿ ಪಕ್ಷಪಾತಿ ನಿಲುವುಗಳನ್ನು ಪ್ರದರ್ಶಿಸುತ್ತಿದೆ ಎಂದು ದೂರಿದೆ.
ಸುಳ್ಳು ಹೇಳಿದ್ದು ಸಾಬೀತಾದರೆ ಮೋದಿ ಬಸ್ಕಿ ಹೊಡೆಯಬೇಕು; ಮಮತಾ ಬ್ಯಾನರ್ಜಿ
ಚುನಾವಣಾ ಆಯೋಗವು ಸ್ವತಂತ್ರ ಮತ್ತು ತಟಸ್ಥ ಸಮಿತಿಯಾಗಿರಬೇಕು ಎಂದು ಸಂವಿಧಾನ ಹೇಳಿದೆ. ಆದರೆ ವಿಧಾನಸಭೆ ಚುನಾವಣೆ ವೇಳೆ ಚುನಾವಣಾ ಆಯೋಗವು ಪಕ್ಷಪಾತಿ ಧೋರಣೆಯಲ್ಲಿ ವರ್ತಿಸುವುದು ಕಾಣಿಸುತ್ತಿದೆ. ಅದು ಬಿಜೆಪಿ ಪರವಾಗಿದೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ಜನರು ಟಿಎಂಸಿ ಅಭ್ಯರ್ಥಿಗಳ ಪರವಾಗಿ ಮತ ಚಲಾಯಿಸುವ ಮೂಲಕ ಚುನಾವಣಾ ಆಯೋಗದ ಇಂತಹ ಅಕ್ರಮ ಚಟುವಟಿಕೆಗಳಿಗೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಟಿಎಂಸಿ ಹೇಳಿದೆ.
ತನ್ನ ನಡೆಗಳಲ್ಲಿ ಚುನಾವಣಾ ಆಯೋಗವು ಕೊಂಚವಾದರೂ ನ್ಯಾಯೋಚಿತತೆ ಪ್ರದರ್ಶಿಸಲಿ ಎಂದು ಕೋರುತ್ತೇವೆ. ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಚುನಾವಣೆಯ ಕೊನೆಯ ನಾಲ್ಕು ಹಂತಗಳ ಮತದಾನದಲ್ಲಿಯಾದರೂ ಗುಣಮಟ್ಟದ ಕಾರ್ಯ ನಿರ್ವಹಣೆ ಮಾಡುವಂತೆ ಮನವಿ ಮಾಡುತ್ತೇವೆ ಎಂದು ತಿಳಿಸಿದೆ.
ಚುನಾವಣಾ ಪ್ರಚಾರಕ್ಕೆ ನಿಷೇಧ ವಿರೋಧಿಸಿ ಮಮತಾ ಬ್ಯಾನರ್ಜಿ ಧರಣಿ
ಬಿಜೆಪಿ ದೂರುಗಳನ್ನು ಪರಿಗಣಿಸಿರುವ ಆಯೋಗವು ಮಮತಾ ಬ್ಯಾನರ್ಜಿ ಅವರನ್ನು ಚುನಾವಣಾ ಪ್ರಚಾರದಿಂದ ಒಂದು ದಿನದ ಮಟ್ಟಿಗೆ ನಿಷೇಧಿಸಿದ್ದಲ್ಲದೆ, ನೋಟಿಸ್ಗಳನ್ನು ನೀಡಿದೆ. ಆದರೆ ಬಿಜೆಪಿಯು ನೀತಿ ಸಂಹಿತೆಗಳನ್ನು ಉಲ್ಲಂಘಿಸುತ್ತಿದೆ ಎಂದು ಟಿಎಂಸಿ ದೂರುಗಳನ್ನು ನೀಡಿದ್ದರೂ ಬಿಜೆಪಿ ನಾಯಕರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದೆ.
ತಾನು ಚುನಾವಣಾ ಭಾಷಣಗಳ ಮೇಲೆ ಗಮನ ಇರಿಸಿರುವುದಾಗಿ ಆಯೋಗ ಹೇಳಿಕೊಂಡಿದೆ. ಆದರೆ ಅಂತಹ ಗಂಭೀರ ಉಲ್ಲಂಘನೆಗಳಾದರೂ ಅದು ಕ್ರಮ ತೆಗೆದುಕೊಂಡಿಲ್ಲ. ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರನ್ನು ಕೂಡ ಮುಂದೆ ಬಾಕಿ ಇರುವ ಹಂತಗಳ ಚುನಾವಣಾ ಪ್ರಚಾರದಿಂದ ನಿರ್ಬಂಧಿಸಬೇಕು ಎಂದು ಆಗ್ರಹಿಸಿದೆ.