'ಎದುರಲ್ಲೇ ಪತಿಯನ್ನು ಕೊಂದರು', ಬಂಗಾಳ ಗಲಭೆಯ ಭೀಕರತೆ ತೆರೆದಿಟ್ಟ ಮಹಿಳೆ
ಕೋಲ್ಕತ್ತಾ, ಜೂನ್ 10: "ನನ್ನ ಪತಿಯನ್ನು ನನ್ನ ಕಣ್ಣೆದುರಲ್ಲೇ ಗುಂಡಿಕ್ಕಿ ಕೊಲ್ಲಲಾಯಿತು. ಅವರ ಹತ್ಯೆಗೆ ಟಿಎಂಸಿ ಕಾರ್ಯಕರ್ತರೇ ಕಾರಣ" ಎಂದು ಪಶ್ಚಿಮ ಬಂಗಾಳದ ಮಹಿಳೆಯೊಬ್ಬರು ಕಣ್ಣೀರು ಸುರಿಸುತ್ತ ಆ ಗಲಭೆಯ ಕರಾಳತೆಯನ್ನು ತೆರೆದಿಟ್ಟಿದ್ದಾರೆ.
"ನಮ್ಮ ಮನೆಗೆ ಸುಮಾರು 400-500 ಜನ ನುಗ್ಗುತ್ತಿದ್ದರು. ನಾನು ಅದನ್ನು ನೋಡಿ ಓಡುವುದಕ್ಕೆ ಆರಂಭಿಸಿದೆ. ಆಗಷ್ಟೇ ಮನೆಗೆ ಬರುತ್ತದ್ದ ಪತಿ ತಮ್ಮ ಗಾಡಿಯನ್ನು ನಿಲ್ಲಿಸುತ್ತಿದ್ದರು. ನಾನು ಓಡುವುದನ್ನು ಕಂಡು ಅವರೂ ಓಡುವುದಕ್ಕೆ ಆರಂಭಿಸಿದರು. ಇಬ್ಬರೂ ಓಡುತ್ತಿದ್ದೆವು. ಆದರೆ ಅಷ್ಟರಲ್ಲಿ ಗುಂಡಿನ ಸದ್ದು ಕೇಳಿತು. ತಿರುಗಿ ನೋಡಿದರೆ ಪತಿಯ ದೇಹವನ್ನು ಗುಂಡು ಸೀಳಿಕೊಂಡು ಹೋಗಿತ್ತು..." ಎಂದು ಆಕೆ ಬಿಕ್ಕಿದರು.
ಏನೂ ಆಗಿಲ್ಲ, ತಲೆಕೆಡಿಸಿಕೊಳ್ಬೇಡಿ! ಕೇಂದ್ರಕ್ಕೆ ದೀದಿ ಸರ್ಕಾರದ ಪತ್ರ
ಪಶ್ಚಿಮ ಬಂಗಾಳದಲ್ಲಿ ಲೋಕಸಭೆ ಚುನಾವನೆಯ ಫಲಿತಾಂಶದ ನಂತರ ಬಿಜೆಪಿ ಮತ್ತು ಟಿಎಂಸಿ ಸದಸ್ಯರ ನಡುವಿನ ಗಲಭೆಯ ಗಟನೆಗಳು ದಿನೇ ದಿನೇ ಹೆಚ್ಚುತ್ತಿದ್ದು, ಈ ಶನಿವಾರ ನಡೆದ ಗಲಭೆಯಲ್ಲಿ ಬಿಜೆಪಿಯ ಮೂವರು ಮತ್ತು ಟಿಎಂಸಿಯ ಓರ್ವ ಸದಸ್ಯರು ಮೃತರಾಗಿದ್ದರು.
ಘಟನೆಯ ಕುರಿತು ಸ್ಪಷ್ಟನೆ ನೀಡುವಂತೆ ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳ ಸರ್ಕಾರವನ್ನು ಕೇಳಿತ್ತು. ಅದಕ್ಕೆ ಉತ್ತರ ನೀಡಿದ ಪಶ್ಚಿಮ ಬಂಗಾಳ ಸರ್ಕಾರ, ಎಲ್ಲವೂ ಸರಿ ಇದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದಿತ್ತು.