ಕೇಂದ್ರೀಯ ಸಂಸ್ಥೆಗಳ ಕಿರುಕುಳದಿಂದ ಸಾಕಷ್ಟು ಜನರ ಬಲಿ: ದೀದಿ ಮಾತು
ಕೊಲ್ಕತ್ತಾ, ಫೆಬ್ರವರಿ 19: ಕೇಂದ್ರ ಸರ್ಕಾರ ವಿವಿಧ ಸಂಸ್ಥೆಗಳ ಒತ್ತಡವು ಸಾಕಷ್ಟು ಜೀವಗಳನ್ನು ಬಲಿಪಡೆದಿವೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಮುಂಬೈನಲ್ಲಿ ಸೋಮವಾರ ನಿಧನ ಹೊಂದಿದ್ದ ಪಕ್ಷದ ಮಾಜಿ ಸಂಸದ ತಪಸ್ ಪಾಲ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ವೇಳೆ ಅವರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಗಡಿಬಿಡಿ, ಮೋದಿ-ದೀದಿ ಸಿಡಿಮಿಡಿ
ಕೇಂದ್ರೀಯ ಸಂಸ್ಥೆಗಳ ಕಿರುಕುಳ ಹಾಗೂ ಒತ್ತಡದಿಂದಾಗಿ ಪಕ್ಷದ ಮೂವರು ನಾಯಕರು ಮೃತಪಟ್ಟಿದ್ದಾರೆ. ಮೊದಲು ಪಕ್ಷದ ಮಾಜಿ ಸಂಸದ ಸುಲ್ತಾನ್ ಅಹಮದ್, ಪಕ್ಷದ ಸಂಸದ ಪ್ರಸೂನ್ ಬ್ಯಾನರ್ಜಿ ಅವರ ಪತ್ನಿ, ಈಗ ತಪಸ್ ಪಾಲ್ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.
ತಪಸ್ ಪಾಲ್ ಪಶ್ಚಿಮ ಬಂಗಾಳದ ನಟರೂ ಆಗಿದ್ದು, ರೋಸ್ ವ್ಯಾಲಿ ಚಿಟ್ ಫಂಡ್ ನ ಪ್ರಮುಖ ಆರೋಪಿಯಾಗಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಎದುರಿಸುತ್ತಿದ್ದ ಪಾಲ್ ಒಂದು ವರ್ಷಗಳ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದರು.
ತಪಸ್ ಪಾಲ್ ಸಹ ರೋಸ್ ವ್ಯಾಲಿ ಸಮೂಹ ಸಂಸ್ಥೆಗಳ ಬ್ರಾಂಡ್ ಅಂಬಾಸಿಡರ್ ಆಗಿದ್ದರು, ಇದೇ ತಪಸ್ ಪಾಲ್ ಅವರು ಮಾಡಿದ್ದ ದೊಡ್ಡ ತಪ್ಪಾಗಿದೆಯೇ ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.
ಹಲವು ಜನರನ್ನು ಕಾರಣವಿಲ್ಲದೆ ಅನಗತ್ಯವಾಗಿ ಬಂಧಿಸಿ ಜೈಲಿನಲ್ಲಿರಿಸಲಾಗಿದೆ, ಆದರೆ ಅವರು ಏನು ಅಪರಾಧ ಮಾಡಿದ್ದಾರೆ ಅಥವಾ ಅಪರಾಧದಲ್ಲಿ ಅವರು ವಹಿಸಿದ್ದ ಪಾತ್ರ ಏನು ಎಂಬುದನ್ನು ಸಾಬೀತು ಪಡಿಸಲು ಕೇಂದ್ರೀಯ ಸಂಸ್ಥೆಗಳಿಂದ ಈವರೆಗೆ ಸಾಧ್ಯವಾಗಿಲ್ಲ.