ಸುವೇಂದು ಅಧಿಕಾರಿ ಮುನಿಸು ಶಮನ, ಮತ್ತೆ ಟಿಎಂಸಿಗೆ ವಾಪಸ್
ಕೋಲ್ಕತಾ, ಡಿ. 2: ಪಶ್ಚಿಮ ಬಂಗಾಳದ ನೀರಾವರಿ, ಸಾರಿಗೆ ಸಚಿವ ಸ್ಥಾನಕ್ಕೆ ಸುವೇಂದು ಅಧಿಕಾರಿ ಇತ್ತೀಚೆಗೆ ರಾಜೀನಾಮೆ ನೀಡಿ, ಬಂಡಾಯ ಬಾವುಟ ಹಾರಿಸಿದ್ದರು. ಈಗ ಸಿಎಂ ಮಮತಾ ಬ್ಯಾನರ್ಜಿ ಕಳಿಸಿದ್ದ ಬಂಡಾಯ ಶಮನ ನಿಯೋಗ ತನ್ನ ಕಾರ್ಯ ಪೂರೈಸಿದ್ದು, ಸುವೇಂದು ಅವರು ಟಿಎಂಸಿಯಲ್ಲೇ ಉಳಿಯುವುದು ಖಚಿತವಾಗಿದೆ.
ಹೂಗ್ಲಿ ನದಿ ಸೇತುವೆ ಕಮಿಷನರ್ಸ್(HRBC)ಚೇಮರ್ನ್ ಸ್ಥಾನವನ್ನು ಅಧಿಕಾರಿ ತೊರೆದಿದ್ದರು. ಆ ಸ್ಥಾನಕ್ಕೆ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರನ್ನು ತಕ್ಷಣವೇ ನೇಮಿಸಲಾಗಿತ್ತು.
ಟಿಎಂಸಿ ತೊರೆದು ಬಿಜೆಪಿ ಸೇರಿದ ಶಾಸಕ ಮಿಹಿರ್ ಗೋಸ್ವಾಮಿ
ರಾಜೀನಾಮೆ ಸಲ್ಲಿಸುವುದಕ್ಕೂ ಮುನ್ನವೇ ಅಧಿಕಾರಿ ಅವರು ಟಿಎಂಸಿ ತೊರೆದು ಬಿಜೆಪಿಯತ್ತ ಮುಖ ಮಾಡಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಆಯ್ಕೆಯ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಗಾಳಿ ಸುದ್ದಿ ಹಬ್ಬಿತ್ತು. ರಾಜೀನಾಮೆ ನೀಡಿರುವುದನ್ನು ಟಿಎಂಸಿ ತೊರೆಯುವ ಹಾದಿಯಲ್ಲಿ ಮೊದಲ ಹೆಜ್ಜೆಎಂದು ಆಪ್ತರು ಬೇರೆ ಪ್ರತಿಕ್ರಿಯಿಸಿದ್ದರು. ಆದರೆ, ಮಮತಾ ಸಂಧಾನ ಸಫಲವಾಗಿದೆ.
ಹಿರಿಯ ಸಚಿವರನ್ನು ಉಳಿಸಿಕೊಂಡ ಮಮತಾ ಬ್ಯಾನರ್ಜಿ
ತೃಣಮೂಲ ಕಾಂಗ್ರೆಸ್ ನಿಂದ ಕಳೆದ ವಾರ ಹೊರಕ್ಕೆ ಕಾಲಿಟ್ಟಿದ್ದ ರೆಬೆಲ್ ಸಚಿವ ಸುವೇಂದು ಅಧಿಕಾರಿ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಸಿಎಂ ಮಮತಾ ಬ್ಯಾನರ್ಜಿ ತಮ್ಮ ಆಪ್ತರ ನಿಯೋಗವನ್ನು ಸಂಧಾನಕ್ಕಾಗಿ ಕಳಿಸಿದ್ದರು. ಸುಮಾರು ಎರಡು ಗಂಟೆಗಳ ಕಾಲ ಗೌಪ್ಯವಾಗಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಸುವೇಂದು ಅವರ ಮನವೊಲಿಸುವುದರಲ್ಲಿ ಅಭಿಶೇಕ್ ಬ್ಯಾನರ್ಜಿ ಸಫಲರಾಗಿದ್ದಾರೆ.
ಪಕ್ಷದ ನಂ.2 ಅಭಿಶೇಕ್ ಬ್ಯಾನರ್ಜಿಯಿಂದ ಸಭೆ
ಮಮತಾ ಬ್ಯಾನರ್ಜಿ ಅವರ ಸಂಬಂಧಿ, ಪಕ್ಷದ ನಂ.2 ಅಭಿಶೇಕ್ ಬ್ಯಾನರ್ಜಿ ಅವರ ನೇತೃತ್ವದಲ್ಲಿ ಉತ್ತರ ಕೋಲ್ಕತ್ತಾದ ಕಚೇರಿಯಲ್ಲಿ ಸಂಧಾನ ಸಭೆ ನಡೆಸಲಾಯಿತು. ಸಭೆಯಲ್ಲಿ ಲೋಕಸಭಾ ನಾಯಕ ಸುದೀಪ್ ಬಂಡೋಪಾಧ್ಯಾಯ್, ಹಿರಿಯ ಸಂಸದ ಸೌಗತ ರಾಯ್ ಹಾಗೂ ರಾಜಕೀಯ ತಜ್ಞ ಪ್ರಶಾಂತ್ ಕಿಶೋರ್ ಉಪಸ್ಥಿತರಿದ್ದರು. ಸಭೆ ನಂತರ ಮಾತನಾಡಿದ ಸಂಸದ ರಾಯ್, ಸುವೇಂದು ಅವರಿಗೆ ತಮ್ಮ ತಪ್ಪು ನಡೆ ಅರಿವಾಗಿದೆ, ಟಿಎಂಸಿಯಲ್ಲೇ ಉಳಿದುಕೊಳ್ಳಲಿದ್ದಾರೆ. ಈ ಬಗ್ಗೆ ಇದ್ದ ಗೊಂದಲಗಳು ಪರಿಹಾರವಾಗಿದೆ ಎಂದರು.
ಸಾರಿಗೆ, ನೀರಾವರಿ ಹಾಗೂ ಜಲ ಸಂಪನ್ಮೂಲ ಖಾತೆ ಸಚಿವ
ಸಾರಿಗೆ, ನೀರಾವರಿ ಹಾಗೂ ಜಲ ಸಂಪನ್ಮೂಲ ಖಾತೆ ಸಚಿವರಾಗಿದ್ದ ಅಧಿಕಾರಿ ಅವರು ಕಳೆದ ಕೆಲ ತಿಂಗಳುಗಳಿಂದ ಟಿಎಂಸಿ ಚಟುವಟಿಕೆಗಳಿಂದ ದೂರವೇ ಉಳಿದಿದ್ದರು. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರೂ ಪಕ್ಷದ ಬ್ಯಾನರ್ ನಡಿ ಕಾಣಿಸಿಕೊಂಡಿಲ್ಲ. ಅಧಿಕಾರಿ ಪಾಲ್ಗೊಂಡಿದ್ದ ಸಭೆ, ಸಮಾರಂಭಗಳಲ್ಲಿ ಅಮ್ರಾ ದಾದರ್ ಅನುಗಾಮಿ (ದಾದಾನ ಅನುಯಾಯಿಗಳು) ಎಂಬ ಬ್ಯಾನರ್ ಕಾಣಿಸಿಕೊಂಡಿದ್ದರು. ಪಕ್ಷದ ವ್ಯವಸ್ಥೆ ಬಗ್ಗೆ ಅಪಸ್ವರ ಎತ್ತಿ, ಹೊರ ನಡೆಯಲು ಮುಂದಾಗಿದ್ದರು.
ಬಿಜೆಪಿ ಸೇರ್ಪಡೆಗೊಂಡ ಮಿಹಿರ್ ಗೋಸ್ವಾಮಿ
ಕೂಚ್ ಬೆಹಾರ್ ದಕ್ಷಿಣ ಕ್ಷೇತ್ರದ ಶಾಸಕ ಮಿಹಿರ್ ಗೋಸ್ವಾಮಿ ಪಕ್ಷವನ್ನು ತೊರೆದು ಬಿಜೆಪಿ ಸೇರಿಕೊಂಡಿದ್ದಾರೆ. ಕಳೆದ ಹತ್ತು ವರ್ಷಗಳಿಂದ ನಿರ್ಲಕ್ಷ್ಯಕ್ಕೊಳಗಾಗಿ, ಅಪಮಾನಕ್ಕೊಳಗಾಗಿದ್ದೇನೆ, 20 ವರ್ಷಗಳ ಹಿಂದೆ ನಾನು ಸೇರಿದಾಗ ಇದ್ದ ಪಕ್ಷದ ಸಿದ್ಧಾಂತ ಈಗ ಕಾಣುತ್ತಿಲ್ಲ. ಪಕ್ಷದ ಹಿರಿಯ ಮುಖಂಡರು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ನನಗೆ ಇನ್ನು ಈ ಪಕ್ಷದಲ್ಲಿ ಸ್ಥಾನವಿಲ್ಲ. ನಾನು ಎಲ್ಲಾ ಬಂಧಗಳನ್ನು ಕಳಚಿಕೊಳ್ಳುತ್ತಿದ್ದೇನೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಗೋಸ್ವಾಮಿ ಬರೆದುಕೊಂಡಿದ್ದರು.
ಎರಡು ಬಾರಿ ಶಾಸಕ ಗೋಸ್ವಾಮಿ ತಾವು ರಾಜೀನಾಮೆ ನೀಡಲು ಪಕ್ಷದ ರಾಜತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಐ ಪ್ಯಾಕ್ ಮೂಗು ತೂರಿಸಿದ್ದು ಕಾರಣ ಎಂದಿದ್ದರು.