'ಮಮತಾರನ್ನು 50 ಸಾವಿರ ಮತಗಳಿಂದ ಸೋಲಿಸದಿದ್ದರೆ ರಾಜಕೀಯ ತ್ಯಜಿಸುತ್ತೇನೆ'
ಕೋಲ್ಕತಾ, ಜನವರಿ 18: ತಮ್ಮ ಕ್ಷೇತ್ರವಾದ ನಂದಿಗ್ರಾಮ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಬಿಜೆಪಿಗೆ ಹೊಸದಾಗಿ ಸೇರ್ಪಡೆಗೊಂಡಿರುವ ಸುವೇಂದು ಅಧಿಕಾರಿ ತಿರುಗೇಟು ನೀಡಿದ್ದಾರೆ. ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ತಾವು ನಂದಿಗ್ರಾಮದಿಂದಲೇ ಸ್ಪರ್ಧಿಸಲಿದ್ದು, ತಮ್ಮ ಮಾಜಿ ರಾಜಕೀಯ ಮುಖ್ಯಸ್ಥೆಯ ಸವಾಲನ್ನು ಎದುರಿಸಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ.
ಕೋಲ್ಕತಾದಲ್ಲಿ ಸೋಮವಾರ ಸಮಾವೇಶದಲ್ಲಿ ಮಾತನಾಡಿದ ಸುವೇಂದು ಅಧಿಕಾರಿ, ಮಮತಾ ವಿರುದ್ಧ ಹರಿಹಾಯ್ದರು. 'ನಂದಿಗ್ರಾಮ ಕ್ಷೇತ್ರದಲ್ಲಿ ಅವರನ್ನು (ಮಮತಾ ಬ್ಯಾನರ್ಜಿ) ಅರ್ಧ ಲಕ್ಷದಷ್ಟು ಮತಗಳಿಂದ ಸೋಲಿಸದೆ ಹೋದರೆ ರಾಜಕೀಯ ತ್ಯಜಿಸುತ್ತೇನೆ' ಎಂದು ಹೇಳಿದ್ದಾರೆ.
ಬಂಗಾಳ ಚುನಾವಣೆ: ನಂದಿಗ್ರಾಮದಿಂದ ಸ್ಪರ್ಧಿಸಲು ಸಜ್ಜಾದ ಮಮತಾ
ತಮ್ಮ ಪ್ರಬಲ ನೆಲೆಯಾದ ನಂದಿಗ್ರಾಮದಲ್ಲಿಯೇ ತಾವು ಕಣಕ್ಕಿಳಿಯುವುದಾಗಿ ಮಮತಾ ಬ್ಯಾನರ್ಜಿ ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಸುವೇಂದು ಈ ಹೇಳಿಕೆ ನೀಡಿದ್ದಾರೆ.
ತೃಣಮೂಲ ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದ ಸುವೇಂದು, 'ಟಿಎಂಸಿ ಈಗ ಪಕ್ಷವಾಗಿ ಉಳಿದಿಲ್ಲ. ಅದು ಖಾಸಗಿ ನಿಯಮಿತ ಕಂಪೆನಿಯಾಗಿದೆ' ಎಂದು ಲೇವಡಿ ಮಾಡಿದ್ದಾರೆ. ಮುಂದೆ ಓದಿ.
ಬಿಜೆಪಿ ಮುನ್ನಡೆ ಹೊಂದಿದೆ
ಮಮತಾ ಬ್ಯಾನರ್ಜಿ ಅವರ ರಾಜಕೀಯ ಕುಶಲತೆಯನ್ನು ಪ್ರಶ್ನಿಸಿದ ಅವರು, ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಗೆಲುವಿಗಾಗಿ ಬಿಹಾರದಿಂದ ರಾಜಕೀಯ ನಿಪುಣರನ್ನು (ಪ್ರಶಾಂತ್ ಕಿಶೋರ್) ಬಾಡಿಗೆಗೆ ಪಡೆದುಕೊಳ್ಳುತ್ತಿದೆ. ಹೀಗಾಗಿ ರಾಜ್ಯದಲ್ಲಿ ಬಿಜೆಪಿ ಸಾಕಷ್ಟು ಮುನ್ನಡೆ ಹೊಂದಿದೆ ಎಂಬುದನ್ನು ಇದು ಸಾಬೀತುಪಡಿಸಿದೆ ಎಂದು ಹೇಳಿದ್ದಾರೆ.
ಮಮತಾಗೆ ವಿಶ್ವಾಸವಿಲ್ಲ
ತಮ್ಮ ಸ್ವಕ್ಷೇತ್ರ ಭವಾನಿಪುರ ಕ್ಷೇತ್ರದ ಜತೆಗೆ ನಂದಿಗ್ರಾಮದಲ್ಲಿಯೂ ಸ್ಪರ್ಧಿಸುವುದಾಗಿ ಮಮತಾ ಬ್ಯಾನರ್ಜಿ ನಿರ್ಧರಿಸಿರುವುದನ್ನು ಟೀಕಿಸಿದ ಬಂಗಾಳ ಬಿಜೆಪಿ ಘಟಕದ ಅಧ್ಯಕ್ಷ ದಿಲೀಪ್ ಘೋಷ್, 'ಭವಾನಿಪುರ ಕ್ಷೇತ್ರದಲ್ಲಿ ಗೆಲುವು ಕಾಣುವ ಭರವಸೆ ಇಲ್ಲದ ಕಾರಣ ಅವರು ನಂದಿಗ್ರಾಮದ ನೆಲವನ್ನೂ ಪರೀಕ್ಷೆ ಮಾಡುತ್ತಿದ್ದಾರೆ' ಎಂದಿದ್ದಾರೆ.
ಪಶ್ಚಿಮ ಬಂಗಾಳ; ಸಿಎಂ ಕುರಿತು ಬಿಜೆಪಿ ಸಂಸದನ ಹೇಳಿಕೆಗೆ ಸಿಟ್ಟಾದ ನಾಯಕರು
ಸಚಿವರಿಗೆ ಕ್ಷೇತ್ರವೇ ಸಿಗುವುದಿಲ್ಲ
'ತೃಣಮೂಲ ಕಾಂಗ್ರೆಸ್ ಸಚಿವರು ಸುರಕ್ಷಿತ ಕ್ಷೇತ್ರಗಳನ್ನು ಹುಡುಕುತ್ತಿದ್ದಾರೆ. ಅವರು ಎಲ್ಲಿಯೇ ಹೋದರೂ ಅವರಿಗೆ ಯಾವುದೂ ಸರಿಯಾಗಿ ಸಿಗುವುದಿಲ್ಲ' ಎಂದು ವ್ಯಂಗ್ಯವಾಡಿದ್ದಾರೆ. ಮಮತಾ ವಿರುದ್ಧ ಸಿಡಿದೆದ್ದಿದ್ದ ಸುವೇಂದು ಅಧಿಕಾರಿ, ಟಿಎಂಸಿ ತೊರೆದು ಇತ್ತೀಚೆಗಷ್ಟೇ ಬಿಜೆಪಿ ಸೇರ್ಪಡೆಯಾಗಿದ್ದರು. ಈಗ ಮಮತಾ ಅವರಿಂದಲೇ ನೇರ ಸ್ಪರ್ಧೆ ಎದುರಿಸುವಂತಾಗಿದೆ.
ನಂದಿಗ್ರಾಮ ಅದೃಷ್ಟತಾಣ
'ನಂದಿಗ್ರಾಮ ನನ್ನ ಅದೃಷ್ಟತಾಣ, ನಾನು ನಂದಿಗ್ರಾಮದಿಂದಲೇ ಸ್ಪರ್ಧಿಸುತ್ತೇನೆ. ಇದಲ್ಲದೆ ಕೋಲ್ಕತಾದ ಭವಾನಿಪುರ್ ಕ್ಷೇತ್ರದಿಂದಲೂ ಸ್ಪರ್ಧಿಸುವ ಸಾಧ್ಯತೆಯಿದೆ. ಆದರೆ, ಮೊದಲ ಆಯ್ಕೆ ನಂದಿಗ್ರಾಮ' ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಮಮತಾಗೆ ಭಾರೀ ಹಿನ್ನಡೆ: ಖ್ಯಾತ ಜ್ಯೋತಿಷಿಯ ಭವಿಷ್ಯ