ಗೆಲ್ಲಲು ಸಹಾಯ ಮಾಡುವಂತೆ ಎದುರಾಳಿ ಸುವೇಂದು ಅಧಿಕಾರಿ ಆಪ್ತನಿಗೆ ಮಮತಾ ಮನವಿ!
ಕೋಲ್ಕತಾ, ಮಾರ್ಚ್ 27: ನಂದಿಗ್ರಾಮ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ತಮ್ಮ ಮಾಜಿ ಸಹೋದ್ಯೋಗಿ ಸುವೇಂದು ಅಧಿಕಾರಿಯನ್ನು ಸೋಲಿಸಲು ತಮಗೆ ಸಹಾಯ ಮಾಡುವಂತೆ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಮನವಿ ಮಾಡಿದ್ದರು ಎಂದು ಸುವೇಂದು ಅಧಿಕಾರಿ ಅವರ ಆಪ್ತ ಮತ್ತು ಬಿಜೆಪಿ ಮುಖಂಡ ಪ್ರಳಯ್ ಪಾಲ್ ತಿಳಿಸಿದ್ದಾರೆ.
ಶನಿವಾರ ಬೆಳಿಗ್ಗೆ ಬಿಜೆಪಿ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಪ್ರಳಯ್ ಪಾಲ್ ಅವರು ನಂದಿಗ್ರಾಮದಲ್ಲಿ ತಮ್ಮ ಪರ ಹಾಗೂ ಟಿಎಂಸಿಗಾಗಿ ಪ್ರಚಾರ ನಡೆಸುವಂತೆ ಮಮತಾ ಬ್ಯಾನರ್ಜಿ ತಮಗೆ ಕರೆ ಮಾಡಿದ್ದಾಗಿ ತಿಳಿಸಿದ್ದಾರೆ. ಈ ಆಡಿಯೋದಲ್ಲಿರುವ ಧ್ವನಿಯನ್ನು ಖಚಿತಪಡಿಸಲಾಗುವುದಿಲ್ಲ. ಈ ಧ್ವನಿ ಮಮತಾ ಬ್ಯಾನರ್ಜಿ ಅವರದ್ದೇ ಎನ್ನುವುದಕ್ಕೆ ಪುರಾವೆಗಳಿಲ್ಲ ಎಂದು ಟಿಎಂಸಿ ಹೇಳಿದೆ.
ಮಹಿಳೆಯರು ತಮಗೆ ಬೇಕೆಂದ ರೀತಿ ಸೀರೆ ಉಡುತ್ತಾರೆ, ನಿಮಗೇನು: ಟಿಎಂಸಿ
'ಆಕೆ ತಮಗಾಗಿ ನಾನು ಕೆಲಸ ಮಾಡುವಂತೆ ಮತ್ತು ಟಿಎಂಸಿಗೆ ಮರಳುವುದನ್ನು ಬಯಸಿದ್ದರು. ಆದರೆ ನಾನು ಸುವೇಂದು ಅಧಿಕಾರಿ ಮತ್ತು ಅಧಿಕಾರಿ ಕುಟುಂಬದೊಂದಿಗೆ ಬಹಳ ಸಮಯದಿಂದ ನಂಟು ಹೊಂದಿದ್ದೇನೆ. ನಾನು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದೇನೆ' ಎಂದು ಪ್ರಳಯ್ ಪಾಲ್ ತಿಳಿಸಿದ್ದಾರೆ.
'ಎಡಪಕ್ಷಗಳ ಆಡಳಿತವಿದ್ದಾಗ ನಂದಿಗ್ರಾಮದ ಜನರಿಗೆ ಸಿಪಿಎಂ ಕಿರುಕುಳ ನೀಡುತ್ತಿತ್ತು. ನಮಗಾಗಿ ನಿಂತವರು ಅಧಿಕಾರಿ ಕುಟುಂಬ. ನಾನು ಅವರ ವಿರುದ್ಧ ಎಂದಿಗೂ ಹೋಗುವುದಿಲ್ಲ ಮತ್ತು ಅಂತಹ ಧೈರ್ಯ ಕೂಡ ಮಾಡಲಾರೆ' ಎಂದಿದ್ದಾರೆ.
ಅಲ್ಪಸಂಖ್ಯಾತರ ಮತ ಕಬಳಿಸಲು ಬೇರೆ ಪಕ್ಷಕ್ಕೆ ಬಿಜೆಪಿ ಬೆಂಬಲ; ಮಮತಾ
'ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮದ ಬಿಜೆಪಿ ಉಪಾಧ್ಯಕ್ಷ ಪ್ರಳಯ್ ಪಾಲ್ ಅವರಿಗೆ ಕರೆ ಮಾಡಿ ಸಹಾಯಕ್ಕಾಗಿ ಅಂಗಲಾಚಿದ್ದಾರೆ! ಟಿಎಂಸಿಯಲ್ಲಿ ತಮ್ಮನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗಿತ್ತು ಮತ್ತು ತಾವು ಈ ಕುಟುಂಬದೊಂದಿಗೆ ಇದ್ದು ಬಿಜೆಪಿಗೆ ದ್ರೋಹ ಮಾಡಲಾಗದು ಎಂದಿದ್ದಾರೆ. ಪಿಶಿ ಖಂಡಿತವಾಗಿಯೂ ನಂದಿಗ್ರಾಮದಲ್ಲಿ ಸೋಲುತ್ತಿದ್ದಾರೆ ಮತ್ತು ಟಿಎಂಸಿ ಬಂಗಾಳದಲ್ಲಿ ಸೋಲುತ್ತಿದೆ' ಎಂದು ಬಿಜೆಪಿ ಮುಖಂಡ ಅಮಿತ್ ಮಾಳವೀಯ ಹೇಳಿದ್ದಾರೆ.