ಕೊಲ್ಕತ್ತಾದ 'ಬಿರ್ಯಾನಿ ಬ್ರದರ್ಸ್' ಅಪಘಾತದ ಕತೆಗೆ ರೋಚಕ ಟ್ವಿಸ್ಟ್
ಕೊಲ್ಕತ್ತಾ, ಆಗಸ್ಟ್ 22: ಕಳೆದ ನಾಲ್ಕು ದಿನಗಳ ಹಿಂದೆ ಕೊಲ್ಕತ್ತಾದಲ್ಲಿ ನಡೆದ ಅಪಘಾತ ಪ್ರಕರಣವೊಂದಕ್ಕೆ ರೋಚಕ ತಿರುವು ಲಭಿಸಿದೆ.
ಅಪಘಾತಕ್ಕೆ ಕಾರಣವಾದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ತಾನೇ ಅಪರಾಧ ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದ. ಆದರೆ ವಿಚಾರಣೆಯ ವೇಳೆ ಆರೋಪಿ ಅಪರಾಧ ಎಸಗಿಲ್ಲ, ಬದಲಾಗಿ ತನ್ನ ತಮ್ಮನನ್ನು ಕಾಪಾಡುವ ಸಲುವಾಗಿ ತಪ್ಪನ್ನು ತನ್ನ ಮೇಲೆ ಹಾಕಿಕೊಂಡಿದ್ದಾನೆ ಎಂಬುದು ಪೊಲೀಸರಿಗೆ ತಿಳಿದಿದೆ. ಈ ಮೂಲಕ ಪ್ರಕರಣ ಅನಿರೀಕ್ಷಿತ ತಿರುವು ಪಡೆದಿದೆ.
ಐವರ ಸಾಮೂಹಿಕ ಆತ್ಮಹತ್ಯೆ ಪ್ರಕರಣ: ಸಾವಿನ ಸುತ್ತ ಅನುಮಾನಗಳ ಹುತ್ತ
ರಾಘಿಬ್ ಪರ್ವೇಜ್ ಮತ್ತು ಅರ್ಸಾಲಾನ್ ಪರ್ವೇಜ್ ಎಂಬ ಇಬ್ಬರು ಸಹೋದರರು ಕೋಲ್ಕತ್ತದ ಶ್ರೀಮಂತ ಮನೆತನಕ್ಕೆ ಸೇರಿದವರು. ಇಲ್ಲಿನ ಪ್ರಮುಖ ಬಿರ್ಯಾನಿ ಚೈನ್ ಹೊಟೇಲ್ ವೊಂದರ ಮಾಲೀಕರು ಎಂಬುದು ವಿಚಾರಣೆಯ ವೇಳೆ ತಿಳಿದುಬಂದಿದೆ.
ನಾಲ್ಕು ದಿನಗಳ ಹಿಂದೆ ಕೊಲ್ಕತ್ತಾದಲ್ಲಿ ವೇಗವಾಗಿ ಬಂದ ಜಾಗ್ವಾರ್ ಕಾರೊಂದು ಮರ್ಸಿಡಝ್ ಕಾರಿಗೆ ಗುದ್ದಿದ್ದ ಪರಿಣಾಮ ಇಬ್ಬರು ಮೃತರಾಗಿದ್ದರೆ, ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ಮೃತರಿಬ್ಬರೂ ಬಾಂಗ್ಲಾದೇಶೀಯರು ಎಂಬುದು ಪತ್ತೆಯಾಗಿತ್ತು.
ಘಟನೆಯ ಸಂದರ್ಭದಲ್ಲಿ ತಾನೇ ಕಾರು ಚಲಾಯಿಸುತ್ತಿದ್ದೆ ಎಂದು ಒಪ್ಪಿಕೊಂಡ ಅರ್ಸಾಲಾನ್ ಪರ್ವೇಜ್ ನನ್ನು ಪೊಲೀಸರು ಬಂಧಿಸಿದ್ದರು. ಆದರೆ ಅಂದು ಕಾರು ಓಡಿಸುತ್ತಿದ್ದುದು ಅಸ್ರಾಲನ್ ನ ಸಹೋದರ ರಾಘಿಬ್ ಪರ್ವೇಜ್ ಎಂಬುದು ವಿಚಾರಣೆಯ ವೇಳೆ ಸಾಬೀತಾಗಿದೆ. ನಿಜವಾದ ಅಪರಾಧಿ ರಾಘಿಬ್ ಈ ಘಟನೆಯ ನಂತರ ದುಬೈಗೆ ಹಾರಿದ್ದ. ಆದರೆ ಸಿಸಿಟಿವಿ ಕ್ಯಾಮರಾ ಮತ್ತಿತರ ಸಾಕ್ಷ್ಯಗಳನ್ನು ಪರಿಶೀಲಿಸಿದ ಪೊಲೀಸರು ಕೂಲಂಕಷವಾಗಿ ಪರಿಶೀಲಿಸಿದಾಗ ಅರ್ಸಾಲಾನ್ ಅಪರಾಧಿಯಲ್ಲ, ಆತನ ಸಹೋದರ ರಾಘಿಬ್ ಅಪರಾಧಿ ಎಂಬುದು ದೃಢವಾಗಿದೆ. ದುಬೈನಿಂದ ವಾಪಸ್ ಬಂದಿದ್ದ ರಾಘಿಬ್ ನನ್ನೂ ಪೊಲೀಸರು ಬಂಧಿಸಿದ್ದಾರೆ.
ಮ್ಯಾಟ್ರಿಮೊನಿ ಮೂಲಕ ತ್ರಿಬಲ್ ಆಕ್ಟಿಂಗ್ ಮಾಡುತ್ತಿದ್ದ ಯುವತಿ ಬಂಧನ
ಇಂಥ ಭೀಕರ ಅಪಘಾತವಾದರೂ ಅರ್ಸಾಲಾನ್ ದೇಹದಲ್ಲಿ ಒಂದೂ ಗಾಯವಾಗದಿರುವುದನ್ನು ಕಂಡ ಪೊಲೀಸರು ಅನುಮಾನ ಬಂದು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ.