ಬಿಜೆಪಿ ತಡೆಯುವುದಷ್ಟೇ ನಮ್ಮ ಆದ್ಯತೆ; ತೃಣಮೂಲ ಕಾಂಗ್ರೆಸ್ಗೆ ಆರ್ಜೆಡಿ ಬೆಂಬಲ ಘೋಷಣೆ
ಕೋಲ್ಕತ್ತಾ, ಮಾರ್ಚ್ 01: ಮಾರ್ಚ್ 27ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಆಡಳಿತ ಸರ್ಕಾರ ತೃಣಮೂಲ ಕಾಂಗ್ರೆಸ್ಗೆ ತಮ್ಮ ಬೆಂಬಲ ನೀಡುವುದಾಗಿ ಆರ್ಜೆಡಿ ಮುಖಂಡ ತೇಜಸ್ವಿ ಪ್ರಸಾದ್ ಯಾದವ್ ಸೋಮವಾರ ಘೋಷಿಸಿದ್ದಾರೆ.
ಇದೇ ಮಾರ್ಚ್ 27ರಂದು ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿರುವುದಾಗಿ ಚುನಾವಣಾ ಆಯೋಗ ಶುಕ್ರವಾರ ಘೋಷಿಸಿದೆ. ಈ ಬೆನ್ನಲ್ಲೇ ರಾಜ್ಯದಲ್ಲಿ ಚುನಾವಣಾ ಪ್ರಚಾರ ಇನ್ನಷ್ಟು ಚುರುಕುಗೊಂಡಿದೆ. ಈ ನಡುವೆ ಬಿಹಾರ ಆರ್ಜೆಡಿ ಮುಖಂಡ ತೇಜಸ್ವಿ ಯಾದವ್ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಭೇಟಿ ಮಾಡಿದ್ದು, ಸೋಮವಾರದಂದು ಚುನಾವಣಾ ಪೂರ್ವ ಮೈತ್ರಿ ಕುರಿತು ಚರ್ಚೆ ನಡೆಸಿದ್ದಾರೆ. ಮುಂದೆ ಓದಿ...
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ; ತೃಣಮೂಲಕ್ಕೆ ಬಲ ತುಂಬಲು ಆರ್ಜೆಡಿ ಜೊತೆ ಮೈತ್ರಿ?
ಮಮತಾ ಬ್ಯಾನರ್ಜಿಗೆ ನಮ್ಮ ಬೆಂಬಲ; ತೇಜಸ್ವಿ
ಚರ್ಚೆ ನಂತರ ಮಾತನಾಡಿರುವ ತೇಜಸ್ವಿ ಯಾದವ್, "ನಾವು ಮಮತಾ ಬ್ಯಾನರ್ಜಿ ಅವರಿಗೆ ಅವಶ್ಯಕವಿದ್ದಲ್ಲೆಲ್ಲಾ ಬೆಂಬಲ ನೀಡಲು ಸಿದ್ಧರಿದ್ದೇವೆ. ಬಿಜೆಪಿ ಗೆಲುವನ್ನು ತಡೆಯುವುದಷ್ಟೆ ನಮ್ಮ ಆದ್ಯತೆ. ಈ ದೇಶವನ್ನು ನಾಶಪಡಿಸಲು ಹೊರಟವರಿಂದ ಈ ದೇಶವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ" ಎಂದು ಹೇಳಿದ್ದಾರೆ. ಈ ಚರ್ಚೆಯಲ್ಲಿ ಟಿಎಂಸಿ ಮುಖಂಡ ಹಾಗೂ ನಗರಾಭಿವೃದ್ಧಿ ಸಚಿವ ಫಿರಾದ್ ಹಕೀಮ್ ಅವರೂ ಭಾಗಿಯಾಗಿದ್ದರು.
ತೃಣಮೂಲ ಕಾಂಗ್ರೆಸ್ಗೆ ಆರ್ಜೆಡಿ ಬಲ
"ನಮ್ಮ ಸಂಸ್ಕೃತಿ, ಪರಂಪರೆ, ಭಾಷೆ ಹಾಗೂ ದೇಶದ ಸಾಹಿತ್ಯವನ್ನು ಕಾಪಾಡಲು ಏನೇನು ಕಾರ್ಯದ ಅವಶ್ಯಕತೆಯೋ ಅವೆಲ್ಲವನ್ನೂ ಮಾಡುತ್ತೇವೆ. ಇದಕ್ಕೆ ನಮ್ಮ ಬೆಂಬಲ ಇದ್ದೇ ಇದೆ" ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ. ಈ ಮೂಲಕ ತನ್ನ ಪ್ರಬಲ ಸ್ಪರ್ಧಿ ಬಿಜೆಪಿ ವಿರುದ್ಧ ಸೆಣಸಾಡಲು ತೃಣಮೂಲ ಕಾಂಗ್ರೆಸ್ ಆರ್ಜೆಡಿ ಬಲವನ್ನೂ ಒಟ್ಟುಗೂಡಿಸಿಕೊಂಡಿದೆ.
"ಧೈರ್ಯಕ್ಕೆ ಬೆಂಬಲ ನೀಡುವುದು ದೊಡ್ಡ ವಿಷಯ"
ತೇಜಸ್ವಿ ಯಾದವ್ ಬೆಂಬಲ ಘೋಷಣೆಗೆ ಧನ್ಯವಾದ ಹೇಳಿರುವ ಮಮತಾ ಬ್ಯಾನರ್ಜಿ, ಒಬ್ಬರ ಧೈರ್ಯಕ್ಕೆ ಬೆಂಬಲ ನೀಡುವುದು ಬಹುದೊಡ್ಡ ವಿಷಯ. ತೇಜಸ್ವಿ ಭಾಯ್ ಕೂಡ ಹೋರಾಟ ಮಾಡುತ್ತಿರುವವರು. ಹಾಗಾಗಿ ನಮ್ಮ ಈ ಹೋರಾಟಕ್ಕೆ ಕೈಜೋಡಿಸಿದ್ದಾರೆ. ಬಿಹಾರದಲ್ಲಿಯಾಗಲೀ, ಪಶ್ಚಿಮ ಬಂಗಾಳದಲ್ಲಿಯಾಗಲಿ ಬಿಜೆಪಿ ಗೆಲುವು ಸಾಧ್ಯವೇ ಇಲ್ಲ ಎಂದು ಮಮತಾ ಬ್ಯಾನರ್ಜಿ ಪುನರುಚ್ಚರಿಸಿದ್ದಾರೆ.
ಬಿಜೆಪಿ- ತೃಣಮೂಲ ಕಾಂಗ್ರೆಸ್ ನೇರ ಹಣಾಹಣಿ
ಪಶ್ಚಿಮ ಬಂಗಾಳದ 294 ವಿಧಾನಸಭೆ ಕ್ಷೇತ್ರಗಳಿಗೆ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಈ ಚುನಾವಣೆಯಲ್ಲಿ ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಪಶ್ಚಿಮ ಬಂಗಾಳ ಭೇಟಿ ಸಂದರ್ಭ ನಡೆದ ಕಲ್ಲು ತೂರಾಟ, ಟಿಎಂಸಿ ಸದಸ್ಯರ ರಾಜೀನಾಮೆಯಂಥ ಹಲವು ಸಂಗತಿಗಳು ಈ ಎರಡು ಪಕ್ಷಗಳ ನಡುವಿನ ಸ್ಪರ್ಧೆಯನ್ನು ಇನ್ನಷ್ಟು ಹೆಚ್ಚಿಸಿವೆ. ಈ ಬಾರಿ ಬಿಜೆಪಿಯಿಂದ ಟಿಎಂಸಿಗೆ ಭಾರೀ ಪೈಪೋಟಿ ಎದುರಾಗಿದ್ದು, ಬಿಜೆಪಿ ಸೋಲಿಸಲು ಹಲವು ಕಾರ್ಯತಂತ್ರಗಳನ್ನು ಟಿಎಂಸಿ ಹೆಣೆಯುತ್ತಿದೆ.