ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ರ್ಯಾಲಿ ಮೇಲೆ ಕಲ್ಲು ತೂರಾಟ
ಕೋಲ್ಕತ್ತಾ, ಜನವರಿ 18: ಕೇಂದ್ರ ಸಚಿವ ದೇವಶ್ರೀ ಚೌಧರಿ, ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಹಾಗೂ ಈಚೆಗೆ ಬಿಜೆಪಿಗೆ ಸೇರ್ಪಡೆಯಾಗಿದ್ದ ಸುವೇಂದು ಅಧಿಕಾರಿ ಮುಂದಾಳತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಸೋಮವಾರ ನಡೆಸುತ್ತಿದ್ದ ರೋಡ್ ಶೋ ಮೇಲೆ ಕಲ್ಲು ತೂರಾಟ ನಡೆದಿದೆ.
ಚಾರು ಮಾರ್ಕೆಟ್ ಕಡೆ ರ್ಯಾಲಿ ಹೊರಟಿದ್ದು, ಈ ಸಂದರ್ಭ ಇಟ್ಟಿಗೆ ಹಾಗೂ ಕಲ್ಲನ್ನು ಗುಂಪಿನ ಮೇಲೆ ತೂರಲಾಗಿದೆ. ಕೆಲವು ಬಿಜೆಪಿ ಕಾರ್ಯಕರ್ತರು ಗಾಯಗೊಂಡಿರುವುದಾಗಿ ತಿಳಿದುಬಂದಿದೆ.
ಪಶ್ಚಿಮ ಬಂಗಾಳ; ಸಿಎಂ ಕುರಿತು ಬಿಜೆಪಿ ಸಂಸದನ ಹೇಳಿಕೆಗೆ ಸಿಟ್ಟಾದ ನಾಯಕರು
ಕಲ್ಲು ತೂರಿದ್ದವರನ್ನು ಬೆನ್ನಟ್ಟಿದ್ದು, ತಪ್ಪಿಸಿಕೊಂಡಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ರಾಜ್ಯ ಸಚಿವ ಅರೂಪ್ ಬಿಸ್ವಾಸ್ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುವೇಂದು ಅಧಿಕಾರಿ, "ನಿಮ್ಮ ಈ ತಂತ್ರಗಳು ನಮ್ಮ ಬಳಿ ನಡೆಯುವುದಿಲ್ಲ. ಪಶ್ಚಿಮ ಬಂಗಾಳ ಜನ ನಮ್ಮೊಂದಿಗಿದ್ದಾರೆ ಹಾಗೂ ಅವರು ಬದಲಾವಣೆಯನ್ನು ಬಯಸುತ್ತಿದ್ದಾರೆ" ಎಂದು ತಿರುಗೇಟು ನೀಡಿದ್ದಾರೆ.
ಇದೇ ಏಪ್ರಿಲ್- ಮೇ ತಿಂಗಳಿನಲ್ಲಿ 294 ಸೀಟುಗಳಿಗೆ ವಿಧಾನ ಸಭೆ ಚುನಾವಣೆ ನಡೆಯುತ್ತಿದೆ. ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಹಣಾಹಣಿ ಆರಂಭವಾಗಿದ್ದು, ಪ್ರಚಾರ ಕಾರ್ಯವೂ ಬಿರುಸಾಗಿ ನಡೆಯುತ್ತಿದೆ.