ಬಂಗಾಳ ಅಸೆಂಬ್ಲಿ ಕದನ: ಬಿಜೆಪಿ ಮಣಿಸಲು ಒಂದಾದ ಕಾಂಗ್ರೆಸ್- ಎಡರಂಗ
ಕೋಲ್ಕತ್ತಾ, ಆಗಸ್ಟ್ 25: ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನೂ ತುಂಬಾ ಸಮಯವಿದೆ. ಆದರೆ, ಹೆಚ್ಚುತ್ತಿರುವ ಬಿಜೆಪಿ ಜನಪ್ರಿಯತೆ ವಿರುದ್ಧ ಒಗ್ಗಟ್ಟಾಗಿ ಹೋರಾಟ ನಡೆಸಲು ಕಾಂಗ್ರೆಸ್ ಸಮ್ಮತಿಸಿದೆ. 2021ರ ವಿಧಾನಸಭೆ ಚುನಾವಣೆಗಾಗಿ ಕಾರ್ಯತಂತ್ರ ಸಿದ್ಧವಾಗುತ್ತಿದ್ದು, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಕರೆಗೆ ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಓಗೊಟ್ಟಿದ್ದಾರೆ. ಕಾಂಗ್ರೆಸ್ -ಎಡರಂಗ ಮೈತ್ರಿಗೆ ನಾಂದಿ ಹಾಡಲಾಗಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 18 ಸ್ಥಾನ ಗಳಿಸುವ ಮೂಲಕ ಇತಿಹಾಸ ನಿರ್ಮಿಸಿತ್ತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಉತ್ತಮ ಪ್ರದರ್ಶನ ನೀಡಿದ್ದಲ್ಲದೆ, ಆಡಳಿತಾರೂಢ ಟಿಎಂಸಿಗೆ ಎಚ್ಚರಿಕೆ ಸಂದೇಶ ನೀಡಿತ್ತು. ಹೀಗಾಗಿ, ಮುಂಬರುವ ಉಪಚುನಾವಣೆಗಳು ಸೇರಿದಂತೆ ಎಲ್ಲಾ ಚುನಾವಣೆಯಲ್ಲೂ ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ.
ಪಶ್ಚಿಮ ಬಂಗಾಳ ಟಿಎಂಸಿ ಅಧ್ಯಕ್ಷ ಸೋಮೇಂದ್ರ ನಾಥ್ ಮಿತ್ರಾ ಈ ಬಗ್ಗೆ ಮಾತನಾಡಿ, "ಮೈತ್ರಿ ವಿಚಾರವಾಗಿ ಭಾನುವಾರ ಸಂಜೆ ಸಭೆ ನಡೆದಿತ್ತು. ಈ ವೇಳೆ ಸೋನಿಯಾ ಗಾಂಧಿ ಮೈತ್ರಿ ಮಾಡಿಕೊಳ್ಳಲು ಒಪ್ಪಿಗೆ ಸೂಚಿಸಿದ್ದಾರೆ. ಬಿಜೆಪಿಯನ್ನು ಮಟ್ಟಹಾಕಲು ಇದು ಅಗತ್ಯ" ಎಂದಿದ್ದಾರೆ.
"ಕಾಂಗ್ರೆಸ್ ಹಾಗೂ ಟಿಎಂಸಿಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸೋಲುವ ಭಯ ಕಾಡುತ್ತಿದೆ. ಹಾಗಾಗಿ, ಮೈತ್ರಿ ಮಾಡಿಕೊಂಡಿದ್ದಾರೆ" ಎಂದು ಬಿಜೆಪಿ ಟೀಕಿಸಿದೆ.
ಕಾಂಗ್ರೆಸ್ -ಸಿಪಿಐಎಂ ಮೈತ್ರಿ ಜಾರಿಯಲ್ಲಿದ್ದು, ಕಾಲಿಯಾಗಂಜ್, ಉತ್ತರ ದಿನಾಜ್ ಪುರ್ ಜಿಲ್ಲೆ ಹಾಗೂ ಖರಗ್ ಪುರ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ನಾದಿಯಾ ಜಿಲ್ಲೆಯ ಕರೀಂಪುರ್ ನಲ್ಲಿ ಸಿಪಿಐಎಂ ಅಭ್ಯರ್ಥಿ ಸ್ಪರ್ಧಿಸಲಿದ್ದಾರೆ. 2016ರ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ವಿರುದ್ಧ ಕಾಂಗ್ರೆಸ್ -ಸಿಪಿಐಎಂ ಮೈತ್ರಿಕೂಟ ಕಳಪೆ ಪ್ರದರ್ಶನ ನೀಡಿತ್ತು. ಕಾಂಗ್ರೆಸ್ 2 ಸ್ಥಾನ ಗೆದ್ದು 38ರಲ್ಲಿ ಠೇವಣಿ ಕಳೆದುಕೊಂಡಿತ್ತು. ಸಿಪಿಐಎಂ ಖಾತೆ ತೆರಯಲು ವಿಫಲವಾಗಿ 39 ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡಿತ್ತು.