ಬಂಗಾಳ ಮಣ್ಣಿನ ಮಗನೇ ಸಿಎಂ ಆಗ್ತಾರೆ: ಮಮತಾ ಬ್ಯಾನರ್ಜಿಗೆ ಅಮಿತ್ ಶಾ ಸವಾಲು
ಕೋಲ್ಕತಾ, ಡಿಸೆಂಬರ್ 21: ದೇಶದಾದ್ಯಂತ ಕೊರೊನಾ ವೈರಸ್ ಲಸಿಕೆ ನೀಡುವ ಪ್ರಕ್ರಿಯೆ ಆರಂಭಗೊಂಡ ಬಳಿಕವಷ್ಟೇ ಕೇಂದ್ರ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅನುಷ್ಠಾನಗೊಳಿಸಲಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಬೋಲ್ಪುರದಲ್ಲಿ ರೋಡ್ಶೋ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂವರು ಐಪಿಎಸ್ ಅಧಿಕಾರಿಗಳನ್ನು ದೆಹಲಿಗೆ ಕರೆಯಿಸಿಕೊಂಡ ತೀರ್ಮಾನವನ್ನು ಸಮರ್ಥಿಸಿಕೊಂಡರು.
ಸೋನಾರ್ ಬಾಂಗ್ಲಾ ಕನಸು ಭಗ್ನಗೊಳಿಸುತ್ತಿರುವ ದೀದಿ: ಅಮಿತ್
'ಸಿಎಎದ ನಿಯಮಗಳನ್ನು ಇನ್ನೂ ಅಂತಿಮಗೊಳಿಸಿಲ್ಲ. ಅಷ್ಟು ದೊಡ್ಡ ಪ್ರಕ್ರಿಯೆಯನ್ನು ಕೊರೊನಾ ವೈರಸ್ ಸೋಂಕಿನ ಬಿಕ್ಕಟ್ಟಿನ ನಡುವೆ ಜಾರಿಗೊಳಿಸುವುದು ಸಾಧ್ಯವಿಲ್ಲ. ಹೀಗಾಗಿ ಲಸಿಕೆ ನೀಡುವ ಕಾರ್ಯಕ್ರಮ ಆರಂಭವಾದ ಬಳಿಕ ಮತ್ತು ಕೊರೊನಾ ಚಕ್ರ ಅಂತ್ಯಗೊಂಡ ನಂತರ ಅದನ್ನು ಖಂಡಿತಾ ಪರಿಗಣಿಸುತ್ತೇವೆ. ಯಾವಾಗ ಜಾರಿ ಮಾಡಲಾಗುವುದು ಎಂಬುದನ್ನು ನಿಮಗೆ ತಿಳಿಸುತ್ತೇವೆ' ಎಂದರು.
ಪಶ್ಚಿಮ ಬಂಗಾಳದಲ್ಲಿ ಜೆ.ಪಿ ನಡ್ಡಾ ಅವರ ಬೆಂಗಾವಲು ವಾಹನದ ಮೇಲೆ ಕಲ್ಲುತೂರಾಟ ನಡೆದ ಪ್ರಕರಣದ ಬಳಿಕ ರಾಜ್ಯದಲ್ಲಿನ ಮೂವರು ಐಪಿಎಸ್ ಅಧಿಕಾರಿಗಳನ್ನು ದೆಹಲಿಗೆ ಕಳುಹಿಸುವ ಪತ್ರವು ದೇಶದ ಗಣರಾಜ್ಯ ವ್ಯವಸ್ಥೆಯ ರಚನೆಯನ್ನು ಉಲ್ಲಂಘಿಸಿಲ್ಲ ಎಂದು ಅಮಿತ್ ಶಾ ಸ್ಪಷ್ಟಪಡಿಸಿದರು. ಮುಂದೆ ಓದಿ.
"ಗೃಹ ಸಚಿವರಿಗಿನ್ನೂ ಪಶ್ಚಿಮ ಬಂಗಾಳ ರಾಜಕೀಯದ ವಾಸ್ತವ ಅರ್ಥವಾಗಿಲ್ಲ"
ಕಾನೂನನ್ನು ಓದಿಕೊಳ್ಳಲಿ
'ರಾಜ್ಯ ಸರ್ಕಾರಕ್ಕೆ ಕೇಂದ್ರವು ಕಳುಹಿಸಿದ ಪತ್ರವು ಸಂಪೂರ್ಣ ಕಾನೂನುಬದ್ಧವಾಗಿದೆ. ಸಂವಿಧಾನದ ನಿಯಮಗಳಿಗೆ ಅನುಗುಣವಾಗಿ ಅದನ್ನು ಕಳುಹಿಸಲಾಗಿದೆ. ಇದು ಗಣರಾಜ್ಯ ರಚನೆಯ ವ್ಯವಸ್ಥೆಯ ವ್ಯಾಪ್ತಿಯೊಳಗೆ ಇದೆ. ಸಾರ್ವಜನಿಕವಾಗಿ ಮತ್ತು ಕೇಂದ್ರ ಸರ್ಕಾರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸುವ ಮುನ್ನ ಮಮತಾ ಬ್ಯಾನರ್ಜಿ ಅವರು ಕಾನೂನಿನ ನಿಯಮಗಳನ್ನು ಓದಿಕೊಳ್ಳಬೇಕು' ಎಂದರು.
ದಾರಿತಪ್ಪಿಸುವ ಪ್ರಯತ್ನ
ಬಿಜೆಪಿ ನಾಯಕರನ್ನು 'ಹೊರಗಿನವರು' ಎಂದು ಟಿಎಂಸಿ ಕರೆದಿರುವುದರ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಒಂದು ರಾಜ್ಯದ ಜನರು ಮತ್ತೊಂದು ರಾಜ್ಯಕ್ಕೆ ಬರಬಾರದು ಎಂಬಂತಹ ದೇಶವನ್ನು ಅವರು (ಮಮತಾ ಬ್ಯಾನರ್ಜಿ) ಬಯಸುತ್ತಿದ್ದಾರೆಯೇ? ಇದು ಜನರ ದಾರಿತಪ್ಪಿಸುವ ಪ್ರಯತ್ನವಲ್ಲದೆ ಬೇರೇನೂ ಅಲ್ಲ.
ಮಣ್ಣಿನ ಮಗ ಸಿಎಂ ಆಗುತ್ತಾರೆ
ಚಿಂತೆ ಬೇಡ. ದೆಹಲಿಯಿಂದ ಯಾರೂ ಬಂದು ನಿಮ್ಮನ್ನು (ಟಿಎಂಸಿ) ಸೋಲಿಸುವುದಿಲ್ಲ. ಬಂಗಾಳದಿಂದ ಯಾರಾದರೂ, ಈ ಮಣ್ಣಿನ ಮಗ ನಿಮಗೆ ಸವಾಲು ಹಾಕಿ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ' ಎಂದು ಹೇಳಿದರು.
ಜಿಡಿಪಿ, ಉತ್ಪಾದನೆ ಕುಸಿತ
'ದೇಶವು ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ಭಾರತದ ಮೂರನೇ ಒಂದು ಭಾಗದಷ್ಟು ಜಿಡಿಪಿ ಬಂಗಾಳದಲ್ಲಿತ್ತು. ಮೂರು ದಶಕಗಳ ಕಮ್ಯುನಿಸ್ಟ್ ಆಡಳಿತ, ಟಿಎಂಸಿಯ ಒಂದು ದಶಕದ ಆಡಳಿತ ಬಳಿಕ ಅದು ಕೆಟ್ಟದಾಗಿ ಕುಸಿದಿದೆ. 1947ರಲ್ಲಿ ಬಂಗಾಳವು ಭಾರತದ ಕೈಗಾರಿಕಾ ಉತ್ಪಾದನೆಯ ಶೇ 30ರಷ್ಟು ಕಾಣಿಕೆ ನೀಡಿತ್ತು. ಇಂದು ಅದು ಕೇವಲ ಶೇ 3.5ಕ್ಕೆ ಕುಸಿದಿದೆ. ಈ ಕುಸಿತಕ್ಕೆ ಯಾರು ಕಾರಣ ಎಂದು ಮಮತಾ ದೀದಿ ಮತ್ತು ಕಮ್ಯುನಿಸ್ಟರನ್ನು ನಾನು ಕೇಳುತ್ತೇನೆ' ಎಂದರು.