ಪೌರತ್ವ ತಿದ್ದುಪಡಿ ಕಾಯ್ದೆ: ಗಾಳಿಸುದ್ದಿ ಗುಟ್ಟು ರಟ್ಟುಗೊಳಿಸಿದ ಮೋದಿ
ಕೋಲ್ಕತ್ತಾ, ಜನವರಿ.12: ಸ್ವಾಮಿ ವಿವೇಕಾಂನಂದರ ಜನ್ಮ ದಿನಾಚರಣೆ ಹಿನ್ನೆಲೆ ದೇಶದ ಯುವಕರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಂದೇಶವನ್ನು ರವಾನಿಸಿದ್ದಾರೆ. ಎರಡು ದಿನ ಪಶ್ಚಿಮ ಬಂಗಾಳ ಪ್ರವಾಸದಲ್ಲಿರುವ ನರೇಂದ್ರ ಮೋದಿ, ವೀರ ಸನ್ಯಾಸಿಗೆ ಪುಷ್ಪ ನಮನ ಸಲ್ಲಿಸಿದರು.
ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಧಾನಮಂತ್ರಿಯೊಬ್ಬರು ಪಶ್ಚಿಮ ಬಂಗಾಳ ಹೌರಾ ಜಿಲ್ಲೆ ಬೇಲೂರಿನ ರಾಮಕೃಷ್ಣ ಆಶ್ರಮದಲ್ಲಿ ವಾಸ್ತವ್ಯ ಹೂಡಿದ್ದಾರೆ. ಶನಿವಾರ ಆಶ್ರಮಕ್ಕೆ ಭೇಟಿ ನೀಡಿದ್ದ ಮೋದಿ, ಇಂದು ಬೆಳ್ಳಂಬೆಳಗ್ಗೆ ಸ್ವಾಮಿ ವಿವೇಕಾನಂದ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಪಶ್ಚಿಮ ಬಂಗಾಳದಲ್ಲಿ ನಿಂತು ಪ್ರಧಾನಿ ಮೋದಿ ದೇವರಲ್ಲಿ ಬೇಡಿದ್ದೇನು?
ಬೇಲೂರು ಆಶ್ರಮದಲ್ಲಿರುವ ರಾಮಕೃಷ್ಣ ಪರಮಹಂಸರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ಮಠದಲ್ಲಿ ನೆಡೆದ ಸಮಾವೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು. ಕಳೆದ ಬಾರಿ ತಾವು ಮಠಕ್ಕೆ ಭೇಟಿ ನೀಡಿದಾಗ ಸ್ವಾಮಿ ಆತ್ಮಾಸ್ಥನಂದ ಅವರ ಆಶೀರ್ವಾದ ಪಡೆದುಕೊಂಡಿದ್ದನ್ನು ಸ್ಮರಿಸಿಕೊಂಡರು. ಈಗ ಆತ್ಮಾಸ್ಥನಂದ ಸ್ವಾಮೀಜಿ ಭೌತಿಕವಾಗಿ ತಮ್ಮೊಂದಿಗಿಲ್ಲ. ಆದರೆ, ಅವರ ಕಾರ್ಯ ಹಾಗೂ ಹಾಕಿಕೊಟ್ಟ ಮಾರ್ಗವು ಸದಾ ನಮಗೆ ಮಾರ್ಗದರ್ಶಿಯಾಗುತ್ತದೆ ಎಂದರು.
ಬದಲಾವಣೆ ಮಂತ್ರ ಜಪಿಸಿದ ಪ್ರಧಾನಮಂತ್ರಿ ಮೋದಿ
ಸ್ವಾಮಿ ವಿವೇಕಾನಂದರ ಜನ್ಮ ದಿನವನ್ನು ರಾಷ್ಟ್ರೀಯ ಯುವ ದಿನಾಚರಣೆ ಎಂದು ಆಚರಿಸಲಾಗುತ್ತದೆ. ವಿವೇಕಾನಂದರು ಹೇಳಿದ್ದ ಮಾತನ್ನು ಪ್ರಧಾನಿ ಸ್ಮರಿಸಿಕೊಂಡರು. 100 ಮಂದಿ ಶಕ್ತಿಶಾಲಿ ಯುವಕರಿಂದ ನಾನು ಭಾರತವನ್ನು ಬದಲಾಯಿಸಬಲ್ಲೆ ಎಂದು ಹೇಳಿದ್ದರು. ಈಗಲೂ ಯುವಕರು ಶ್ರಮವಿಟ್ಟು ಕೆಲಸ ಮಾಡಿದರೆ ದೇಶವನ್ನು ಬದಲಾಯಿಸಲು ಸಾಧ್ಯವಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಸಿಎಎ ಬಗ್ಗೆ ಸ್ಪಷ್ಟನೆ ನೀಡಿದ ಪ್ರಧಾನಮಂತ್ರಿ ಮೋದಿ
ಕೇಂದ್ರ ಸರ್ಕಾರವು ಜಾರಿಗೊಳಿಸಿದ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಭಾರತೀಯರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ಪಷ್ಟನೆ ನೀಡಿದರು. ಭಾರತ ಹಾಗೂ ದೇಶದ ಸಂವಿಧಾನದ ಮೇಲೆ ನಂಬಿಕೆ ಇಟ್ಟುಕೊಂಡವ ಪ್ರಜೆಗಳಿಗೆ ಇದರಿಂದ ಯಾವುದೇ ಸಮಸ್ಯೆ ಇಲ್ಲ ಎಂದರು. ಪೌರತ್ವ ತಿದ್ದುಪಡಿ ಕಾಯ್ದೆಯು ಯಾರನ್ನೂ ದೇಶದಿಂದ ಹೊರ ಹಾಕಲು ರೂಪಿಸಿದ ಕಾಯ್ದೆಯಲ್ಲ ಎಂದು ಹೇಳಿದರು.
ಅನುಮಾನಗಳಿಗೆ ಉತ್ತರಿಸುವುದೇ ನಮ್ಮ ಕರ್ತವ್ಯ
ಪೌರತ್ವ ತಿದ್ದುಪಡಿ ಕಾಯ್ದೆ ಯುವಕರಲ್ಲಿ ಸಾಕಷ್ಟು ಅನುಮಾನಗಳಿದೆ. ದೇಶದ ಜನರ ದಾರಿ ತಪ್ಪಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಹೀಗಿರುವಾಗ ಕೇಂದ್ರ ಸರ್ಕಾರ ಜಾರಿಗೊಳಿಸಿದ ಕಾಯ್ದೆ ಬಗ್ಗೆ ಯುವ ಸಮುದಾಯದಲ್ಲಿ ಹುಟ್ಟುಕೊಂಡಿರುವ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವುದು ತಮ್ಮ ಕರ್ತವ್ಯವಾಗಿದೆ ಎಂದು ಪ್ರಧಾನಿ ಹೇಳಿದರು.
"ಗಾಳಿಸುದ್ದಿಗಳಿಗೆ ಯಾರೂ ಕಿವಿಗೊಡುವ ಅಗತ್ಯವಿಲ್ಲ"
ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ದೇಶದಲ್ಲಿ ಗಾಳಿಸುದ್ದಿಯನ್ನು ಹರಿಬಿಡಲಾಗುತ್ತಿದೆ. ಕೆಲವರು ರಾಜಕೀಯಕ್ಕಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಇದರಲ್ಲಿ ನಡೆಯುತ್ತಿರುವ ರಾಜಕಾರಣದ ಬಗ್ಗೆ ಯುವಕರು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಸಂದೇಶ ನೀಡಿದರು.