ಮುಸ್ಲೀಮರಂತೆ ವೇಷ ಧರಿಸಿ ಕಲ್ಲು ತೂರಿದ ಬಿಜೆಪಿ ಕಾರ್ಯಕರ್ತರ ಬಂಧನ
ಕೋಲ್ಕತ್ತ, ಡಿಸೆಂಬರ್ 21: ಪಶ್ಚಿಮ ಬಂಗಾಳದ ಮುನ್ಶಿರಾಬಾದ್ ನಲ್ಲಿ ಮುಸ್ಲಿಂ ರಂತೆ ತಲೆಗೆ ಟೋಪಿ ಧರಿಸಿ, ಲುಂಗಿ ಸುತ್ತಿಕೊಂಡು ರೈಲಿಗೆ ಕಲ್ಲು ಹೊಡೆದಿದ್ದವರನ್ನು ಬಂಧಿಸಲಾಗಿದ್ದು, ಬಂಧಿತ ಆರು ಜನರು ಹಿಂದೂಗಳು ಎಂಬುದು ಗೊತ್ತಾಗಿದೆ.
ಬಂಧಿತರಲ್ಲಿ ನಾಲ್ವರು ಅಪ್ರಾಪ್ತರಾಗಿದ್ದು, ಅಭಿಶೇಕ್ ಸರ್ಕಾರ (22), ಪ್ರಭಾಕರ್ ಸಾಹ (21) ಇಬ್ಬರು ಆರ್ಎಸ್ಎಸ್ ಹಾಗೂ ಎಬಿವಿಪಿ ಯೊಂದಿಗೆ ನಂಟು ಹೊಂದಿದ್ದು ಬಿಜೆಪಿ ಕಾರ್ಯಕರ್ತರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಆರು ಮಂದಿ ಯುವಕರು ಮುಸ್ಲಿಂ ರಂತೆ ವೇಷ ಧರಿಸಿ ಸಿಎಎ ವಿರುದ್ಧ ಪ್ರತಿಭಟನೆ ವೇಳೆ ಮುನ್ಶಿರಾಬಾದ್ ನ ರಾಧಾಮಾದಾಬ್ತಲ ಬಳಿ ರೈಲಿಗೆ ಕಲ್ಲು ಹೊಡೆದು ಆ ದೃಶ್ಯವನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ, ವಿಶೇಷವಾಗಿ ಬಿಜೆಪಿ ಗ್ರೂಫ್ ಮತ್ತು ಫೇಸ್ಬುಕ್ಗಳಲ್ಲಿ 'ಮುಸ್ಲೀಮರು ರೈಲಿಗೆ ಕಲ್ಲುಹೊಡೆಯುತ್ತಿದ್ದಾರೆ' ಎಂಬ ಒಕ್ಕಣೆಯೊಂದಿಗೆ ಹರಿದಾಡಿತ್ತು.
ಆರು ಜನ ಬಂಧಿತರು ಇನ್ನೂ ವಿದ್ಯಾರ್ಥಿಗಳಾಗಿದ್ದಾರೆ. ಅಪ್ತಾಪ್ತರನ್ನು ರಿಮ್ಯಾಂಡ್ ಹೋಂ ಗೆ ಕಳುಹಿಸಲಾಗಿದ್ದು. ಅಭಿಶೇಕ್ ಸರ್ಕಾರ (22), ಪ್ರಭಾಕರ್ ಸಾಹ (21) ಅನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಈ ಘಟನೆ ಬಗ್ಗೆ ಮಾತನಾಡಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, 'ಘಟನೆಯು ಆಘಾತ ತಂದಿದೆ. ಬಿಜೆಪಿ ಇಷ್ಟು ಕನಿಷ್ಟ ಮಟ್ಟಕ್ಕೆ ಇಳಿಯುತ್ತದೆಯೆಂದು ನಂಬಲಾಗುತ್ತಿಲ್ಲ' ಎಂದು ಹೇಳಿದ್ದಾರೆ.
ಸಿಎಎ ಪ್ರತಿಭಟನೆ ವೇಳೆ ಮುಸ್ಲೀಮರಂತೆ ವೇಷ ಧರಿಸಿ ಹಿಂಸಾಚಾರ ಮಾಡುವುದು ಮತ್ತು ಅದನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಮುಸ್ಲಿಂ ಸಮುದಾಯದವರ ವಿರುದ್ಧ ಟೀಕೆ ಮಾಡುವ ತಂತ್ರವನ್ನು ಕೆಲವೆಡೆ ಮಾಡಲಾಗುತ್ತಿದೆ.