ಶಾಕಿಂಗ್: ಕೊರೊನಾ ಸೋಂಕಿತ ಸತ್ತು 4 ದಿನಕ್ಕೆ ಸಂಬಂಧಿಕರಿಗೆ ಸುದ್ದಿ!
ಕೋಲ್ಕತ್ತಾ, ಮೇ.13: ನೊವೆಲ್ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡವರನ್ನು ಐಸೋಲೇಷನ್ ವಾರ್ಡ್ ಗಳಲ್ಲಿ ಇರಿಸಿ ಚಿಕಿತ್ಸೆ ನೀಡುವುದು ಕಾಮನ್. ಹೀಗೆ ಚಿಕಿತ್ಸೆಗೆ ಒಳಗಾಗಿದ್ದ ವ್ಯಕ್ತಿ ಮೃತಪಟ್ಟಿದ್ದರೂ ಆಸ್ಪತ್ರೆ ಸಿಬ್ಬಂದಿ ಈ ವಿಷಯವನ್ನು ಸಂಬಂಧಿಕರಿಂದ ಮುಚ್ಚಿಟ್ಟಿದ್ದಾರೆ.
Recommended Video
ಕೊರೊನಾ ಸೋಂಕಿನಿಂದ ಪ್ರಾಣ ಬಿಟ್ಟ ವ್ಯಕ್ತಿಯ ಅಂತ್ಯಸಂಸ್ಕಾರವನ್ನೂ ನೆರವೇರಿಸಿದ್ದು, ಅದಾಗಿ ನಾಲ್ಕು ದಿನಗಳ ನಂತರ ಸಂಬಂಧಿಕರೇ ವಿಚಾರಿಸಿದಾಗ ಸಾವಿನ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ಇಂಥದೊಂದು ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ ಎಂ.ಆರ್.ಬಂಗೂರ್ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ.
ಆಹಾರ ಕಿಟ್ ಲೆಕ್ಕ ಕೇಳಿ ಮುಜುಗರಕ್ಕೀಡಾದ ಮೈಸೂರು ಮೇಯರ್
ಪಶ್ಚಿಮ ಬಂಗಾಳದ ಎಂ.ಆರ್.ಬಂಗೂರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ 70 ವರ್ಷದ ಹರಿನಾಥ್ ಸೇನ್ ಆರೋಗ್ಯದ ಬಗ್ಗೆ ಕಳೆದ ಮೇ.05ರಂದು ಸಂಬಂಧಿಕರು ವಿಚಾರಿಸಿದ್ದಾರೆ. ಅಂದು ಆಸ್ಪತ್ರೆ ಸಿಬ್ಬಂದಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಮರುದಿನ ಅಂದರೆ ಮೇ.06ರಂದು ಸಂಬಂಧಿಕರನ್ನು ಕರೆಸಿದ ಆಸ್ಪತ್ರೆ ಸಿಬ್ಬಂದಿ ಹರಿನಾಥ್ ಸೇನ್, ಮೇ.02ರಂದೇ ಪ್ರಾಣ ಬಿಟ್ಟಿದ್ದಾರೆ. ಅವರ ಅಂತ್ಯ ಸಂಸ್ಕಾರವನ್ನು ನೆರವೇರಿಸಿ ಆಗಿದೆ ಎಂಬ ಆಘಾತಕಾರಿ ವಿಚಾರವನ್ನು ಸಂಬಂಧಿಕರಿಗೆ ತಿಳಿಸಿದ್ದಾರೆ.
ಸಂಬಂಧಿಕರಿಗೇ ಮಾಹಿತಿ ನೀಡದೇ ಅಂತ್ಯ ಸಂಸ್ಕಾರ
ಕಳೆದ ಮೇ.02ರಂದೇ ಹರಿನಾಥ್ ಸೇನ್ ಮೃತಪಟ್ಟಿದ್ದರೂ ಅವರ ಕುಟುಂಬದವರಿಗೆ ಆಸ್ಪತ್ರೆ ಕಡೆಯಿಂದ ಯಾವುದೇ ಮಾಹಿತಿ ನೀಡಿರಲಿಲ್ಲ. ಮೇ.01ರಂದು ಸ್ವತಃ ನಾವೇ ಕರೆ ಮಾಡಿ ತಂದೆಯ ಆರೋಗ್ಯ ವಿಚಾರಿಸಿದಾಗ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದರು. ಆದರೆ ನಂತರದಲ್ಲಿ ತಮ್ಮ ತಂದೆಯ ಸಾವು ಮತ್ತು ಅಂತ್ಯಸಂಸ್ಕಾರದ ಬಗ್ಗೆ ಮಾಹಿತಿಯನ್ನೇ ನೀಡಲಿಲ್ಲ ಎಂದು ಹರಿನಾಥ್ ಸೇನ್ ಪುತ್ರ ಅರ್ಜಿತ್ ಸೇನ್ ಆರೋಪಿಸುತ್ತಿದ್ದಾರೆ.
ಆರೋಗ್ಯ ಇಲಾಖೆಗೂ ಮುಟ್ಟಿಲ್ಲವೇ ಸಾವಿನ ಮಾಹಿತಿ?
ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡ ಹರಿನಾಥ್ ಸೇನ್ ಅವರು ಪತ್ನಿ, ಇಬ್ಬರು ಮಕ್ಕಳು ಮತ್ತು ಅವರ ಪತ್ನಿ ಹೀಗೆ ಕುಟುಂಬದ ಎಲ್ಲ ಸದಸ್ಯರನ್ನೂ ಪಶ್ಚಿಮ ಬಂಗಾಳ ಸರ್ಕಾರವು ಕ್ವಾರೆಂಟೈನ್ ನಲ್ಲಿ ಪ್ರತ್ಯೇಕವಾಗಿ ಇರಿಸಿದ್ದಾರೆ. ತಮ್ಮ ತಂದೆ ಸಾವಿನ ಬಗ್ಗೆ ಸ್ವತಃ ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿಗಳಿಗೂ ಮಾಹಿತಿ ನೀಡಿಲ್ಲ ಎಂದು ಪುತ್ರ ಅರ್ಜಿತ್ ಸೇನ್ ದೂಷಿಸಿದ್ದಾರೆ.
ಮಹಾರಾಷ್ಟ್ರದಲ್ಲೇ ಅತ್ಯಧಿಕ ಸೋಂಕು ಪೀಡಿತರು: ಅಸಲಿ ಕಾರಣ ಏನು?
ಕಳೆದ ಏಪ್ರಿಲ್ ತಿಂಗಳಿನಲ್ಲಿ ಕೊರೊನಾ ವೈರಸ್ ದೃಢ
70 ವರ್ಷದ ಹರಿನಾಥ್ ಸೇನ್ ಅವರ ಮೆದುಳಿಗೆ ಪಾರ್ಶ್ವವಾಯು ಹೊಡೆದಿತ್ತು. ಮೊದಲೇ ಅನಾರೋಗ್ಯಕ್ಕೆ ತುತ್ತಾಗಿದ್ದ ವೃದ್ಧನಲ್ಲಿ ಏಪ್ರಿಲ್.29ರಂದು ಕೊರೊನಾ ವೈರಸ್ ಸೋಂಕು ಪತ್ತೆಯಾಯಿತು. ಕೊರೊನಾ ಸೋಂಕಿತನನ್ನು ಮೊದಲು ಎನ್ಆರ್ಎಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರದಲ್ಲಿ ಪಶ್ಚಿಮ ಬಂಗಾಳದ ಮೊದಲ ಕೊರೊನಾ ಆಸ್ಪತ್ರೆ ಎಂ.ಆರ್.ಬಂಗೂರ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು ಎಂದು ತಿಳಿದು ಬಂದಿದೆ.
ಸೋಂಕಿತನ ಮೃತದೇಹವನ್ನು ಕಾರ್ಪೋರೇಷನ್ ಗೆ ಒಪ್ಪಿಸಿದ್ರಾ?
ತಮ್ಮ ತಂದೆಯ ಸಾವಿನ ಬಗ್ಗೆ ಮತ್ತೊಮ್ಮೆ ಖಾತ್ರಿಪಡಿಸಿಕೊಳ್ಳಲು ವಾರ್ಡ್ ಮಾಸ್ಟರ್ ಗೆ ಫೋನ್ ಮಾಡಲಾಗಿತ್ತು. ಅಂದು ವಾರ್ಡ್ ನರ್ಸ್ ಒಬ್ಬರು ಫೋನ್ ರಿಸೀವ್ ಮಾಡಿ, ಮೃತದೇಹವನ್ನು ಕೋಲ್ಕತ್ತಾ ಕಾರ್ಪೋರೇಷನ್ ಗೆ ಒಪ್ಪಿಸಲಾಗಿದೆ ಎಂದು ಗರ್ವದಿಂದ ನುಡಿದರು. ನರ್ಸ್ ಹೆಸರು ಕೇಳಿದಾಗ ನಿನಗೆ ನನ್ನ ಹೆಸರು ಹೇಳುವ ಅಗತ್ಯವಿಲ್ಲ. ಇಡೀ ಆಸ್ಪತ್ರೆಯಲ್ಲಿ ಬೆಳಗ್ಗೆ 10 ರಿಂದ ರಾತ್ರಿ 8 ಗಂಟೆವರೆಗೂ ಕಾರ್ಯನಿರ್ವಹಿಸುವ ನರ್ಸ್ ಒಬ್ಬರೇ. ನೀನು ಮೊದಲು ನಿನ್ನ ಹೆಸರು ಹೇಳು ಇಲ್ಲದಿದ್ದರೆ ಯಾವುದೇ ಮಾಹಿತಿ ನೀಡುವುದಿಲ್ಲ ಎಂದು ನರ್ಸ್ ಆಡಿದ ಮಾತುಗಳು ಅರ್ಜಿತ್ ಸೇನ್ ಅವರ ಮೊಬೈಲ್ ನಲ್ಲಿ ರೆಕಾರ್ಡ್ ಆಗಿವೆ.
ಬಂಗೂರ್ ಆಸ್ಪತ್ರೆಯಲ್ಲಿ ದಾಖಲಾದ ಬಗ್ಗೆ ಯಾವ ದಾಖಲೆಗಳಿಲ್ಲ!
ಕಳೆದ ಮೇ.02ರಂದೇ ಹರಿನಾಥ್ ಸೇನ್ ಮೃತಪಟ್ಟಿದ್ದರೂ, ಅವರ ಅಂತ್ಯಸಂಸ್ಕಾರ ನಡೆದಿದ್ದರೂ ಸಂಬಂಧಿಕರಿಗೆ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಕನಿಷ್ಠಪಟ್ಟ ಮರಣ ಪ್ರಮಾಣ ಪತ್ರ ಹಾಗೂ ಎಂ.ಆರ್.ಬಂಗೂರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬಗ್ಗೆ ಯಾವುದೇ ದಾಖಲೆ ಪತ್ರಗಳನ್ನೂ ನೀಡಿಲ್ಲವಂತೆ.