ಬಿಜೆಪಿ ಸೇರುವರೇ ಸೌರವ್ ಗಂಗೂಲಿ? ಪಶ್ಚಿಮ ಬಂಗಾಳ ಬಿಜೆಪಿ ಮುಖಂಡನ ಸ್ಪಷ್ಟನೆ
ಕೋಲ್ಕತ್ತಾ, ಮಾರ್ಚ್ 03: ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಮಣಿಸಲೇಬೇಕು ಎಂದು ಬಿಜೆಪಿ ಪಣ ತೊಟ್ಟಿದೆ. ಚುನಾವಣೆ ಹೊಸ್ತಿಲಲ್ಲೇ ತೃಣಮೂಲ ಕಾಂಗ್ರೆಸ್(ಟಿಎಂಸಿ)ಯಿಂದ ಸಾಲು ಸಾಲು ಸದಸ್ಯರನ್ನು ಬಿಜೆಪಿ ಸೆಳೆದುಕೊಳ್ಳುತ್ತಿದೆ.
ಉನ್ನತ ರಾಜಕಾರಣಿಗಳು, ಸೆಲೆಬ್ರಿಟಿಗಳು ಹಾಗೂ ಕ್ರೀಡಾಪಟುಗಳನ್ನು ತನ್ನ ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಪಕ್ಷವನ್ನು ಎಲ್ಲಾ ರೀತಿಯಿಂದಲೂ ಬಲಪಡಿಸಿಕೊಳ್ಳುವ ತಯಾರಿಯಲ್ಲಿದೆ. ಇದೀಗ ಭಾರತೀಯ ಕ್ರಿಕೆಟಿಗ ಸೌರವ್ ಗಂಗೂಲಿ ಕೂಡ ಬಿಜೆಪಿ ಸೇರುವ ಸರದಿಯಲ್ಲಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ.
ಚುನಾವಣೆ ಸಮೀಪದಲ್ಲೇ ಟಿಎಂಸಿಗೆ ಎದುರಾಯ್ತು ಮತ್ತೊಂದು ಹಿನ್ನಡೆ
ಈ ಬಗ್ಗೆ ಪಶ್ಚಿಮ ಬಂಗಾಳ ಬಿಜೆಪಿ ಮುಖಂಡ ಹಾಗೂ ಲೋಕಸಭಾ ಸಂಸದ ದಿಲೀಪ್ ಘೋಷ್ ಪ್ರತಿಕ್ರಿಯೆ ನೀಡಿದ್ದು, "ದಾದಾ(ಗಂಗೂಲಿ) ಬಿಜೆಪಿ ಸೇರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ನನಗೆ ತಿಳಿದಿಲ್ಲ. ಸಭೆಯಲ್ಲಿಯೂ ಚರ್ಚೆಯಾಗಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
ಗೃಹ ಸಚಿವ ಅಮಿತ್ ಶಾ ಪುತ್ರ ಜಯ್ ಶಾ ಅವರಿಗೆ ಸೌರವ್ ಗಂಗೂಲಿ ಮಿತ್ರರೂ ಆಗಿರುವ ಕಾರಣ ಅವರು ಬಿಜೆಪಿ ಸೇರಬಹುದು ಎಂಬ ವದಂತಿ ಕೆಲವು ದಿನಗಳಿಂದ ಹರಿದಾಡುತ್ತಿದೆ. ಜೊತೆಗೆ ಮಾರ್ಚ್ 7ರಂದು ಕೋಲ್ಕತ್ತಾದಲ್ಲಿ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ಸಭೆಯಲ್ಲಿ ಗಂಗೂಲಿ ಪಾಲ್ಗೊಳ್ಳಲಿರುವ ವರದಿ ಬಂದ ನಂತರ ವದಂತಿಗಳು ಹೆಚ್ಚಾಗಿವೆ.
ಪಶ್ಚಿಮ ಬಂಗಾಳದ 294 ವಿಧಾನಸಭೆ ಕ್ಷೇತ್ರಗಳಿಗೆ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 27ರಿಂದ ಚುನಾವಣೆ ಆರಂಭಗೊಳ್ಳಲಿದೆ. ಮೇ 2ಕ್ಕೆ ಫಲಿತಾಂಶ ಪ್ರಕಟಗೊಳ್ಳಲಿದೆ.