ಬಂಗಾಳದಲ್ಲಿ ಎಲ್ಲ ಪ್ರಚಾರ ಸಭೆಗಳನ್ನು ರದ್ದುಗೊಳಿಸಿದ ರಾಹುಲ್ ಗಾಂಧಿ
ಕೋಲ್ಕತ್ತಾ, ಏಪ್ರಿಲ್ 18: ಕೊರೊನಾವೈರಸ್ ಸೋಂಕು ಹರಡುವಿಕೆ ವೇಗ ಹೆಚ್ಚುತ್ತಿರುವ ಹಿನ್ನೆಲೆ ಪಶ್ಚಿಮ ಬಂಗಾಳದಲ್ಲಿ ತಮ್ಮ ಮುಂದಿನ ಎಲ್ಲ ಸಾರ್ವಜನಿಕ ಸಭೆ ಮತ್ತು ಸಮಾರಂಭಗಳನ್ನು ರದ್ದುಗೊಳಿಸುವುದಾಗಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಭಾನುವಾರ ಘೋಷಿಸಿದ್ದಾರೆ.
"ಪ್ರಸ್ತುತ ಸಂದರ್ಭದಲ್ಲಿ ಸಾರ್ವಜನಿಕ ಸಭೆ ಸಮಾರಂಭಗಳ ಪರಿಣಾಮಗಳ ಬಗ್ಗೆ ಎಲ್ಲ ರಾಜಕೀಯ ಪಕ್ಷಗಳ ನಾಯಕರು ಆಲೋಚಿಸಬೇಕು" ಎಂದು ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ.
ನಿಮ್ಮದು ತುಘ್ಲಿಕಿ ಲಾಕ್ಡೌನ್; ಕೇಂದ್ರ ಸರ್ಕಾರದ ಕಾರ್ಯತಂತ್ರ ಟೀಕಿಸಿದ ರಾಹುಲ್
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಈಗಾಗಲೇ ಐದು ಹಂತದ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ. ರಾಜ್ಯದಲ್ಲಿ ಏಪ್ರಿಲ್ 22, ಏಪ್ರಿಲ್ 26 ಮತ್ತು ಏಪ್ರಿಲ್ 29ರಂದು ಮತದಾನ ನಡೆಯಲಿದೆ. ಅಂತಿಮ ಫಲಿತಾಂಶ ಮೇ 2ರಂದು ಹೊರ ಬೀಳಲಿದೆ.
ಪಶ್ಚಿಮ ಬಂಗಾಳದಲ್ಲಿ ಕೊರೊನಾವೈರಸ್ ಸ್ಫೋಟ:
ಕೊರೊನಾವೈರಸ್ ಸೋಂಕಿಗೆ ಪಶ್ಚಿಮ ಬಂಗಾಳ ಕೂಡ ತತ್ತರಿಸಿ ಹೋಗಿದೆ. ಕಳೆದ ಶನಿವಾರ ಒಂದೇ ದಿನ ರಾಜ್ಯದಲ್ಲಿ 7713 ಮಂದಿಗೆ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 6,51,508ಕ್ಕೆ ಏರಿಕೆಯಾಗಿದೆ. ಒಂದೇ ದಿನ 34 ಮಂದಿ ಮಹಾಮಾರಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 10540ಕ್ಕೆ ಏರಿಕೆಯಾಗಿದೆ.
ಉತ್ತರ ಪರಗಣ 8, ಮುರ್ಷಿದಾಬಾದ್ 5, ಬಿರ್ಭುಮ್ 3, ದಕ್ಷಿಣ ಪರಗಣ 2 ಮತ್ತು ಪುರ್ಲಿಯಾ 2 ಸಾವಿನ ಪ್ರಕರಣಗಳು ವರದಿಯಾಗಿವೆ. ಕೊವಿಡ್-19 ಗುಣಮುಖರ ಪ್ರಮಾಣ ಶೇ.91.43ಕ್ಕೆ ಇಳಿಕೆಯಾಗಿದ್ದು, ರಾಜ್ಯದಲ್ಲಿ ಈವರೆಗೂ 595668 ಮಂದಿ ಗುಣಮುಖರಾಗಿದ್ದಾರೆ.