ಮೋದಿ ಸುಳ್ಳು ಹೇಳುತ್ತಾರೆ, ಮಮತಾ ಸುಳ್ಳು ಭರವಸೆ ಕೊಡುತ್ತಾರೆ: ರಾಹುಲ್
ಚಾಂಚಲ್ (ಪಶ್ಚಿಮ ಬಂಗಾಳ), ಮಾರ್ಚ್ 23: ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಪ್ರಚಾರಕ್ಕೆ ಚಾಲನೆ ನೀಡಿದ ರಾಹುಲ್ ಗಾಂಧಿ ಮಹಾಘಟಬಂಧನ್ನ ಸಾಥಿ ಮಮತಾ ಬ್ಯಾನರ್ಜಿ ಅವರ ವಿರುದ್ಧ ಕಠು ಟೀಕಾಸ್ತ್ರಗಳನ್ನು ಪ್ರಯೋಗಿಸಿದರು.
ಮಡಾಲ್ನ ಚಾಂಚಲ್ನಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ ತಮ್ಮಿಷ್ಟಕ್ಕೆ ಬಂದಂತೆ ರಾಜ್ಯವನ್ನು ನಡೆಸುತ್ತಿದ್ದಾರೆ. ಅವರು ಭರವಸೆ ನೀಡಿದ್ದಾರಷ್ಟೆ ಅದನ್ನು ಪೂರೈಸಿಲ್ಲ ಎಂದು ರಾಹುಲ್ ಹೇಳಿದರು.
ಏಕವ್ಯಕ್ತಿ ಕೇಂದ್ರಿತ ಆಡಳಿತ ಬಂಗಾಳದಲ್ಲಿದೆ ಎಂದ ಅವರು, ಬಂಗಾಳದ ಜನರಿಗೆ ದನಿ ಇಲ್ಲವೆ, ಕೇವಲ ಒಬ್ಬ ವ್ಯಕ್ತಿ ಒಂದು ರಾಜ್ಯವನ್ನು ನಡೆಸಬೇಕೆ? ಎಂದು ಪ್ರಶ್ನೆ ಮಾಡಿದರು. ಇದು ಮೋದಿ ಅವರ ಆಡಳಿತದ ಮಾದರಿ ಎಂದು ರಾಹುಲ್ ಹೇಳಿದರು.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡೂ ಸಹ ಪಶ್ಚಿಮ ಬಂಗಾಳದ ಸಮಸ್ಯೆಗಳನ್ನು ಪರಿಹರಿಸಲು ವಿಫಲವಾಗಿವೆ. ಯುವಕರಿಗೆ ಉದ್ಯೋಗ ಸಿಗಲಿಲ್ಲ, ರೈತರಿಗೆ ನೆರವು ದೊರೆಯಲಿಲ್ಲ, ಮೋದಿ ಸುಳ್ಳು ಹೇಳುವುದರಲ್ಲಿ ನಿರತರಾಗಿದ್ದರೆ, ಮಮತಾ ಬ್ಯಾನರ್ಜಿ ಭರವಸೆ ನೀಡಿ ಅದನ್ನು ಪೂರೈಸದೆ ಕಾಲಹರಣ ಮಾಡುತ್ತಿದ್ದಾರೆ ಎಂದು ರಾಹುಲ್ ವಾಗ್ದಾಳಿ ನಡೆಸಿದರು.
ಸಿಪಿಐ(ಎಂ)ನ ಕೆಟ್ಟ ಆಡಳಿತದಿಂದ ಮುಕ್ತಿ ಪಡೆಯಲು ಬಂಗಾಳದ ಜನರು ಮಮತಾ ಬ್ಯಾನರ್ಜಿಯನ್ನು ಆರಿಸಿದರು, ಆದರೆ ಈಗಿನ ಪರಿಸ್ಥಿತಿ ಆಗಿನದ್ದಕ್ಕಿಂತಲೂ ಭಿನ್ನವಾಗಿ ಏನೂ ಇಲ್ಲ. ಸಿಪಿಐ(ಎಂ) ಅವಧಿಯಲ್ಲಿ ಇದ್ದ ಹಿಂಸಾಚಾರ, ದೌರ್ಜನ್ಯಗಳೇ ಈಗಲೂ ಮುಂದುವರೆದಿವೆ ಎಂದು ರಾಹುಲ್ ಗಾಂಧಿ ಹೇಳಿದರು.