"ನರೇಂದ್ರ ಮೋದಿ ಭಾರತದ ಪ್ರಧಾನಿಯೇ, ಪಾಕಿಸ್ತಾನದ ರಾಯಭಾರಿಯೇ?"
ಕೋಲ್ಕತ್ತಾ, ಜನವರಿ, 03: ನರೇಂದ್ರ ಮೋದಿ ಭಾರತದ ಪ್ರಧಾನಿಯೇ ಅಥವಾ ಪಾಕಿಸ್ತಾನದ ರಾಯಭಾರಿಯೇ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಶ್ನೆ ಮಾಡಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ದೀದಿ ಮತ್ತೊಮ್ಮೆ ಸಮರ ಸಾರಿದ್ದಾರೆ.
ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೊಂದಣಿ ವಿರುದ್ಧ ಬೃಹತ್ ಸಮಾವೇಶವನ್ನು ನಡೆಸಲಾಯಿತು. ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನರೇಂದ್ರ ಮೋದಿ ಪಾಕಿಸ್ತಾನದ ರಾಯಭಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಹರಿಹಾಯ್ದರು.
ಪೌರತ್ವ ಕಾಯ್ದೆಯೂ ಇಲ್ಲ, ರಾಷ್ಟ್ರೀಯ ನಾಗರಿಕ ನೊಂದಣಿಯೂ ಇಲ್ಲ"
ಸಿರಿಗುರಿಯಲ್ಲಿ ಎರಡು ದಿನ ಪ್ರವಾಸ ಕೈಗೊಂಡಿರುವ ಮಮತಾ ಬ್ಯಾನರ್ಜಿ ಸಿಎಎ ಹಾಗೂ ಎನ್ಆರ್ ಸಿ ವಿರುದ್ಧ ಐದು ಕಿಲೋ ಮೀಟರ್ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದರು. ಸಿಎಂ ಜೊತೆ ತೃಣಮೂಲ ಕಾಂಗ್ರೆಸ್ ನ ಕಾರ್ಯಕರ್ತರು ಭಾಗಿಯಾಗಿದ್ದರು.
"ಬಿಜೆಪಿಗರಿಗೆ ಪಾಕಿಸ್ತಾನದ ಮೇಲೆ ಬಲುಪ್ರೀತಿ"
ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೊಂದಣಿ ಬಗ್ಗೆ ಧ್ವನಿ ಎತ್ತಿದರೆ ಸಾಕು ಬಿಜೆಪಿ ನಾಯಕರೆಲ್ಲ ಪಾಕಿಸ್ತಾನದತ್ತ ಬೊಟ್ಟು ಮಾಡಿ ತೋರುತ್ತಾರೆ. ಬಿಜೆಪಿ ನಾಯಕರೆಲ್ಲ ಪಾಕಿಸ್ತಾನದ ಬಗ್ಗೆ ಮಾತನಾಡುತ್ತಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯಂತೂ ಥೇಟ್ ಪಾಕಿಸ್ತಾನದ ರಾಯಭಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಮಮತಾ ಬ್ಯಾನರ್ಜಿ ಕಿಡಿ ಕಾರಿದರು. ಬಾಯಿ ತೆರೆದರೆ ಪಾಕಿಸ್ತಾನಕ್ಕೆ ಹೋಗಿ ಎನ್ನುವ ಬಿಜೆಪಿ ನಾಯಕರಿಗೆ ಭಾರತ ಮರೆತೇ ಹೋಗಿದೆಯಾ ಎಂದು ಪ್ರಶ್ನೆ ಮಾಡಿದ್ದಾರೆ.
"ಭಾರತದಲ್ಲಿ ಪಾಕಿಸ್ತಾನದ ಬಗ್ಗೆ ಚರ್ಚೆ ಬೇಕಾಗಿದೆಯೇ?"
ಬಿಜೆಪಿ ನಾಯಕರೆಲ್ಲ ಪಾಕಿಸ್ತಾನಕ್ಕೆ ಹೋಗುವಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಭಾರತ ನಮ್ಮ ದೇಶ. ಇಲ್ಲಿ ಇದ್ದುಕೊಂಡು ಪಾಕಿಸ್ತಾನದ ಬಗ್ಗೆ ಯೋಚಿಸುವ ಅಗತ್ಯವಾದರೂ ಏನಿದೆ. ಭಾರತೀಯರಿಗೆ ಪಾಕಿಸ್ತಾನದ ಬಗ್ಗೆ ಚಿಂತೆ ಏಕೆ. ಆ ದೇಶದ ಬಗ್ಗೆ ಇಲ್ಲಿ ಚರ್ಚಿಸುವ ಅಗತ್ಯವಾದರೂ ಏನಿದೆ ಎಂದು ಮಮತಾ ಬ್ಯಾನರ್ಜಿ ಕಿಡಿ ಕಾರಿದ್ದಾರೆ.
"ಬಿಜೆಪಿ ನಾಯಕರಿಗೇ ಸಿಎಎ-ಎನ್ಆರ್ ಸಿ ಬಗ್ಗೆ ತಿಳಿದಿಲ್ಲ"
ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೊಂದಣಿ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸರಿಯಾದ ಸ್ಪಷ್ಟನೆ ಇಲ್ಲ. ಬಿಜೆಪಿ ನಾಯಕರು ಒಬ್ಬೊಬ್ಬರು ಒಂದೊಂದು ರೀತಿ ಹೇಳಿಕೊಂಡು ಓಡಾಡುತ್ತಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಒಬ್ಬ ರೀತಿ ಹೇಳಿದರೆ, ಗೃಹ ಸಚಿವ ಅಮಿತ್ ಶಾ ಮತ್ತೊಂದು ರೀತಿ ಹೇಳುತ್ತಾರೆ. ಇನ್ನು, ಸಚಿವ ರವಿಶಂಕರ್ ಪ್ರಸಾದ್ ಬೇರೊಂದು ರೀತಿಯಲ್ಲೇ ವ್ಯಾಖ್ಯಾನಿಸುತ್ತಿದ್ದಾರೆ. ಬಿಜೆಪಿ ನಾಯಕರಿಗೇ ಸಿಎಎ ಹಾಗೂ ಎನ್ಆರ್ ಸಿ ಬಗ್ಗೆ ಸ್ಪಷ್ಡನೆಯಿಲ್ಲ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
"ವೋಟರ್ ಐಡಿಯಲ್ಲೇ ನೂರೆಂಟು ತಪ್ಪುಗಳನ್ನು ಮಾಡಿದ್ದೀರಿ"
ಕೇಂದ್ರ ಸರ್ಕಾರ ರಾಷ್ಟ್ರೀಯ ನಾಗರಿಕ ನೊಂದಣಿ ಮಾಡಿಕೊಳ್ಳಲು ಮುಂದಾಗಿದೆ. ಇದಕ್ಕೂ ಮೊದಲು ಈಗ ನೀಡಿರುವ ಮತದಾರರ ಗುರುತಿನ ಚೀಟಿಗಳನ್ನು ಒಮ್ಮೆ ಪರಿಶೀಲಿಸಿ ನೋಡಿಕೊಳ್ಳಿ. ಅಲ್ಲಿ ನೂರೆಂಟು ತಪ್ಪುಗಳು ಕಂಡು ಬರುತ್ತಿವೆ. ವ್ಯಕ್ತಿಯ ಹೆಸರು ಸರಿಯಿದ್ದರೆ, ತಂದೆ ಹೆಸರಿನಲ್ಲಿ ತಪ್ಪು, ಪತ್ನಿಯ ಗುರುತಿನ ಚೀಟಿಯಲ್ಲಿ ಪತಿಯ ಹೆಸರೇ ತಪ್ಪಾಗಿ ಮುದ್ರಿಸಲಾಗಿದೆ. ಅದನ್ನು ಮೊದಲು ಸರಿಪಡಿಸುವ ಕೆಲಸವನ್ನು ಮಾಡಿ ಎಂದು ಮಮತಾ ಬ್ಯಾನರ್ಜಿ ಸಲಹೆ ನೀಡಿದ್ದಾರೆ.