ಕುತೂಹಲ ಹುಟ್ಟಿಸಿರುವ ದೀದಿ, ಪ್ರಶಾಂತ್ ಕಿಶೋರ್ ಎರಡನೆಯ ಭೇಟಿ
ಕೋಲ್ಕತಾ, ಜೂನ್ 28 : ಸಂಯುಕ್ತ ಜನತಾದಳದ ಉಪಾಧ್ಯಕ್ಷರಾಗಿರುವ ಪ್ರಶಾಂತ್ ಕಿಶೋರ್ ಅವರು ಮತ್ತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಆಗಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಕಳೆದೊಂದು ತಿಂಗಳಲ್ಲಿ ಪ್ರಶಾಂತ್ ಕಿಶೋರ್ ಅವರು ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡುತ್ತಿರುವುದು ಇದು ಎರಡನೇ ಬಾರಿ. 2021ರಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆಯಬೇಕಿರುವ ವಿಧಾನಸಭೆ ಚುನಾವಣೆಯಲ್ಲಿ ರಾಜಕೀಯ ತಂತ್ರಗಾರಿಕೆ ನಿಪುಣ ಪ್ರಶಾಂತ್ ಕಿಶೋರ್ ಅವರು ತೃಣಮೂಲ ಕಾಂಗ್ರೆಸ್ ಪರವಾಗಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿವೆ.
ದೀದಿಗೆ ಪ್ರಶಾಂತ್ ಕಿಶೋರ್ ನೆರವು: ಬಿಜೆಪಿ-ಜೆಡಿಯು ಮೈತ್ರಿಯಲ್ಲಿ ಹಿರಿದಾದ ಕಂದಕ
ಮೇ ತಿಂಗಳಲ್ಲಿ ಮುಕ್ತಾಯವಾದ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಭಾರತೀಯ ಜನತಾ ಪಕ್ಷ ಉತ್ತಮ ಸಾಧನೆಯನ್ನು ತೋರಿರುವುದು ಮಮತಾ ಬ್ಯಾನರ್ಜಿ ಅವರಿಗೆ ತಲೆಬಿಸಿಯಾಗಿದೆ. 42 ಕ್ಷೇತ್ರಗಳಲ್ಲಿ 18 ಕ್ಷೇತ್ರಗಳನ್ನು ಬಿಜೆಪಿ ಕಬಳಿಸಿ ತೃಣಮೂಲ ಕಾಂಗ್ರೆಸ್ಸಿಗೆ ಭಾರೀ ಹೊಡೆತ ನೀಡಿತ್ತು. ಹಿಂದಿನ ಚುನಾವಣೆಯಲ್ಲಿ 34 ಸೀಟು ಗೆದ್ದಿದ್ದ ಟಿಎಂಸಿ ಈ ಬಾರಿ ಕೇವಲ 22 ಸೀಟು ಗೆದ್ದಿದೆ.
ಗುರುವಾರ ಮಮತಾ ಬ್ಯಾನರ್ಜಿ ಅವರು ಕಚೇರಿಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ಪ್ರಶಾಂತ್ ಕಿಶೋರ್ ಅವರು ಚರ್ಚೆ ನಡೆಸಿದ್ದಾರೆ. ಆ ಸಮಯದಲ್ಲಿ ಟಿಎಂಸಿ ಸಂಸದ ಮತ್ತು ಮಮತ್ಯಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರು ಕೂಡ ಹಾಜರಿದ್ದರು ಎಂದು ಮುಖ್ಯಮಂತ್ರಿ ಕಚೇರಿ ಖಚಿತಪಡಿಸಿದೆ.
ಆದರೆ, ಅಲ್ಲಿ ನಡೆದಿರುವ ಮಾತುಕತೆಯ ಬಗ್ಗೆ ಮುಖ್ಯಮಂತ್ರಿ ಕಚೇರಿಯಾಗಲಿ, ಪ್ರಶಾಂತ್ ಕಿಶೋರ್ ಆಗಲಿ ಯಾವುದೇ ಹೇಳಿಕೆ ನೀಡಿಲ್ಲ. ಈ ಭೇಟಿ ಹಲವಾರು ಊಹೆಗಳಿಗೆ ಕಾರಣವಾಗಿರುವುದಂತೂ ಸತ್ಯ. 2021ರಲ್ಲಿ ಚುನಾವಣೆ ನಡೆಯಲಿರುವುದರಿಂದ ಈಗಲೇ ಏನನ್ನೂ ಊಹಿಸುವುದು ಕೂಡ ಸಾಧುವಲ್ಲ. ಮಮತಾ ಬ್ಯಾನರ್ಜಿ ಮಾತ್ರವಲ್ಲ, ಪ್ರಧಾನಿ ನರೇಂದ್ರ ಮೋದಿ 2014ರಲ್ಲಿ, ನಿತಿಶ್ ಕುಮಾರ್ ಅವರು ಬಿಹಾರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಮತ್ತು ರಾಹುಲ್ ಗಾಂಧಿ ಅವರು ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಪ್ರಶಾಂತ್ ಕಿಶೋರ್ ಅವರ ನೆರವನ್ನು ಪಡೆದಿದ್ದರು.
ಚುನಾವಣಾ ತಂತ್ರಗಾರಿಕೆ: ಅಮಿತ್ ಶಾ ಪ್ರಿನ್ಸಿಪಾಲ್, ಪ್ರಶಾಂತ್ ಕಿಶೋರ್ ಇನ್ನೂ ವಿದ್ಯಾರ್ಥಿ
ಪಶ್ಚಿಮ ಬಂಗಾಳದಲ್ಲಿ 2016ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ 294 ಕ್ಷೇತ್ರಗಳಲ್ಲಿ ಮಮತಾ ಬ್ಯಾನರ್ಜಿ ಅವರು 211 ಕ್ಷೇತ್ರಗಳನ್ನು ತಮ್ಮದಾಗಿಸಿಕೊಂಡು ಅಭೂತಪೂರ್ವ ಜಯ ಗಳಿಸಿದ್ದರು. ಆದರೆ, ಈಗ ಪಶ್ಚಿಮ ಬಂಗಾಳದಲ್ಲಿ ಪರಿಸ್ಥಿತಿ ಹಿಂದಿನಂತಿಲ್ಲ. ಅಲ್ಲಿ ಬಿಜೆಪಿ ತನ್ನ ನೆಲೆಯನ್ನು ಕಂಡುಕೊಳ್ಳುತ್ತಿದೆ, ಎಡಪಕ್ಷಗಳು ದುರ್ಬಲವಾಗುತ್ತಿವೆ, ಹಲವಾರು ಟಿಎಂಸಿ ನಾಯಕರು ಬಿಜೆಪಿ ಸೇರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೆ ಚುನಾವಣೆ ನಡೆದರೆ ಹಿಂದಿನಷ್ಟು ಸೀಟು ಗೆಲ್ಲುವುದು ಟಿಎಂಸಿಗೆ ಕಷ್ಟ ಎಂಬ ಮಾತುಗಳು ಕೇಳಿಬರುತ್ತಿವೆ.
ಪ್ರಶಾಂತ್ ಕಿಶೋರ್ ಅವರು ಕೆಲಸ ಮಾಡುವ ಶೈಲಿಯೇ ಬೇರೆ. ಒಂದು ವೇಳೆ ಅವರು ನೇಮಕವಾದರೆ, ಚುನಾವಣೆಯಲ್ಲಿ ಜಯಗಳಿಸಲು ಅಗತ್ಯವಾದ ಎಲ್ಲ ಸಂಗತಿಗಳನ್ನು ತಮ್ಮ ತಂಡದ ಮೂಲಕ ಸಾಕಷ್ಟು ಅಧ್ಯಯನ ಮಾಡಿಯೇ ಸಲಹೆ ಸೂಚನೆಗಳನ್ನು ನೀಡುತ್ತಾರೆ. ಆದರೆ, ಮಮತಾ ಬ್ಯಾನರ್ಜಿ ಅವರು ಪ್ರಶಾಂತ್ ಕಿಶೋರ್ ಅವರನ್ನು ಭೇಟಿ ಮಾಡಿರುವುದಕ್ಕೆ ಬಿಜೆಪಿ ಪ್ರತಿಕ್ರಿಯಿಸಿದ್ದು, ಮುಖ್ಯಮಂತ್ರಿಯಾಗಿ ವಿಫಲವಾಗಿರುವ ಮಮತಾ ಅವರು ಮೊದಲು ರಾಜೀನಾಮೆ ನೀಡಿ, ನಂತರ ಪ್ರಶಾಂತ್ ಅವರೊಂದಿಗೆ ಮಾತುಕತೆ ನಡೆಸಬೇಕು ಎಂದು ಹೇಳಿದೆ.