ಬಿಜೆಪಿ ಹಣಿಯಲು ಮಾಸ್ಟರ್ ಪ್ಲಾನ್: ದೀದಿ ಪಾಳೆಯಕ್ಕೆ ಪ್ರಶಾಂತ್ ಕಿಶೋರ್
ಕೋಲ್ಕತಾ, ಜೂನ್ 6: ಲೋಕಸಭೆ ಚುನಾವಣೆಯಲ್ಲಿ ಭಾರಿ ಅಘಾತ ನೀಡಿರುವ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಗಟ್ಟಿಯಾಗಿ ಬೇರು ಕಂಡುಕೊಳ್ಳುವ ಸೂಚನೆ ದೊರಕಿರುವುದು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರನ್ನು ಚಿಂತೆಗೀಡು ಮಾಡಿದೆ.
ಬಿಜೆಪಿಯೊಂದಿಗಿನ ಸಂಘರ್ಷ ತಾರಕಕ್ಕೇರಿದೆ. ಬಿಜೆಪಿ ಪ್ರಾಬಲ್ಯ ಹೀಗೆಯೇ ಮುಂದುವರಿದರೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿಯೂ ಇದೇ ಅಬ್ಬರ ಮುಂದುವರಿದರೆ ಪಶ್ಚಿಮ ಬಂಗಾಳದಲ್ಲಿ ಪರ್ಯಾಯ ಆಯ್ಕೆಯಾಗಿ ಬಿಜೆಪಿ ಅಧಿಕಾರಕ್ಕೆ ಬಂದರೂ ಅಚ್ಚರಿಯಿಲ್ಲ ಎನ್ನುವ ವಿಶ್ಲೇಷಣೆಗಳು ದೀದಿಯನ್ನು ಕಳವಳಗೊಳಿಸಿದೆ.
ಹೀಗಾಗಿ ಮಮತಾ ಬ್ಯಾನರ್ಜಿ ಹೊಸ ಪ್ಲ್ಯಾನ್ ಸಿದ್ಧಪಡಿಸಿದ್ದಾರೆ. ಇದು ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ತಂತ್ರ ಎನ್ನಲಾಗಿದೆ. ಚುನಾವಣಾ ರಾಜಕೀಯ ಚಾಣಾಕ್ಯ ಎಂದೇ ಖ್ಯಾತರಾಗಿರುವ ಪ್ರಶಾಂತ್ ಕಿಶೋರ್ ಪಶ್ಚಿಮ ಬಂಗಾಳದಲ್ಲಿ ಅಖಾಡಕ್ಕೆ ಇಳಿಯುವ ಸಾಧ್ಯತೆ ಹೆಚ್ಚಾಗಿದೆ.
ಈತನೇ ಹಲವು ಪಕ್ಷಗಳ ಗೆಲುವಿನ ಮೆದುಳು, ಚಾಣಾಕ್ಷ ಪ್ರಶಾಂತ್ ಕಿಶೋರ್
ಬಿಜೆಪಿ ಅಬ್ಬರದಿಂದ ಕಂಗೆಟ್ಟಿರುವ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ಗೆ ಚೇತರಿಕೆ ನೀಡಿ ಗೆಲುವಿನ ತಂತ್ರ ರೂಪಿಸಲು ಪ್ರಶಾಂತ್ ಕಿಶೋರ್ ನೆರವು ನೀಡಲಿದ್ದಾರೆ ಎನ್ನಲಾಗಿದೆ. 2011ರಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದಕ್ಕೆ ಟಿಎಂಸಿಯನ್ನು ಸಜ್ಜುಗೊಳಿಸಲು ಮಮತಾ ಈಗಲೇ ಮುಂದಾಗಿದ್ದಾರೆ.
ಎರಡು ಗಂಟೆ ಕಾಲ ಚರ್ಚೆ
ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ವೈಎಸ್ಆರ್ ಕಾಂಗ್ರೆಸ್ ಮುಖಂಡ ಜಗನ್ ಮೋಹನ್ ರೆಡ್ಡಿ ಅವರ ಪ್ರಚಂಡ ಗೆಲುವಿಗೆ ಕಾರಣಕರ್ತರಾಗಿದ್ದ ಪ್ರಶಾಂತ್ ಕಿಶೋರ್, ಮಮತಾ ಬ್ಯಾನರ್ಜಿ ಅವರೊಂದಿಗೆ ಗುರುವಾರ ಸತತ ಎರಡು ಗಂಟೆಗಳ ಕಾಲ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಮಾತುಗಾರಿಕೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಜಗನ್ ರೆಡ್ಡಿ ದಿಗ್ವಿಜಯದ ಹಿಂದಿನ ಶಕ್ತಿ ಪ್ರಶಾಂತ್ ಕಿಶೋರ್
ಮುಂದಿನ ತಿಂಗಳಿನಿಂದ ಕೆಲಸ
ಮಾತುಕತೆಯ ಬಳಿಕ ಪ್ರಶಾಂತ್ ಕಿಶೋರ್ ಅವರ ನೆರವನ್ನು ಬಳಸಿಕೊಳ್ಳಲು ಮಮತಾ ಬ್ಯಾನರ್ಜಿ ಸಹಿ ಹಾಕಿದ್ದಾರೆ. ಅದಕ್ಕೆ ಪ್ರತಿಯಾಗಿ ಪ್ರಶಾಂತ್ ಅವರೂ ಒಪ್ಪಿಗೆ ಸೂಚಿಸಿದ್ದಾರೆ. ಮುಂದಿನ ತಿಂಗಳಿನಿಂದಲೇ ಅವರು ಮಮತಾ ಬ್ಯಾನರ್ಜಿ ಅವರ ಜತೆಗೂಡಿ ಕಾರ್ಯನಿರ್ವಹಿಸಲಿದ್ದಾರೆ. ಅವರಿಗೆ ಮಮತಾ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಜತೆಗೂಡಲಿದ್ದಾರೆ ಎನ್ನಲಾಗಿದೆ.
ಬಿಜೆಪಿಗೆ ನೆರವಾಗಿದ್ದ ಪ್ರಶಾಂತ್
2014ರ ಲೋಕಸಭೆ ಚುನಾವಣೆಯಲ್ಲಿ 'ಚಾಯ್ ಪೆ ಚರ್ಚಾ'ದಂತಹ ಕಾರ್ಯಕ್ರಮಗಳ ಮೂಲಕ ಪ್ರಶಾಂತ್ ಕಿಶೋರ್, ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಳಿಕ ಅವರು ಬಿಜೆಪಿ ಸಖ್ಯ ತೊರೆದು 2015ರಲ್ಲಿ ನಿತೀಶ್ ಕುಮಾರ್ ನೇತೃತ್ವದ ಮಹಾಘಟಬಂಧನವು ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಕಾಣುವಲ್ಲಿ ಅವರ ಪಾತ್ರವಿತ್ತು. ಆದರೆ, 2017ರಲ್ಲಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ್ದ ಅವರ ತಂತ್ರಗಳು ಫಲ ನೀಡಿರಲಿಲ್ಲ. ಅಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿತ್ತು.
'ಪ್ರಶಾಂತ್ ಮೂಲಕ ನಿತೀಶ್ ರಿಂದ ಆರ್ ಜೆಡಿ- ಜೆಡಿಯು ವಿಲೀನ ಪ್ರಸ್ತಾವ'
ಆಂಧ್ರದಲ್ಲಿ ಪ್ರಚಾರ ಚತುರ
ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ವೈಎಸ್ಆರ್ ಕಾಂಗ್ರೆಸ್ನ ಜಗನ್ ಮೋಹನ್ ರೆಡ್ಡಿ ಅವರೊಂದಿಗೆ ಕೆಲಸ ಮಾಡಿದ್ದ ಪ್ರಶಾಂತ್ ಕಿಶೋರ್, 25 ಲೋಕಸಭಾ ಕ್ಷೇತ್ರಗಳಲ್ಲಿ 22 ಮತ್ತು 175 ವಿಧಾನಸಭೆ ಕ್ಷೇತ್ರಗಳಲ್ಲಿ 151 ಕ್ಷೇತ್ರಗಳಲ್ಲಿ ವೈಎಸ್ಆರ್ ಗೆಲುವು ಸಾಧಿಸಲು ನೆರವಾಗಿದ್ದರು.