ಬರೀ ಮಾತು ಬಿಡಿ, ಮೊದಲು ಚುನಾವಣೆ ಗೆದ್ದು ನೋಡಿ; ಬಿಜೆಪಿಗೆ ಪ್ರಶಾಂತ್ ಹೊಸ ಸವಾಲು
ಕೋಲ್ಕತ್ತಾ, ಮಾರ್ಚ್ 03: ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಪುನರುಚ್ಚರಿಸಿರುವ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್, ಬಿಜೆಪಿ ಇಲ್ಲಿ ಅಧಿಕಾರ ಗಿಟ್ಟಿಸಿಕೊಂಡಿದ್ದೇ ಆದರೆ ನನ್ನ ವೃತ್ತಿಯನ್ನೇ ನಾನು ತೊರೆಯುತ್ತೇನೆ ಎಂದು ಮತ್ತೊಮ್ಮೆ ಸವಾಲು ಹಾಕಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೂರಕ್ಕೂ ಹೆಚ್ಚು ಸೀಟುಗಳನ್ನು ಪಡೆದುಕೊಂಡಿದ್ದೇ ಆದರೆ, ನಾನು ನನ್ನ ಈ ವೃತ್ತಿಯನ್ನೇ ಬಿಡುತ್ತೇನೆ. ಈ ವೃತ್ತಿ ಬಿಟ್ಟು ಬೇರೇನನ್ನಾದರೂ ಮಾಡುತ್ತೇನೆ. ಬಿಜೆಪಿ ಗೆದ್ದರೆ ಈಗ ನಾನು ಏನಾಗಿದ್ದೇನೋ ಅದಾಗಿ ಇಲ್ಲಿ ಉಳಿಯುವುದಿಲ್ಲ. ಯಾವುದೇ ಚುನಾವಣಾ ಸಂಬಂಧಿ ಚಟುವಟಿಕೆಗಳಲ್ಲೂ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳ: ಬಿಜೆಪಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ ಪ್ರಶಾಂತ್ ಕಿಶೋರ್
ಇದೇ ಮಾರ್ಚ್ 27ರಿಂದ ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ಆರಂಭವಾಗಲಿದೆ. ಎಂಟು ಹಂತಗಳಲ್ಲಿ 294 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು, ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಚುರುಕು ಪಡೆದುಕೊಂಡಿವೆ. ಮುಂದೆ ಓದಿ...
"ದೀದಿ ನನಗೆ ಎಲ್ಲಾ ಸ್ವಾತಂತ್ರ್ಯ ಕೊಟ್ಟಿದ್ದಾರೆ"
ಉತ್ತರ ಪ್ರದೇಶದಲ್ಲಿ ನನಗೆ ಸೋಲಾಯಿತು. ಅಲ್ಲಿ ನಾನು ಗೆಲುವಿಗೆ ಏನು ಕಾರ್ಯತಂತ್ರ ಬಯಸಿದ್ದೆನೋ ಅದಕ್ಕೆ ಪೂರಕ ವಾತಾವರಣ ಇರಲಿಲ್ಲ. ಆದರೆ ಬಂಗಾಳದಲ್ಲಿ ಇದೇ ಕಾರಣವನ್ನು ನಾನು ನೀಡುವುದಿಲ್ಲ. ನನಗೆ ಬೇಕೆಂದ ರೀತಿ ಇಲ್ಲಿ ದೀದಿ ಸ್ವಾತಂತ್ರ್ಯ ಕೊಟ್ಟಿದ್ದಾರೆ. ನಾನು ಬಂಗಾಳವನ್ನು ಕಳೆದುಕೊಂಡಿದ್ದೇ ಆದರೆ ಈ ಸ್ಥಾನಕ್ಕೆ ನಾನು ಸೂಕ್ತವಲ್ಲ ಎಂದು ಒಪ್ಪಿಕೊಳ್ಳುತ್ತೇನೆ ಎಂದಿದ್ದಾರೆ.
"ಟಿಎಂಸಿ ಆಂತರಿಕ ಭಿನ್ನಾಭಿಪ್ರಾಯಗಳನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ"
ತನ್ನದೇ ಕಾರಣದಿಂದ ತೃಣಮೂಲ ಕಾಂಗ್ರೆಸ್ ಹಿಂದೆ ಸರಿದರೆ ಮಾತ್ರ ಬಿಜೆಪಿ ಇಲ್ಲಿ ಗೆಲ್ಲಲು ಸಾಧ್ಯ. ಅದು ಎಂದಿಗೂ ಸಾಧ್ಯವಿಲ್ಲ. ತೃಣಮೂಲ ಕಾಂಗ್ರೆಸ್ನಲ್ಲಿ ಕೆಲವು ಆಂತರಿಕ ವಿರೋಧಾಭಾಸಗಳಿವೆ. ಅವನ್ನು ಬಿಜೆಪಿ ಚೆನ್ನಾಗಿ ಬಳಸಿಕೊಳ್ಳುತ್ತಿದೆ. ಟಿಎಂಸಿ ಸದಸ್ಯರಿಗೆ ಹಣ, ಸ್ಥಾನ, ಟಿಕೆಟ್ ಪ್ರಲೋಭನೆ ತೋರಿಸಿ ಬಿಜೆಪಿಗೆ ಕರೆಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಚುನಾವಣೆ ಸಮೀಪದಲ್ಲೇ ಟಿಎಂಸಿಗೆ ಎದುರಾಯ್ತು ಮತ್ತೊಂದು ಹಿನ್ನಡೆ
"ಹವಾದಿಂದಷ್ಟೇ ಗೆಲ್ಲಲು ಸಾಧ್ಯವಿಲ್ಲ"
ಬಿಜೆಪಿ ಹಾಗೂ ಅಮಿತ್ ಶಾ ತಾವು ಪಶ್ಚಿಮ ಬಂಗಾಳದಲ್ಲಿ 200 ಸೀಟುಗಳನ್ನು ಗೆಲ್ಲುತ್ತೇವೆ ಎಂದು ಹೇಳುತ್ತಲೇ ಇದ್ದಾರೆ. ಬಿಜೆಪಿ ಗೆಲ್ಲುತ್ತೇವೆ ಎಂಬ "ಹವಾ" ಸೃಷ್ಟಿಸುತ್ತಿದೆ ಅಷ್ಟೆ. ಆದರೆ ಚುನಾವಣೆಯಲ್ಲಿ ಗೆಲ್ಲುವುದು ಅಷ್ಟು ಸುಲಭವಲ್ಲ. ಹವಾದಿಂದಷ್ಟೇ ಗೆಲುವು ಒಲಿದುಬರುವುದಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.
ಪ್ರಶಾಂತ್ ಕುರಿತು ವ್ಯಂಗ್ಯ ಮಾಡಿದ್ದ ಬಿಜೆಪಿ
ಪಂಜಾಬ್ನಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಸಿಎಂ ಅಮರಿಂದರ್ ಸಿಂಗ್, ಪಶ್ಚಿಮ ಬಂಗಾಳದ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರನ್ನು ಪ್ರಧಾನ ಸಲಹೆಗಾರರಾಗಿ ನೇಮಿಸಿಕೊಂಡಿದ್ದಾರೆ. ಇದಕ್ಕೆ, "ಪ್ರಶಾಂತ್ ಅವರು ಕಾಂಗ್ರೆಸ್ ಸೇರಲು "ದೀದಿ"ಯನ್ನು ಈಗಲೇ ಬಿಟ್ಟು ಹೋಗಿದ್ದಾರೆ. ಚುನಾವಣಾ ಫಲಿತಾಂಶ ಬರುವ ಮುನ್ನವೇ ಬೇರೆಡೆಗೆ ದೊಡ್ಡ ಸಲಹೆಗಾರನಾಗಿ ಸೇರಿಕೊಂಡಿದ್ದಾರೆ. ಈ ಸಂಗತಿಯೇ ಸಾಕಷ್ಟು ವಿಚಾರವನ್ನು ಹೇಳುತ್ತಿದೆ" ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಟೀಕಿಸಿದ್ದರು.