ದೀದಿ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಚುನಾವಣಾ ಚಾಣಕ್ಯ ಪ್ರಶಾಂತ್ ಹೆಸರು ಸೇರ್ಪಡೆ
ಕೋಲ್ಕತ್ತಾ, ಸೆಪ್ಟೆಂಬರ್ 26: ಕೋಲ್ಕತ್ತಾದ ಭವಾನಿಪುರದಲ್ಲಿ ಉಪಚುನಾವಣೆ ನಡೆಯಲು ಇನ್ನು ಕೆಲವೇ ದಿನಗಳು ಇದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪರ್ಧಿಸಲಿರುವ ಈ ಭವಾನಿಪುರ ಕ್ಷೇತ್ರದಲ್ಲಿ ಏತನ್ಮಧ್ಯೆ ಮತದಾರರ ಪಟ್ಟಿಯಲ್ಲಿ ಚುನಾವಣಾ ಚಾಣಕ್ಯ, ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಕೂಡಾ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಈ ಹಿಂದೆ ಪ್ರಶಾಂತ್ ಕಿಶೋರ್ ತನ್ನ ಹುಟ್ಟೂರಾದ ಬಿಹಾರದ ಸಸಾರಾಮ್ ಜಿಲ್ಲೆಯಲ್ಲಿ ಮತದಾರರು ಆಗಿದ್ದರು.
ಪ್ರಶಾಂತ್ ಕಿಶೋರ್ ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಹಾಗೂ ಅವರ ಪಕ್ಷ ತೃಣಮೂಲ ಕಾಂಗ್ರೆಸ್ಗೆ ಚುನಾವಣಾ ಕಾರ್ಯತಂತ್ರ ರೂಪಿಸುವಲ್ಲಿ ಸಲಹೆ, ಸಹಾಯ ಮಾಡಿದ್ದರು. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಇತ್ತೀಚಿನ ವಿಧಾನ ಸಭೆ ಚುನಾವಣೆಯಲ್ಲಿ ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ಪ್ರಶಾಂತ್ ಕಿಶೋರ್ ಹಲವಾರು ಮುಖ್ಯ ಸಲಹೆಗಳನ್ನು ನೀಡಿದ್ದಾರೆ.
ತ್ರಿಪುರಕ್ಕೆ ಭೇಟಿ ನೀಡಿದ್ದ ಪ್ರಶಾಂತ್ ತಂಡದ 23 ಮಂದಿಗೆ ಜಾಮೀನು
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ವಕ್ಷೇತ್ರ ಭವಾನಿಪುರದಲ್ಲಿ ಮಮತಾ ಬ್ಯಾನರ್ಜಿ ಸ್ಪರ್ಧಿಸಿರಲಿಲ್ಲ. ಬದಲಾಗಿ ನಂದಿಗ್ರಾಮ ಕ್ಷೇತ್ರದಲ್ಲಿ ಸ್ಪರ್ಧಿಸಿ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಸೋಲನ್ನುಂಡಿದ್ದರು. ಆದರೆ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಭರ್ಜರಿ ಜಯಗಳಿಸಿದ ಹಿನ್ನೆಲೆ ಪಕ್ಷ ಮಮತಾ ಬ್ಯಾನರ್ಜಿಯನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡಿದೆ.
ಆದರೆ ತನ್ನ ಈ ಮುಖ್ಯಮಂತ್ರಿ ಸ್ಥಾನವನ್ನು ಮಮತಾ ಉಳಿಸಿಕೊಳ್ಳಬೇಕಾದರೆ ನವೆಂಬರ್ 5 ರ ಒಳಗೆ ವಿಧಾನಸಭೆಗೆ ಆಯ್ಕೆಯಾಗಬೇಕಿದೆ. ಈ ನಿಟ್ಟಿನಲ್ಲಿ ಮಮತಾ ಬ್ಯಾನರ್ಜಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡಲು ಭವಾನಿಪುರದ ಶಾಸಕ ಸ್ಥಾನಕ್ಕೆ ಶೋಭನ್ದೇವ್ ಚಟ್ಟೋಪಾಧ್ಯಾಯ ರಾಜೀನಾಮೆ ನೀಡಿದ್ದಾರೆ. ಭವಾನಿಪುರದಿಂದ ಮಮತಾ ಬ್ಯಾನರ್ಜಿ ಸ್ಪರ್ಧೆಗೆ ಇಳಿದಿದ್ದಾರೆ. ಸೆಪ್ಟೆಂಬರ್ 30ಕ್ಕೆ ಉಪಚುನಾವಣೆ ನಡೆಯಲಿದೆ.
ಈ ನಡುವೆ ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ತನ್ನ ಹೆಸರನ್ನು ಭವಾನಿಪುರದ ಮತದಾರರ ಪಟ್ಟಿಯಲ್ಲಿ ಹಾಕಿಸಿಕೊಂಡಿದ್ದಾರೆ. ಈ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಮತ ಹಾಕಲು ಸಿದ್ದರಾಗುತ್ತಿರುವ ಎಲ್ಲಾ ಸೂಚನೆಗಳು ಕಂಡು ಬಂದಿದೆ.
'ಸಾರ್ವಜನಿಕ ಜೀವನಕ್ಕೆ ತಾತ್ಕಾಲಿಕ ವಿರಾಮ': ಪಂಜಾಬ್ ಸಿಎಂ ಸಲಹೆಗಾರ ಸ್ಥಾನಕ್ಕೆ ಚಾಣಕ್ಯ ರಾಜೀನಾಮೆ
ಮೂಲಗಳ ಪ್ರಕಾರ ಪ್ರಶಾಂತ್ ಕಿಶೋರ್ ತನ್ನ ಮತ ಹಕ್ಕನ್ನು ಬಿಹಾರದ ಸಸಾರಾಮ್ ಜಿಲ್ಲೆಯಿಂದ ಭವಾನಿಪುರಕ್ಕೆ ವರ್ಗಾವಣೆ ಮಾಡಿದ್ದಾರೆ. ಇನ್ನು ವಿಧಾನ ಸಭೆ ಉಪಚುನಾವಣೆಯ ನಡುವೆ ಬಿಜೆಪಿಯು ಕೋಲ್ಕತ್ತಾದಿಂದ ಪ್ರಶಾಂತ್ ಕಿಶೋರ್ರನ್ನು ಹೊರಹಾಕಲು ಚುನಾವಣಾ ಆಯೋಗವನ್ನು ಒತ್ತಾಯಿಸಬಹುದು, ಅದಕ್ಕಾಗಿ ಯಾವುದಾದರೂ ಕಾರಣವನ್ನು ಹುಡುಕಬಹುದು ಎಂಬ ಕಾರಣದಿಂದಾಗಿ ಪ್ರಶಾಂತ್ ಕಿಶೋರ್ ಪಶ್ಚಿಮ ಬಂಗಾಳದಲ್ಲೇ ತನ್ನ ಮತದಾನದ ಹಕ್ಕನ್ನು ಪಡೆದಿದ್ದಾರೆ ಎನ್ನಲಾಗಿದೆ.
ಈ ಹಿಂದೆ ತ್ರಿಪುರ ರಾಜಧಾನಿ ಅಗರ್ತಲಾದಲ್ಲಿ ಹೋಟೆಲ್ನಿಂದ ಹೊರಹೋಗದಂತೆ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ರ ಐಪಿಎಸಿ (ಭಾರತೀಯ ರಾಜಕೀಯ ಕ್ರಿಯಾ ಸಮಿತಿ) ತಂಡವನ್ನು ತಡೆಯಲಾಗಿದೆ ಎಂದು ತಂಡವು ಆರೋಪ ಮಾಡಿತ್ತು. ತ್ರಿಪುರದಲ್ಲಿ ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ತಂಡವು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ನ ಕೆಲವು ಸಮೀಕ್ಷೆಗಳನ್ನು ಮಾಡಲು ತೆರಳಿದ್ದರು. ಆದರೆ ಪೊಲೀಸರು ಕೋವಿಡ್ ನಿರ್ಬಂಧ ಜಾರಿ ಇರುವ ಹಿನ್ನೆಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿಕೊಂಡಿತ್ತು. ಆ ಬಳಿಕ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ರ ಐಪಿಎಸಿ (ಭಾರತೀಯ ರಾಜಕೀಯ ಕ್ರಿಯಾ ಸಮಿತಿ) ತಂಡದ ಎಲ್ಲ 23 ಸದಸ್ಯರಿಗೆ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಯಾವುದೇ ಷರತ್ತುಗಳಿಲ್ಲದೆ ಬಂಧನಕ್ಕೆ ಪೂರ್ವ ಜಾಮೀನು ನೀಡಲಾಗಿದೆ ಎಂಬುವುದನ್ನು ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು.
ಈ ವಿಚಾರದಲ್ಲಿ ಟ್ವೀಟ್ ಮಾಡಿದ್ದ ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಪಕ್ಷದ ಸಂಸದ ಮತ್ತು ಮಮತಾ ಬ್ಯಾನರ್ಜಿಯ ಸೋದರಳಿಯ ಅಭಿಷೇಕ್ ಬ್ಯಾನರ್ಜಿ, ''ಐಪಿಎಸಿ (ಭಾರತೀಯ ರಾಜಕೀಯ ಕ್ರಿಯಾ ಸಮಿತಿ) ತಂಡ ಭೂಮಿಗೆ ಕಾಲಿಡುವ ಮೊದಲೇ ತ್ರಿಪುರದ ಬಿಜೆಪಿಗೆ ಭಯ ಆರಂಭವಾಗಿದೆ. ಪಶ್ಚಿಮಬಂಗಾಳದಲ್ಲಿ ನಮ್ಮ ಗೆಲುವಿನಿಂದ ಬಿಜೆಪಿಗರು ತುಂಬಾ ಗಲಿಬಿಲಿಗೊಂಡಿದ್ದಾರೆ. ಈಗ 23 ಐಪಿಎಸಿ ಉದ್ಯೋಗಿಗಳನ್ನು ಗೃಹಬಂಧನದಲ್ಲಿರಿಸಿದ್ದಾರೆ. ಈ ರಾಷ್ಟ್ರದಲ್ಲಿ ಪ್ರಜಾಪ್ರಭುತ್ವವು ಬಿಜೆಪಿಯ ದುರಾಡಳಿತದಲ್ಲಿ ಆಗುವ ಸಾವಿರ ಸಾವುಗಳಡಿಯಲ್ಲಿ ಸಾಯುತ್ತದೆ,'' ಎಂದು ಆರೋಪ ಮಾಡಿದ್ದರು.
(ಒನ್ಇಂಡಿಯಾ ಸುದ್ದಿ)