ಪಶ್ಚಿಮ ಬಂಗಾಳದಲ್ಲಿ ನಿಂತು ಪ್ರಧಾನಿ ಮೋದಿ ದೇವರಲ್ಲಿ ಬೇಡಿದ್ದೇನು?
ಕೋಲ್ಕತ್ತಾ, ಜನವರಿ.12: ಕೇಂದ್ರ ಸರ್ಕಾರವೇ ಉತ್ತಮ ಯೋಜನೆಗಳನ್ನು ಜಾರಿಗೊಳಿಸಿದರೂ ಪಶ್ಚಿಮ ಬಂಗಾಳಯದಲ್ಲಿ ಈ ಯೋಜನೆಗಳು ಅನುಷ್ಠಾನಕ್ಕೆ ಬರುತ್ತಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೋಲ್ಕತ್ತಾ ಪೋರ್ಟ್ ಟ್ರಸ್ತ್ ನ 150ನೇ ವರ್ಷಾಚರಣೆ ಸಂಭ್ರಮವನ್ನು ಉದ್ಘಾಟಿಸಿ ಪ್ರಧಾನಿ ಮೋದಿ ಮಾತನಾಡಿದರು. ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಸರ್ಕಾರ ಹಾಗೂ ರಾಜಕಾರಣಿಗಳಿಗೆ ದೇವರು ಒಳ್ಳೆಯ ಬುದ್ಧಿಯನ್ನು ನೀಡಲಿ ಎಂದು ಬೇಡುತ್ತೇನೆ ಎಂದರು. ಆ ಮೂಲಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರವನ್ನು ಮಾತಿನಲ್ಲೇ ಕುಟುಕಿದರು.
ನರೇಂದ್ರ ಮೋದಿ-ಮಮತಾ ಬ್ಯಾನರ್ಜಿ ಭೇಟಿ
ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಹಾಗೂ ಕಿಸಾನ್ ಸಮ್ಮಾನ್ ಯೋಜನೆಗಳನ್ನು ಪಶ್ಚಿಮ ಬಂಗಾಳ ಸರ್ಕಾರವು ಜಾರಿಗೊಳಿಸಬೇಕು. ರಾಜ್ಯದ ಜನರು ಈ ಯೋಜನೆಗಳ ಉಪಯೋಗವನ್ನು ಪಡೆದುಕೊಳ್ಳುವಂತೆ ಆಗಬೇಕು ಎಂದು ಪ್ರಧಾನಿ ಹೇಳಿದರು.
ಪಶ್ಚಿಮ ಬಂಗಾಳದಲ್ಲಿ ಕೇಂದ್ರದ ಯೋಜನೆಗಳ ನಿರ್ಲಕ್ಷ್ಯ
ಪಶ್ಚಿಮ ಬಂಗಾಳದಲ್ಲಿ ಇದುವರೆಗೂ ಕೇಂದ್ರ ಸರ್ಕಾರ ಜಾರಿಗೊಳಿಸಿದ ಆಯುಷ್ಮಾನ್ ಭಾರತ್ ಹಾಗೂ ಕಿಸಾನ್ ಸಮ್ಮಾನ್ ಯೋಜನೆಗಳು ಅನುಷ್ಠಾನಗೊಂಡಿಲ್ಲ. ಇದರಿಂದ ಮನಸಿಗೆ ತುಂಬಾ ನೋವಾಗುತ್ತದೆ. ಜನರಿಗೆ ಉಪಯೋಗಕ್ಕಾಗಿ ತಂದ ಯೋಜನೆಗಳನ್ನು ಅನುಷ್ಠಾನಗೊಳಿಸದೇ ರಾಜ್ಯದ ರಾಜಕಾರಣಿಗಳು ದಡ್ಡರಂತೆ ವರ್ತಿಸುತ್ತಿದ್ದಾರೆ. ಅವರಿಗೆಲ್ಲ ಒಳ್ಳೆಯ ಬುದ್ಧಿ ಕೊಡಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.
ರಾಜ್ಯದಲ್ಲಿ 90 ಲಕ್ಷ ಮಂದಿಗೆ ಗ್ಯಾಸ್ ಸೌಲಭ್ಯ
ದೇಶಾದ್ಯಂತ ಕೇಂದ್ರ ಸರ್ಕಾರದ ಯೋಜನೆಗಳು ಬಹುತೇಕ ರಾಜ್ಯಗಳಲ್ಲಿ ಜಾರಿಗೆ ಬಂದಿವೆ. ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ 90 ಲಕ್ಷ ಕುಟುಂಬಗಳಿಗೆ ಉಚಿತವಾಗಿ ಅಡುಗೆ ಅನಿಲವನ್ನು ನೀಡಲಾಗಿದೆ ಎಂದು ಹೇಳಿದರು.
ರೈತರ ಖಾತೆಗೆ 43 ಸಾವಿರ ಕೋಟಿ ರುಪಾಯಿ ಜಮಾ
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರವು ರೈತರಿಗೆ ನೆರವು ನೀಡುತ್ತಿದೆ. ದೇಶಾದ್ಯಂತ ಇದುವರೆಗೂ 8 ಕೋಟಿ ರೈತರಿಗೆ ಈ ಯೋಜನೆಯಿಂದ ಹಣ ನೀಡಲಾಗಿದೆ. 43 ಸಾವಿರ ಕೋಟಿ ರೂಪಾಯಿ ಹಣವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮಾಹಿತಿ ನೀಡಿದರು.
ಸಿಎಂ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ತಿವಿದ ಪ್ರಧಾನಿ ಮೋದಿ
ಇನ್ನು, ಆಯುಷ್ಮಾನ್ ಯೋಜನೆ ಅಡಿಯಲ್ಲಿ ಇದುವರೆಗೂ ದೇಶದ 75 ಸಾವಿರಕ್ಕೂ ಅಧಿಕ ಮಂದಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಮಧ್ಯವರ್ತಿಗಳು ದಲ್ಲಾಳಿಗಳಿಲ್ಲದೇ ನೇರವಾಗಿ ಜನರನ್ನು ತಲುಪುವ ಯೋಜನೆಗಳೇ ರಾಜ್ಯ ಸರ್ಕಾರದಿಂದ ನಿರ್ಲಕ್ಷ್ಯಗೆ ಒಳಗಾಗಿವೆ. ಪಶ್ಚಿಮ ಬಂಗಾಳದಲ್ಲಿ ಈ ಯೋಜನೆಗಳನ್ನು ಏಕೆ ಅನುಷ್ಠಾನಗೊಳಿಸಿಲ್ಲ ಎಂದು ಪ್ರಧಾನಿ ಮೋದಿ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಪ್ರಶ್ನಿಸಿದ್ದಾರೆ.
ಪ್ರಧಾನಿ ಸಮಾವೇಶದಿಂದ ದೂರ ಉಳಿದ ಮಮತಾ ಬ್ಯಾನರ್ಜಿ
ಕೇಂದ್ರ ಸರ್ಕಾರದ ವಿರುದ್ಧ ಸದಾ ಗುಡುಗುವ ಸಿಎಂ ಮಮತಾ ಬ್ಯಾನರ್ಜಿ, ಪ್ರಧಾನಿ ಮೋದಿ ಭಾಗವಹಿಸಿದ್ದ ಕಾರ್ಯಕ್ರಮದಿಂದ ದೂರ ಉಳಿದಿದ್ದರು. ಕೋಲ್ಕತ್ತಾ ಪೋರ್ಟ್ ಟ್ರಸ್ಟ್ ನ 150ನೇ ವರ್ಷಾಚರಣೆ ಕಾರ್ಯಕ್ರಮಕ್ಕೆ ಮಮತಾ ಬ್ಯಾನರ್ಜಿಯವರನ್ನೂ ಆಹ್ವಾನಿಸಲಾಗಿತ್ತು. ಆಮಂತ್ರಣ ಪತ್ರಿಕೆಯಲ್ಲಿ ಪ್ರಧಾನಿ ಜೊತೆ ಮುಖ್ಯಮಂತ್ರಿಯ ಹೆಸರನ್ನೂ ಮುದ್ರಿಸಲಾಗಿತ್ತು. ಪ್ರಧಾನಿಯೊಂದಿಗೆ ಸಿಎಂ ಮಮತಾ ಬ್ಯಾನರ್ಜಿ ಕೂಡಾ ವೇದಿಕೆ ಹಂಚಿಕೊಳ್ಳಬೇಕಿತ್ತು. ಆದರೆ, ಇಂದು ನಡೆಸ ಕಾರ್ಯಕ್ರಮದಿಂದ ದೀದಿ ದೂರ ಉಳಿದಿದ್ದರು.