ಮೋದಿ ಕೂಡ ರಾಜಪಕ್ಸೆಯಂತೆ ರಾಜೀನಾಮೆ ನೀಡಿ ಪಲಾಯನ ಮಾಡುತ್ತಾರೆ: ಟಿಎಂಸಿ ಶಾಸಕ
ನವದೆಹಲಿ, ಜುಲೈ 11: ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರಂತೆ ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ನೀಡಿ ಪಲಾಯನ ಮಾಡುತ್ತಾರೆ ಎಂದು ತೃಣಮೂಲ ಕಾಂಗ್ರೆಸ್ ಶಾಸಕ ಇದ್ರಿಸ್ ಅಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕೋಲ್ಕತ್ತಾದಲ್ಲಿ ಎಎನ್ಐ ಜೊತೆ ಮಾತನಾಡಿರುವ ಟಿಎಂಸಿ ನಾಯಕ ಇದ್ರಿಸ್ ಅಲಿ, "ಭಾರತದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿದರೆ, ಪ್ರಧಾನಿ ಮೋದಿ ಸಂಪೂರ್ಣ ವಿಫಲರಾಗಿದ್ದಾರೆ. ಇಲ್ಲಿ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ ಮತ್ತು ಪ್ರಧಾನಿ ಮೋದಿ ಕೂಡ ರಾಜೀನಾಮೆ ನೀಡಿ ಪಲಾಯನ ಮಾಡುತ್ತಾರೆ," ಎಂದು ಹೇಳಿದರು.
ಶನಿವಾರ, ಕಾಂಗ್ರೆಸ್ ನಾಯಕ ಉದಿತ್ ರಾಜ್ ಭಾರತದ ಪರಿಸ್ಥಿತಿಯು ಶ್ರೀಲಂಕಾದಂತೆ ಇದೆ ಎಂದು ಹೇಳಿದರು. ಟ್ವೀಟ್ ಮಾಡಿದ್ದ ಅವರು "ಭಾರತದ ಪರಿಸ್ಥಿತಿ ಕೂಡ ಶ್ರೀಲಂಕಾದಂತೆಯೇ ಇದೆ" ಎಂದು ಹೇಳಿದ್ದಾರೆ.
ಶ್ರೀಲಂಕಾದಲ್ಲಿ ಉದ್ರಿಕ್ತಗೊಂಡ ಪ್ರತಿಭಟನಾಕಾರರು ಕಾಂಪೌಂಡ್ ಮುರಿದು, ಮತ್ತು ಅವರ ಹತ್ತಿರದ ಕಚೇರಿಗೆ ಮುತ್ತಿಗೆ ಹಾಕುವ ಮೊದಲು ಗೋಟಬಯ ರಾಜಪಕ್ಸೆ ತಮ್ಮ ಅಧಿಕೃತ ನಿವಾಸದಿಂದ ಪಲಾಯನ ಮಾಡಿದ್ದರು. ಇದೇ ಘಟನೆಯನ್ನು ಉಲ್ಲೇಖಿಸಿ ಕಾಂಗ್ರೆಸ್ ನಾಯಕ ಉದಿತ್ ರಾಜ್ ಹೇಳಿಕೆ ನೀಡಿದ್ದರು.
ರಾಹುಲ್ ಗಾಂಧಿ ಕೂಡ ಇದೇ ರೀತಿ ಹೇಳಿದ್ದರು
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಮೇ ತಿಂಗಳಲ್ಲಿ ಭಾರತವನ್ನು ಶ್ರೀಲಂಕಾಗೆ ಹೋಲಿಕೆ ಮಾಡಿದ್ದರು. ಭಾರತದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಮತ್ತು ನಿರುದ್ಯೋಗದ ಸಮಸ್ಯೆ ಕುರಿತಂತೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಟೀಕಿಸುವ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದರು.
ನೂತನ ಅಧ್ಯಕ್ಷರನ್ನು ನೇಮಿಸುವವರೆಗೆ ಸ್ಪೀಕರ್ ಅಬೇವರ್ಧನ ಅವರು ಹಂಗಾಮಿ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. ಜುಲೈ 13ರಂದು ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಕೂಡ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಶ್ರೀಲಂಕಾದಲ್ಲಿ ಸರ್ವಪಕ್ಷಗಳ ಸರ್ಕಾರ ರಚನೆಗೆ ವೇದಿಕೆ ಸಿದ್ಧವಾಗಿದೆ.
ಎಲ್ಟಿಟಿಇ ವಿರುದ್ಧದ ಅಂತರ್ಯುದ್ಧವನ್ನು ಗೆದ್ದಿದ್ದಕ್ಕಾಗಿ ಶ್ರೀಲಂಕಾದಲ್ಲಿ ಅನೇಕರು ವೀರರೆಂದು ಶ್ಲಾಘಿಸಲ್ಪಟ್ಟಿರುವ ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಮತ್ತು ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ ದೇಶದ ಆರ್ಥಿಕ ಬಿಕ್ಕಟ್ಟಿಗೆ ಕಾರಣ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ಮಹಿಂದ ರಾಜಪಕ್ಸೆ ಮೇ ತಿಂಗಳಲ್ಲಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ರಾನಿಲ್ ವಿಕ್ರಮಸಿಂಘೆ ಶ್ರೀಲಂಕಾ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಆದರೂ ಶ್ರೀಲಂಕಾದ ಪರಿಸ್ಥಿತಿ ಸುಧಾರಣೆ ಕಾಣಲಿಲ್ಲ.
ಭಾರತೀಯ ಕೋಸ್ಟ್ ಗಾರ್ಡ್ ತನ್ನ ಹೋವರ್ಕ್ರಾಫ್ಟ್ಗಳು, ವಿಮಾನಗಳು ಮತ್ತು ಗಸ್ತು ದೋಣಿಗಳನ್ನು ನಿಯೋಜಿಸಿದ್ದು, ಶ್ರೀಲಂಕಾದಿಂದ ನಿರಾಶ್ರಿತರು ದೇಶದ ಒಳಗಡೆ ಬರದಂತೆ ಎಚ್ಚರಿಕೆ ವಹಿಸಿದೆ.
Recommended Video