ಮೋದಿ ಫೋಟೋ ಬಳಸುವ ಆಯುಷ್ಮಾನ್ ಭಾರತ್ ಯೋಜನೆಯಿಂದ ಹಿಂದಕ್ಕೆ ಸರಿದ ಮಮತಾ
ಕೋಲ್ಕತ್ತಾ, ಜನವರಿ 10: "ನಾವು ಆಯುಷ್ಮಾನ್ ಭಾರತ್ ಯೋಜನೆಯಿಂದ ಹಿಂದಕ್ಕೆ ಸರಿಯುತ್ತಿದ್ದೇವೆ. ನಮ್ಮ ರಾಜ್ಯವು ಈ ಯೋಜನೆಗೆ 40% ಅನುದಾನ ನೀಡುವುದಿಲ್ಲ" ಎಂದು ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಆಯುಷ್ಮಾನ್ ಭಾರತ್-ಪ್ರಧಾನ್ ಮಂತ್ರಿ ಜನ್ ಆರೋಗ್ಯ ಯೋಜನಾಗೆ ಕೇಂದ್ರ ಹಾಗೂ ರಾಜ್ಯ ಸರಕಾರ ಎರಡೂ ಅನುದಾನ ನೀಡುತ್ತಿದೆ. ಆದರೆ ಕೇಂದ್ರ ಸರಕಾರ ಅಧಿಕೃತ ಸಂವಹನದಲ್ಲಿ ಪ್ರಧಾನಮಂತ್ರಿ ಮೋದಿ ಅವರ ಚಿತ್ರಗಳನ್ನು ಮಾತ್ರ ಬಳಸಲಾಗುತ್ತಿದೆ. ಆದ್ದರಿಂದ ಪಶ್ಚಿಮ ಬಂಗಾಲದ ಪಾಲನ್ನು ನೀಡುವುದಿಲ್ಲ ಎಂಬ ತೀರ್ಮಾನಕ್ಕೆ ಬರಲಾಗಿದೆ.
ಮಮತಾಗೆ ಪ್ರಧಾನಿ ಆಗುವ ಅವಕಾಶಗಳಿವೆ ಎಂದ ಬಿಜೆಪಿ ನಾಯಕ
ಆಯುಷ್ಮಾನ್ ಯೋಜನೆಗೆ ರಾಜ್ಯ ಸರಕಾರ 40% ಅನುದಾನ ನೀಡಿದರೆ, ಕೇಂದ್ರ ಸರಕಾರ 60% ಅನುದಾನ ನೀಡುತ್ತದೆ. ಈ ಯೋಜನೆಯ ಶ್ರೇಯವನ್ನು ಪ್ರಧಾನಿ ನರೇಂದ್ರ ಮೋದಿ ಏಕಪಕ್ಷೀಯವಾಗಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಮಮತಾ ಬ್ಯಾನರ್ಜಿ ಆರೋಪ ಮಾಡಿದ್ದಾರೆ.
ಈ ಯೋಜನೆಯ ಎಲ್ಲ ಅಧಿಕೃತ ಸಂವಹನದಲ್ಲಿ ಕೇಂದ್ರ ಸರಕಾರವು ಪ್ರಧಾನ ಮಂತ್ರಿ ಫೋಟೋ ಹಾಕಿ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ. ಯೋಜನೆಯ ಲೋಗೋ ಕೂಡ ಭಾರತೀಯ ಜನತಾ ಪಕ್ಷದ ಸಂಕೇತವನ್ನು ಹೋಲುವಂತೆಯೇ ಇದೆ ಎಂದು ಬ್ಯಾನರ್ಜಿ ಆರೋಪಿಸಿದ್ದಾರೆ.
ಜಗತ್ತಿನ ಅತಿ ದೊಡ್ಡ ಸಾರ್ವಜನಿಕ ಆರೋಗ್ಯ ವಿಮಾ ಯೋಜನೆಯಾದ ಆಯುಷ್ಮಾನ್ ಭಾರತ್ ಅನ್ನು ಕಳೆದ ವರ್ಷ ಸೆಪ್ಟೆಂಬರ್ ಇಪ್ಪತ್ಮೂರರಂದು ಆರಂಭಿಸಲಾಗಿತ್ತು. ಈ ಯೋಜನೆ ಅಡಿಯಲ್ಲಿ ಐದು ಲಕ್ಷ ರುಪಾಯಿವರೆಗೆ ಕವರೇಜ್ ಆಗುತ್ತದೆ. ಇದರಿಂದ ಹತ್ತು ಕೋಟಿ ಕುಟುಂಬಗಳಿಗೆ ಅನುಕೂಲ ಆಗುತ್ತದೆ ಎನ್ನಲಾಗಿದೆ.
ಸಚಿತ್ರ ಸುದ್ದಿ: ಆಯುಷ್ಮಾನ್ ಭಾರತ್ ಪ್ರಯೋಜನ ಪಡೆಯುವುದು ಹೇಗೆ?
ಮಮತಾ ಆಕ್ರೋಶಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡರು, ಎಲ್ಲ ರಾಜ್ಯಗಳಂತೆಯೇ ಪಶ್ಚಿಮ ಬಂಗಾಲ ಕೂಡ ತೆರಿಗೆಯಲ್ಲಿ ಪಾಲು ಪಡೆಯುತ್ತದೆ. ಆದರೆ ಮಮತಾ ಅವರು ಪ್ರತ್ಯೇಕ ದೇಶ ನಡೆಸುತ್ತಿರುವಂತೆ ವರ್ತಿಸುತ್ತಿದ್ದಾರೆ. ಇದಕ್ಕಿಂತ ಹೆಚ್ಚಾಗಿ ಬಸ್ ಸ್ಟ್ಯಾಂಡ್ ನಿಂದ ಸಾರ್ವಜನಿಕ ಶೌಚಾಲಯದ ತನಕ ಅವರ ಫೋಟೋಗಳನ್ನು ನೋಡುತ್ತಿರುತ್ತೇವೆ ಎಂದಿದ್ದಾರೆ.
ಇನ್ನು ರೈತರ ವಿಮೆ ವಿಚಾರವಾಗಿ ಹೇಳಿಕೆ ನೀಡಿದ್ದ ಮಮತಾ, ಕೇಂದ್ರ ಸರಕಾರ ಈ ಯೋಜನೆಗೆ 20% ನೀಡುತ್ತಿದ್ದರೆ, ರಾಜ್ಯ ಸರಕಾರ 80ರಷ್ಟು ಪ್ರೀಮಿಯಂ ಪಾವತಿಸುತ್ತಿದೆ. ಇನ್ನು ಮುಂದೆ ಪೂರ್ತಿ ಮೊತ್ತ ನಾವೇ ನೀಡುತ್ತೇವೆ ಎಂದಿದ್ದರು.
ರಾಜ್ಯ ಸರಕಾರಕ್ಕೆ ಸಂಬಂಧಿಸಿದ ಸಂಗತಿಗಳಲ್ಲಿ ಕೇಂದ್ರ ಹಸ್ತಕ್ಷೇಪ ಮಾಡುತ್ತಿದೆ ಎಂಬ ವಿಚಾರವಾಗಿ ಮಾತನಾಡಿದ ಮಮತಾ, ಕೇಂದ್ರ ಸರಕಾರವು ರಾಜ್ಯಗಳಲ್ಲಿ ಪರ್ಯಾಯ ಆಡಳಿತ ನಡೆಸಲು ಯತ್ನಿಸುತ್ತಿದೆ. ಕೇಂದ್ರದ ವಿಚಾರಗಳಿಗೆ ನಾವು ತಲೆ ಹಾಕಲ್ಲ. ರಕ್ಷಣಾ ವ್ಯವಹಾರಗಳು ಕೇಂದ್ರಕ್ಕೆ ಸೇರಿದ್ದು. ರಫೇಲ್ ವ್ಯವಹಾರ ಮಾಡುವಾಗ ನನ್ನನ್ನು ನೀವು ಕೇಳಿಲ್ಲ. ನೀವು ಯಾಕೆ ರಾಜ್ಯದ ವಿಚಾರಗಳಿಗೆ ತಲೆ ಹಾಕ್ತೀರಿ? ಎಂದು ಪ್ರಶ್ನಿಸಿದ್ದಾರೆ.