ವಿದ್ಯಾಸಾಗರ್ ಭವ್ಯ ಪ್ರತಿಮೆ ನಿರ್ಮಾಣ, ಮೋದಿ: ನಿಮ್ಮ ದುಡ್ಡು ಯಾರಿಗೆ ಬೇಕು, ಮಮತಾ
ನವದೆಹಲಿ, ಮೇ 16: ಅಮಿತ್ ಶಾ ರೋಡ್ ಶೋ ವೇಳೆ ಭಗ್ನಗೊಂಡಿದ್ದ ಹತ್ತೊಂಬತ್ತನೇ ಶತಮಾನದ ಸಮಾಜ ಸುಧಾರಕ ಈಶ್ವರಚಂದ್ರ ವಿದ್ಯಾಸಾಗರ್ ಪ್ರತಿಮೆಯನ್ನು ಇದ್ದ ಜಾಗದಲ್ಲೇ ಭವ್ಯವಾಗಿ ನಿರ್ಮಾಣ ಮಾಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ಗೂಂಡಾಗಿರಿಯಿಂದ ವಿದ್ಯಾಸಾಗರ್ ಅವರ ಪ್ರತಿಮೆ ಭಗ್ನಗೊಂಡಿದೆ. ಅಂತವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕಿದೆ. ಎಲ್ಲಿ ಪ್ರತಿಮೆ ಸ್ಥಾಪನೆಯಾಗಿತ್ತೋ, ಅದೇ ಜಾಗದಲ್ಲಿ ಇನ್ನೂ ಭವ್ಯವಾಗಿ ಪಂಚಲೋಹದಿಂದ ಈಶ್ವರಚಂದ್ರ ವಿದ್ಯಾಸಾಗರ ಪ್ರತಿಮೆ ನಿರ್ಮಾಣ ಮಾಡಲಾಗುವುದು ಎಂದು ಮೋದಿ ಭರವಸೆಯನ್ನು ನೀಡಿದರು.
ನುಡಿದಂತೆ ಎರಡೇ ದಿನದಲ್ಲಿ ಬಿಜೆಪಿ ವಿರುದ್ದ ಸೇಡು ತೀರಿಸಿಕೊಂಡ ಮಮತಾ: ಮೋದಿ ವಾಗ್ದಾಳಿ
ಉತ್ತರಪ್ರದೇಶದ ಚುನಾವಣಾ ಸಭೆಯಲ್ಲಿ ಮಾತನಾಡುತ್ತಿದ್ದ ಮೋದಿ, ಟಿಎಂಸಿ ಗೂಂಡಾಗಳು ಪ್ರತಿಮೆಯನ್ನು ಭಗ್ನಗೊಳಿಸಿದ್ದಾರೆ. ನಾವು ವಿದ್ಯಾಸಾಗರ್ ಅವರ ದೂರದೃಷ್ಟಿಯನ್ನು ಪಾಲಿಸುವವರು. ಟಿಎಂಸಿ ಕಾರ್ಯಕರ್ತರು ತೋರಿದ ಈ ದುರ್ವರ್ತನೆಗೆ ಸರಿಯಾದ ಪಾಠ ಕಲಿಸಬೇಕಾಗಿದೆ ಎಂದು ಮೋದಿ ಮತದಾರರಲ್ಲಿ ಮನವಿ ಮಾಡಿದರು.
ಮೋದಿ ಹೇಳಿಕೆಗೆ ಕೂಡಲೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿ, ಪ್ರಧಾನಿಗಳು ವಿದ್ಯಾಸಾಗರ್ ಅವರ ಪ್ರತಿಮೆಯನ್ನು ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ. ಅವರು ದುಡ್ಡು ನಮಗ್ಯಾಕೆ, ಬೆಂಗಾಳಿಯವರ ಬಳಿ ಪ್ರತಿಮೆ ನಿರ್ಮಾಣ ಮಾಡಲು ಬೇಕಾದಷ್ಟು ದಾರಿಗಳಿವೆ ಎಂದು ತಿರುಗೇಟು ನೀಡಿದ್ದಾರೆ.
'ಇಂಚ್ ಇಂಚ್ ಕಾ ಬದ್ಲಾ' ಎಂದು ಎರಡು ದಿನಗಳ ಹಿಂದೆ ಮಮತಾ ಸಾರ್ವಜನಿಕವಾಗಿ ಹೇಳಿದ್ದರು. ಅದರಂತೆಯೇ, 24ಗಂಟೆಯಲ್ಲೇ ಕೊಲ್ಕತ್ತಾದ ಹಿಂಸಾಚಾರದ ಮೂಲಕ ಸೇಡು ತೀರಿಸಿಕೊಂಡಿದ್ದಾರೆಂದು ಮೋದಿ ಸಾರ್ವಜನಿಕ ಸಭೆಯಲ್ಲಿ ಮಮತಾ ವಿರುದ್ದ ಕಿಡಿಕಾರಿದ್ದರು.
ದೀದಿ ವಿರುದ್ಧ ಮೋದಿ, ಶಾ ವ್ಯವಸ್ಥಿತ ಷಡ್ಯಂತ್ರ : ಮಾಯಾವತಿ ಆಕ್ರೋಶ
ಸಮಾಜ ಸುಧಾರಕ ಈಶ್ವರಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆ ಭಗ್ನಗೊಂಡ ನಂತರ, ಅಮಿತ್ ಶಾ ರೋಡ್ ಶೋ ನಡೆಸಿದ್ದ ಮಾರ್ಗದಲ್ಲೇ ತಾನೂ ಪಾದಯಾತ್ರೆ ಮಾಡಿದ್ದ ಮಮತಾ, ಬಿಜೆಪಿ ವಿರುದ್ದ ಕಿಡಿಕಾರಿದ್ದರು.
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಆ ಪಕ್ಷದ ನಾಯಕರು ಅತ್ಯಂತ ವ್ಯವಸ್ಥಿತವಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಬಹುಜನ ಸಮಾಜ ಪಕ್ಷದ ನಾಯಕಿ ಕುಮಾರಿ ಮಾಯಾವತಿ ಟೀಕಿಸಿದ್ದರು.