"ಬಾಂಗ್ಲಾಗೆ ಹೋಗಿರುವ ಪ್ರಧಾನಿ ಮೋದಿ ವೀಸಾ ರದ್ದುಗೊಳಿಸುವುದಿಲ್ಲವೇ?"
ಕೋಲ್ಕತ್ತಾ, ಮಾರ್ಚ್ 27: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗಳು ನಡೆಯುತ್ತಿದ್ದರೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಾಂಗ್ಲಾದೇಶಕ್ಕೆ ಹೋಗಿ ಬಂಗಾಳಿಯರ ಬಗ್ಗೆ ಭಾಷಣ ಮಾಡುತ್ತಿರುವುದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಅಲ್ಲವೇ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಶ್ನೆ ಮಾಡಿದ್ದಾರೆ.
ಖರಗ್ಪುರ ಕ್ಷೇತ್ರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ಮುಂದುವರಿಸಿದರು. ಕೆಲವು ಬಾರಿ ಪ್ರಧಾನಿ ಮೋದಿಯವರು ಬಾಂಗ್ಲಾದೇಶದಿಂದ ಜನರ ನುಸುಳುವಿಕೆಗೆ ಮಮತಾ ಬ್ಯಾನರ್ಜಿಯೇ ಕಾರಣ ಎಂದು ದೂಷಿಸುತ್ತಾರೆ. ಆದರೆ ಇಂದು ಅದೇ ಬಾಂಗ್ಲಾದೇಶಕ್ಕೆ ಹೋಗಿ ವೋಟ್ ಮಾರ್ಕೆಟಿಂಗ್ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
130 ಕೋಟಿ ಭಾರತೀಯರ ಪ್ರೀತಿಯನ್ನು ನಿಮಗೆ ತಂದಿದ್ದೇನೆ; ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಇತ್ತೀಚಿನ ನಡುವಳಿಕೆಯನ್ನು ನೋಡುತ್ತಿದ್ದರೆ ಆ ಮನುಷ್ಯನಿಗೆ ಎಲ್ಲೋ "ಸ್ಕ್ರೂ ಲೂಸ್" (ತಲೆ ಕೆಟ್ಟಿರಬೇಕು) ಆಗಿರಬೇಕು ಎಂದು ತೃಣಮೂಲ ಕಾಂಗ್ರೆಸ್ ಪಕ್ಷ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಶುಕ್ರವಾರವಷ್ಟೇ ಲೇವಡಿ ಮಾಡಿದ್ದರು.
ಪ್ರಧಾನಿ ಮೋದಿ ವೀಸಾ ರದ್ದುಪಡಿಸಬೇಕೇ?:
2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಾಂಗ್ಲಾದೇಶದ ಒಬ್ಬ ನಟ ನಮ್ಮ ಪ್ರಚಾರದ ವೇದಿಕೆಯಲ್ಲಿ ಹಾಜರಾಗಿದ್ದರು. ಬಿಜೆಪಿಯು ಬಾಂಗ್ಲಾದೇಶ ಸರ್ಕಾರದ ಜೊತೆಗೆ ಚರ್ಚಿಸಿ ಆ ನಟನ ವೀಸಾವನ್ನೇ ರದ್ದುಗೊಳಿಸಿತ್ತು. ಇದೀಗ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗಳು ನಡೆಯುತ್ತಿವೆ. ನೀವು (ಪ್ರಧಾನಿ) ಬಾಂಗ್ಲಾದೇಶಕ್ಕೆ ಹೋಗಿ ಅಲ್ಲಿರುವ ಒಂದು ವರ್ಗದ ಮತಗಳನ್ನು ಸೆಳೆಯುವುದಕ್ಕಾಗಿ ಭಾಷಣ ಮಾಡುತ್ತಿದ್ದೀರಿ. ಈಗ ನಿಮ್ಮ ವೀಸಾವನ್ನು ರದ್ದುಗೊಳಿಸಬೇಕಲ್ಲವೇ. ನಾವು ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದರು.
ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಚುನಾವಣೆ:
ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 27ರಂದು ರಾಜ್ಯದ 30 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಇದರ ಬಳಿಕ ಏಪ್ರಿಲ್ 1, ಏಪ್ರಿಲ್ 6, ಏಪ್ರಿಲ್ 10, ಏಪ್ರಿಲ್ 17, ಏಪ್ರಿಲ್ 22, ಏಪ್ರಿಲ್ 26 ಮತ್ತು ಏಪ್ರಿಲ್ 29ರಂದು ಮತದಾನ ನಡೆಯಲಿದೆ. ಚುನಾವಣೆಯ ಅಂತಿಮ ಫಲಿತಾಂಶ ಮೇ 2ರಂದು ಹೊರ ಬೀಳಲಿದೆ.