ನುಡಿದಂತೆ ಎರಡೇ ದಿನದಲ್ಲಿ ಬಿಜೆಪಿ ವಿರುದ್ದ ಸೇಡು ತೀರಿಸಿಕೊಂಡ ಮಮತಾ: ಮೋದಿ ವಾಗ್ದಾಳಿ
ನವದೆಹಲಿ, ಮೇ 16: ತನ್ನದೇ ನೆರಳಿಗೂ ಭಯಪಡುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನುಡಿದಂತೆ ಎರಡೇ ದಿನಗಳಲ್ಲಿ ಬಿಜೆಪಿ ವಿರುದ್ದ ಸೇಡು ತೀರಿಸಿಕೊಂಡಿದ್ದಾರೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ.ಬಂಗಾಳದ ಬಸಿರ್ ಹತ್ ನಲ್ಲಿನ ಚುನಾವಣಾ ರ್ಯಾಲಿಯಲ್ಲಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ, 'ಇಂಚ್ ಇಂಚ್ ಕಾ ಬದ್ಲಾ' ಎಂದು ಎರಡು ದಿನಗಳ ಹಿಂದೆ ಸಾರ್ವಜನಿಕವಾಗಿ ಹೇಳಿದ್ದರು. ಅದರಂತೆಯೇ, 24ಗಂಟೆಯಲ್ಲೇ ಕೊಲ್ಕತ್ತಾದ ಹಿಂಸಾಚಾರದ ಮೂಲಕ ಸೇಡು ತೀರಿಸಿಕೊಂಡಿದ್ದಾರೆಂದು ಮೋದಿ ಹೇಳಿದ್ದಾರೆ.
ನುಡಿದಂತೆ ಎರಡೇ ದಿನದಲ್ಲಿ ಬಿಜೆಪಿ ವಿರುದ್ದ ಸೇಡು ತೀರಿಸಿಕೊಂಡ ಮಮತಾ
19ನೇ ಶತಮಾನದ ಸಮಾಜ ಸುಧಾರಕ ಈಶ್ವರಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆ ಭಗ್ನಗೊಂಡ ನಂತರ, ಅಮಿತ್ ಶಾ ರೋಡ್ ಶೋ ನಡೆಸಿದ್ದ ಮಾರ್ಗದಲ್ಲೇ ತಾನೂ ಪಾದಯಾತ್ರೆ ಮಾಡಿದ್ದ ಮಮತಾ, ಬಿಜೆಪಿ ವಿರುದ್ದ ಕಿಡಿಕಾರಿದ್ದರು.
35ವರ್ಷಗಳ ಕಮ್ಯೂನಿಸ್ಟ್ ಆಡಳಿತದ ನಂತರ ಅಧಿಕಾರಕ್ಕೆ ಬಂದಿರುವ ಮಮತಾ ಈಗ ಬಿಜೆಪಿಯ ಅಲೆಯನ್ನು ನೋಡಿ ಹೆದರುತ್ತಿದ್ದಾರೆ. ಭಯಪಟ್ಟಾಗ ದೀದಿಯ ಶಕ್ತಿ ಏನು ಎನ್ನುವುದು ಬಂಗಾಳದ ಮತದಾರರಿಗೆ ಅರಿತಿದೆ ಎಂದು ಮೋದಿ ಲೇವಡಿ ಮಾಡಿದ್ದಾರೆ.
ಬಿಜೆಪಿ ವಿರುದ್ದ ಮಮತಾ ದೀದಿಗೆ ಈ ಪರಿ ಸಿಟ್ಟು, ಭಯ ಇದೇ ಕಾರಣಕ್ಕಾ?
ಹೇಗೂ ನೀವು ನನಗೆ ಉಡುಗೊರೆಯನ್ನು ಕಳುಹಿಸುತ್ತೀರಿ, ಈ ಬಾರಿಯ ನನ್ನ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ, ನನ್ನ ಕೆಟ್ಟದಾದ ವ್ಯಂಗ್ಯಚಿತ್ರವನ್ನು ಕಳುಹಿಸಿಕೊಡಿ ಎಂದು ಮೋದಿ, ಬಿಜೆಪಿ ಯುವನಾಯಕಿಯ ಬಂಧನಕ್ಕೆ ಕಾರಣವಾದ ಮಮತಾ ಭಾವಚಿತ್ರದ ಘಟನೆಯನ್ನು ಕೆದಕಿದ್ದಾರೆ.
ಕಳೆದ ಬಾರಿ ಎರಡು ಸ್ಥಾನದಲ್ಲಿ ಗೆದ್ದಿದ್ದ ಬಿಜೆಪಿ ಈ ಬಾರಿ ಪಶ್ಚಿಮ ಬಂಗಾಳದಿಂದ ಹನ್ನೆರಡಕ್ಕೂ ಹೆಚ್ಚು ಸ್ಥಾನವನ್ನು ನಿರೀಕ್ಷಿಸುತ್ತಿದೆ. ಕೊನೆಯ ಹಂತದ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಕೊಲ್ಕತ್ತಾ ಮಹಾನಗರವ್ಯಾಪ್ತಿ ಸೇರಿದಂತೆ ಒಂಬತ್ತು ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.