ಪಶ್ಚಿಮಬಂಗಾಳದಲ್ಲಿ ರಣಕಹಳೆ ಊದಲಿರುವ ಮೋದಿ, ದೀದಿ
Recommended Video
ಕೋಲ್ಕತ್ತಾ, ಮಾರ್ಚ್ 03: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಮಾವೇಶ ನಡೆಸಲಿದ್ದು, ಇಡೀ ದೇಶದ ಕಣ್ಣೂ ಬಂಗಾಳದತ್ತ ನೆಟ್ಟಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಸಿಲಿಗುರಿಯಲ್ಲಿ ಸಮಾವೇಶ ನಡೆಸಲಿದ್ದರೆ, ಮಮತಾ ಬ್ಯಾನರ್ಜಿ ಉತ್ತರ ಬಂಗಾಳದ ದಿನ್ಹಟದಲ್ಲಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮಮತಾ ಬ್ಯಾನರ್ಜಿ ಅವರೂ ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಕಾರಣ ಇಬ್ಬರ ಸಮಾವೇಶವೂ ಒಂದೇ ದಿನ, ಒಂದೇ ರಾಜ್ಯದಲ್ಲಿ ನಡೆಯುತ್ತಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.
ಪಶ್ಚಿಮ ಬಂಗಾಳವು 42 ಲೋಕಸಭಾ ಕ್ಷೇತ್ರಗಳನ್ನು ಹೊಂದುವ ಮೂಲಕ ಅತೀ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಹೊಂದಿದ ಮೂರನೇ(ಉತ್ತರ ಪ್ರದೇಶ- 80, ಮಹಾರಾಷ್ಟ್ರ-48) ರಾಜ್ಯವಾಗಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹೆಚ್ಚು ಜನಪ್ರಿಯತೆ ಗಳಿಸದಿದ್ದರೂ, ಕಳೆದ ಪಂಚಾಯತ್ ಚುನಾವಣೆ, ಉಪಚುನಾವಣೆಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ ಲೋಕಸಭಾ ಚುನಾವಣೆಯಲ್ಲೂ ನಾಯಕರು ಭರವಸೆ ಹೊಂದಿದ್ದಾರೆ.
ರಾಜ್ಯದಲ್ಲಿ ಬಿಜೆಪಿ 23 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಪಕ್ಷಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಇಂದು ಮಧ್ಯಾಹ್ನ 1 ಗಂಟೆಗೆ ಮೋದಿ ಅವರ ಸಮಾವೇಶ ಆರಂಭವಾದರೆ, 3 ಗಂಟೆಗೆ ದೀದಿ ಸಮಾವೇಶ ಆರಂಭವಾಗಲಿದೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುಖಂಡರಾದ ಅಮಿತ್ ಶಾ, ಯೋಗಿ ಆದಿತ್ಯನಾಥ್, ರಾಜನಾಥ್ ಸಿಂಗ್, ಸ್ಮೃತಿ ಇರಾನಿ ಮುಂತಾದವರು ಸಹ ಬೇರೆ ಬೇರೆ ದಿನ ಪ್ರಚಾರ ನಡೆಸಲಿದ್ದಾರೆ.