Breaking: ಇಡಿ ವಶಪಡಿಸಿಕೊಂಡ ಹಣ ನನ್ನದಲ್ಲ: ಪಾರ್ಥ ಚಟರ್ಜಿ
ಕೋಲ್ಕತ್ತಾ, ಜುಲೈ 31: ಶಿಕ್ಷಕರ ನೇಮಕಾತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಬಂಧನದಲ್ಲಿರುವ ಪಶ್ಚಿಮ ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ, ಇಡಿ ದಾಳಿ ವೇಳೆ ದೊರಕಿರುವ ಹಣ ನನ್ನದಲ್ಲ ಎಂದು ಹೇಳಿದ್ದಾರೆ.
ಕೋಲ್ಕತ್ತಾದಲ್ಲಿರುವ ಅವರ ಸಹಾಯಕಿ ಅರ್ಪಿತಾ ಮುಖರ್ಜಿ ಅವರ ಮನೆಗಳಿಂದ ರಾಶಿಗಟ್ಟಲೆ ನಗದು ಮತ್ತು ಕಿಲೋಗಟ್ಟಲೆ ಚಿನ್ನವನ್ನು ವಶಪಡಿಸಿಕೊಂಡ ಕೆಲವು ದಿನಗಳ ನಂತರ, ಪಾರ್ಥ ಚಟರ್ಜಿ ಭಾನುವಾರ ಹಣ ತನಗೆ ಸೇರಿದ್ದಲ್ಲ ಎಂದು ಹೇಳಿದ್ದಾರೆ.
ಬಲಗೈ ಬಂಟರಂತಿದ್ದ ಪಾರ್ಥ ಚಟರ್ಜಿಯನ್ನು ಸಿಎಂ ಮಮತಾ ಕೈಬಿಟ್ಟಿದ್ದೇಕೆ?
ಶಿಕ್ಷಕರ ನೇಮಕಾತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ದಾಳಿಯ ವೇಳೆ ಅರ್ಪಿತಾ ಮುಖರ್ಜಿ ಅವರಿಗೆ ಸೇರಿದ ಎರಡು ಮನೆಗಳಿಂದ ಸುಮಾರು 50 ಕೋಟಿ ರೂಪಾಯಿ ಹಣವನ್ನು ವಶಪಡಿಸಿಕೊಂಡಿದೆ. ಪಾರ್ಥ ಚಟರ್ಜಿ ಮತ್ತು ಅರ್ಪಿತಾ ಮುಖರ್ಜಿ ಇಬ್ಬರನ್ನೂ ಈ ತಿಂಗಳ ಆರಂಭದಲ್ಲಿ ಬಂಧಿಸಲಾಗಿದೆ.
ಇದೀಗ ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಂಡಿರುವ ಮಾಜಿ ಸಚಿವರನ್ನು ಇಂದು ಕೋಲ್ಕತ್ತಾದ ಕೇಂದ್ರ ಸರ್ಕಾರ ನಡೆಸುವ ಆಸ್ಪತ್ರೆಗೆ ತಪಾಸಣೆಗಾಗಿ ಕರೆತಂದಾಗ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.
ಯಾರಾದರೂ ತಮ್ಮ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು 'ಸಮಯ ಬಂದಾಗ ಎಲ್ಲವನ್ನೂ ನೀವೇ ತಿಳಿದುಕೊಳ್ಳುತ್ತಿರಿ' ಎಂದಿದ್ದಾರೆ.
ಅರ್ಪಿತಾ ಮುಖರ್ಜಿಯವರ ಮನೆಗಳಿಂದ ವಶಪಡಿಸಿಕೊಂಡಿರುವ ಹಣದ ಬಗೆಗಿನ ಪ್ರಶ್ನೆಗಳಿಗೆ "ಇದು ನನ್ನ ಹಣವಲ್ಲ" ಎಂದು ಅವರು ಉತ್ತರಿಸಿದರು.
ಹಣವಷ್ಟೇ ಅಲ್ಲದೆ, ಇಡಿ ಅಧಿಕಾರಿಗಳು ಅಪಾರ ಪ್ರಮಾಣದ ವಿದೇಶಿ ವಿನಿಮಯ, ಚಿನ್ನ ಮತ್ತು ಹಗರಣದಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ವಿವಿಧ ಸ್ಥಳಗಳ ದಾಖಲೆಗಳನ್ನು ಸಹ ಪತ್ತೆ ಮಾಡಿದ್ದಾರೆ.
ಈ ಅಕ್ರಮಗಳಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಕೂಡ ಭಾಗಿಯಾಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಆರಂಭದಲ್ಲಿ ಪಾರ್ಥ ಚಟರ್ಜಿಯವರ ಸಮರ್ಥನೆಗಾಗಿ ನಿಂತಿದ್ದ ಟಿಎಂಸಿ ಕೇಂದ್ರವು ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿತು. ಆದರೆ, ಾಪಾರ ಪ್ರಮಾಣದ ಹಣ ದೊರಕಿದ ಬಳಿಕ ತನ್ನ ನಿಲುವನ್ನು ಬದಲಿಸಿ. ಪಾರ್ಥ ಚಟರ್ಜಿ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿತು.