ನಮ್ಮ ಕೆಟ್ಟ ಭಯ ಇಂದು ನಿಜವಾಗಿದೆ: ಮಮತಾ ಬ್ಯಾನರ್ಜಿ
ಕೋಲ್ಕತಾ, ಏಪ್ರಿಲ್ 10: ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯಲ್ಲಿ ನಾಲ್ಕನೆಯ ಹಂತದ ಚುನಾವಣೆ ವೇಳೆ ಮತಗಟ್ಟೆಯ ಒಳಗೆ ಸಿಐಎಸ್ಎಫ್ ಪಡೆಗಳು ಶನಿವಾರ ಗುಂಡು ಹಾರಿಸಿ ನಾಲ್ವರನ್ನು ಹತ್ಯೆ ಮಾಡಿದ ಘಟನೆ ತಲ್ಲಣ ಮೂಡಿಸಿದೆ. ಸ್ಥಳೀಯರ ಗುಂಪೊಂದು ಸಿಐಸಿಎಫ್ ಪಡೆಗಳ ಮೇಲೆ ಹಲ್ಲೆ ನಡೆಸಿದ್ದರಿಂದ ಪ್ರತಿಯಾಗಿ ಅವರು ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.
ಘಟನೆ ಕುರಿತಂತೆ ಕೇಂದ್ರ ಸರ್ಕಾರದ ವಾಗ್ದಾಳಿ ನಡೆಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, 'ಕೇಂದ್ರ ಪಡೆಗಳ ಮೇಲೆ ಗೃಹ ಸಚಿವಾಲಯ ಪ್ರಭಾವ ಬೀರುತ್ತಿದೆ ಎಂದು ನಾವು ಹೇಳುತ್ತಲೇ ಬಂದಿದ್ದೆವು. ಇಂದು ನಮ್ಮ ಈ ಕೆಟ್ಟ ಭಯ ನಿಜವಾಗಿದೆ. ಅವರು ನಾಲ್ವರನ್ನು ಕೊಂದು ಹಾಕಿದ್ದಾರೆ' ಎಂದು ಆರೋಪಿಸಿದ್ದಾರೆ.
ಬಂಗಾಳದಲ್ಲಿ ಮತದಾರರ ಸಾಲಿನ ಮೇಲೆ ಗುಂಡಿನ ದಾಳಿ: ಒಬ್ಬ ಸಾವು
'ಮತದಾರರನ್ನು ಬೆದರಿಸುವಂತೆ ಅಮಿತ್ ಶಾ ಅವರು ಕೇಂದ್ರ ಪಡೆಗಳಿಗೆ ಏಕೆ ಸೂಚಿಸುತ್ತಾರೆ? ನಾವು ಇದರ ವಿರುದ್ಧ ಸೇಡು ತೀರಿಸಿಕೊಳ್ಳಬೇಕು. ಪ್ರತೀಕಾರವೆಂದರೆ ಅವರನ್ನು ಸೋಲಿಸಿ ಹೊರಹಾಕಬೇಕು. ಗುಂಡು ಹಾರಿಸಿದ್ದು ತಮ್ಮ ಆತ್ಮರಕ್ಷಣೆಗೆ ಎಂದು ಅವರು ಹೇಳಿಕೊಳ್ಳುತ್ತಿದ್ದಾರಲ್ಲ?' ಎಂದು ಕಿಡಿಕಾರಿದ್ದಾರೆ.
ಸಿಎಪಿಎಫ್ ಕೂಚ್ಬೆಹಾರ್ನಲ್ಲಿ ಗುಂಡು ಹಾರಿಸಿ ನಾಲ್ವರು ಗ್ರಾಮಸ್ಥರನ್ನು ಹತ್ಯೆ ಮಾಡಿದೆ. ಇದು ಚುನಾವಣಾ ಆಯೋಗದ ನಿಗಾದಲ್ಲಿಯೇ ನಡೆದಿದೆ. ಹೀಗಾಗಿ ಇದಕ್ಕೆ ಚುನಾವಣಾ ಆಯೋಗವೇ ಹೊಣೆ. ನಿರ್ವಚನ ಸದನದಲ್ಲಿರುವ (ಚುನಾವಣಾ ಆಯೋಗದ ಕಚೇರಿ) ಈ ಗೊಂಬೆಗಳು ಮೋದಿಶಾ ಪಡೆಗಳನ್ನು ನಿಯಂತ್ರಿಸಲು ವಿಫಲವಾಗಿವೆ ಎಂಬುದನ್ನು ಭಾರತ ತೋರಿಸಬೇಕಿದೆ ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಟ್ವೀಟ್ ಮಾಡಿದ್ದಾರೆ.