ಮುಖ್ಯಕಾರ್ಯದರ್ಶಿ ವರ್ಗಾವಣೆ ವಿಚಾರವಾಗಿ ಕೇಂದ್ರ vs ಪ.ಬಂಗಾಳ ಹಗ್ಗಜಗ್ಗಾಟ
ಕೊಲ್ಕತ್ತಾ, ಮೇ 31: ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಸ್ಥಾನದಿಂದ ಅಲಪನ್ ಬಂಡೋಪಾಧ್ಯಾಯ್ ಅವರನ್ನು ಬಿಡುಗಡೆಗೊಳಿಸದಿರಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ಸುದೀರ್ಘ ಪತ್ರವನ್ನು ಪ್ರಧಾನಿ ಮೋದಿಗೆ ಬರೆದಿದ್ದು ಸರ್ಕಾರದ ನಿರ್ಧಾರಕ್ಕೆ ಆಘಾತವನ್ನು ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಕಾರ್ಯದರ್ಶಿಯನ್ನು ದೆಹಲಿಗೆ ಕರೆಸಿಕೊಳ್ಳುವ ನಿರ್ಧಾರ ಏಕಪಕ್ಷೀಯವಾಗಿದೆ. ಇದರಿಂದ ತಾನು ಆಘಾತ ಮತ್ತು ದಿಗ್ಭ್ರಮೆಗೊಂಡಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಕಳೆದ ಶುಕ್ರವಾರ ಬಂಡ್ಯೋಪಾಧ್ಯಾಯ ಬೆಳಿಗ್ಗೆ 10 ಗಂಟೆಯೊಳಗೆ ದೆಹಲಿಯ ನಾರ್ತ್ ಬ್ಲಾಕ್ನಲ್ಲಿರುವ ತನ್ನ ಕಚೇರಿಗೆ ವರದಿ ಸಲ್ಲಿಸುವಂತೆ ನಿರ್ದೇಶಿಸಿತ್ತು. ಆದರೆ ಮೇ 31 ಬಂಡೋಪಾದ್ಯಾಯ ಅವರ ನಿವೃತ್ತಿಯ ದಿನದಂದು ಕೇಂದ್ರದ ನಿಯೋಜನೆಗೆ ಬಿಡುಗಡೆಗೊಳಿಸದಿರಲು ಮಮತಾ ಬ್ಯಾನರ್ಜಿ ಸರ್ಕಾರ ನಿರ್ಧರಿಸಿದೆ.
ಲಾಕ್ಡೌನ್ನಿಂದ ನಿರುದ್ಯೋಗ ದುಪ್ಪಟ್ಟಾಗಿದೆ; ರಾಹುಲ್ ಟೀಕೆ
ಕೇಂದ್ರ ಸರ್ಕಾರದ ಆದೇಶದ ಪ್ರಕಾರ ಇಂದು(ಮೇ 31) ದೆಹಲಿಯಲ್ಲಿ ಬಂಡೋಪಾಧ್ಯಾಯ್ ವರದಿ ಮಾಡಬೇಕಾಗಿತ್ತು. ರಾಜ್ಯ ಸರ್ಕಾರಕ್ಕೆ ನೀಡಿರುವ ಆದೇಶದಲ್ಲಿ ತಕ್ಷಣಕ್ಕೆ ಅನ್ವಯವಾಗುವಂತೆ ಮುಖ್ಯಕಾರ್ಯದರ್ಶಿ ಸ್ಥಾನದಿಂದ ಮುಕ್ತಗೊಳಿಸಲು ಸೂಚಿಸಲಾಗಿತ್ತು. ಆದರೆ ಮಮತಾ ಬ್ಯಾನರ್ಜಿ ಬರೆದಿರುವ ಪತ್ರದಲ್ಲಿ ಮುಖ್ಯಕಾರ್ಯರ್ಶಿಯಾಗಿ ಪಶ್ಚಿಮ ಬಂಗಾಳದಲ್ಲಿಯೇ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಅವರು ರಾಜ್ಯದಲ್ಲಿ ಮುಂದುವರಿಯಲಿದ್ದಾರೆ ಎಂದಿದ್ದಾರೆ.
ಅಲಪನ್ ಬಂಡೋಪಾಧ್ಯಾಯ್ ಮೇ 31ರಂದು ನಿವೃತ್ತಿಯಾಗಬೇಕಾಗಿತ್ತು. ಆದರೆ ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆದು ಕಾರ್ಯಾವಧಿಯನ್ನು ಮೂರು ತಿಂಗಳ ಕಾಲ ವಿಸ್ತರಿಸಲು ಪಶ್ಚಿಮ ಬಂಗಾಳ ಸರ್ಕಾರ ಮನವಿ ಮಾಡಿತ್ತು. ಅದಕ್ಕೆ ಒಪ್ಪಿಗೆ ನೀಡಿದ್ದ ಕೇಂದ್ರ ಸರ್ಕಾರ ಆಗಸ್ಟ್ 31ರವರೆಗೆ ಅಲಪನ್ ಬಂಡೋಪಾಧ್ಯಾಯ್ ಅವರ ಸೇವಾವಧಿಯನ್ನು ವಿಸ್ತರಣೆ ಮಾಡಿತ್ತು.