ಮೋದಿ ವಿರುದ್ದ ವಿಪಕ್ಷಗಳ ಬೃಹತ್ ರ್ಯಾಲಿಯಲ್ಲಿ ರಾಹುಲ್ ಉಪಸ್ಥಿತಿ: ಕೆಸಿಆರ್ ಗೈರು?
ಕೋಲ್ಕತ್ತಾ, ಜ 11: ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿಯಿರುವ ಹೊತ್ತಿನಲ್ಲಿ, ವಿಪಕ್ಷಗಳನ್ನು ಒಗ್ಗೂಡಿಸುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಪ್ರಯತ್ನಕ್ಕೆ ಹಿನ್ನಡೆಯಾಗುವ ಸಾಧ್ಯತೆಯಿದೆ.
ಮೋದಿ-ಕೆಸಿಆರ್ ಮಾತುಕತೆ: ನಾಯ್ಡು ಮನಸಲ್ಲಿ ಕಸಿವಿಸಿ!
ಜನವರಿ 19ರಂದು ಕೋಲ್ಕತ್ತಾದಲ್ಲಿ ಆಯೋಜಿಸಲಾಗಿರುವ ಮಹಾ ರ್ಯಾಲಿಗೆ, ತೆಲಂಗಾಣದ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಗೈರಾಗುವ ಸಾಧ್ಯತೆಯಿದೆ. ಕಾಂಗ್ರೆಸ್ ಜೊತೆ ವೇದಿಕೆ ಹಂಚಿಕೊಳ್ಳಲು, ಕೆಸಿಆರ್ ಆಸಕ್ತಿ ತೋರದೇ ಇರುವುದರಿಂದ, ಬಹುತೇಕ ಈ ರ್ಯಾಲಿಯಿಂದ ಕೆಸಿಆರ್ ದೂರ ಉಳಿಯುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನುವ ಮಾಹಿತಿಯಿದೆ.
ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಚಂದ್ರಶೇಖರ ರಾವ್ ನೇತೃತ್ವದ ಟಿಆರ್ ಎಸ್ ಪಕ್ಷ ಅಭೂತಪೂರ್ವ ಜಯಸಾಧಿಸಿ ಮತ್ತೆ ಅಧಿಕಾರಕ್ಕೇರಿತ್ತು. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ಹೊರತು ಪಡಿಸಿ ಫೆಡರಲ್ ಫ್ರಂಟ್ ಮೂಲಕ, ಲೋಕಸಭಾ ಚುನಾವಣೆಯನ್ನು ಎದುರಿಸುವ ಸಂಬಂಧ, ಮಮತಾ ಬ್ಯಾನರ್ಜಿ ಜೊತೆ ಮಾತುಕತೆಗೆ ಕೆಸಿಆರ್ ಆಗಮಿಸಿದ್ದರು.
ಈ ವೇಳೆ, ವಿಪಕ್ಷಗಳ ಸಭೆಗೆ ಕೆಸಿಆರ್ ಅವರನ್ನು ಮಮತಾ ಆಹ್ವಾನಿಸಿದ್ದರು. ಆದರೆ, ಕಾಂಗ್ರೆಸ್ ಪಕ್ಷವನ್ನು ಒಳಗೊಂಡ ಮೈತ್ರಿಗೆ ಕೆಸಿಆರ್ ಉತ್ಸಾಹ ತೋರಿರಲಿಲ್ಲ ಎನ್ನುವ ಮಾಹಿತಿಯಿದೆ. ಟಿಆರ್ ಎಸ್ ಪಕ್ಷದ ಮುಖಂಡ ಬಿ ವಿನೋದ್ ಕುಮಾರ್ ಪ್ರಕಾರ, ರಾಹುಲ್ ಗಾಂಧಿ ಜೊತೆ ಚಂದ್ರಶೇಖರ ರಾವ್ ವೇದಿಕೆ ಹಂಚಿಕೊಳ್ಳುವ ಸಾಧ್ಯತೆ ತೀರಾ ಕಮ್ಮಿ.
ಕುತೂಹಲ ಕೆರಳಿಸಿದ ಮೋದಿ-ಕೆಸಿಆರ್ ಭೇಟಿ, ಉಭಯ ನಾಯಕರು ಚರ್ಚಿಸಿದ್ದೇನು?
ಕಳೆದ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ರಾಹುಲ್ ಗಾಂಧಿಯವರನ್ನು 'ಅತಿದೊಡ್ಡ ಬಫೂನ್' ಎಂದು ಕೆಸಿಆರ್ ಲೇವಡಿ ಮಾಡಿದ್ದರು. ಕೆಸಿಆರ್ ಅಂದರೆ 'ಖಾವೋ ಕಮಿಷನ್ ರಾವ್' ಎಂದು ರಾಹುಲ್ ಗಾಂಧಿ ಕೂಡಾ ತೆಲಂಗಾಣ ಸಿಎಂಗೆ ತಿರುಗೇಟು ನೀಡಿದ್ದರು.
"ಸಂಯುಕ್ತ ಕೂಟದ ನೇತೃತ್ವ ಹೊತ್ತು, ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಹೊರಗಿಟ್ಟು ಪ್ರಾದೇಶಿಕ ಪಕ್ಷಗಳ ಒಕ್ಕೂಟ ರಚಿಸಲು ಹೊರಟ ಕೆಸಿಆರ್, ಪ್ರಧಾನಿ ಮೋದಿಯವರನ್ನು ಭೇಟಿಯಾಗುವ ಅಗತ್ಯವೇನಿತ್ತು?" ಎಂದು ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಪ್ರಶ್ನಿಸಿದ್ದರು.