ಬಿಜೆಪಿಗೆ ಪೆಟ್ಟು ಕೊಟ್ಟ ಎನ್ಆರ್ಸಿ: ಬಂಗಾಳದ ಮೂರೂ ಕ್ಷೇತ್ರಗಳಲ್ಲಿ ಸೋಲಿನ ಆಘಾತ
ಕೋಲ್ಕತಾ, ನವೆಂಬರ್ 28: ಕರ್ನಾಟಕದಲ್ಲಿ 15 ಕ್ಷೇತ್ರಗಳ ಉಪ ಚುನಾವಣೆಗೆ ಸಿದ್ಧತೆ ನಡೆಯುತ್ತಿರುವ ವೇಳೆಯೇ ಪಶ್ಚಿಮ ಬಂಗಾಳದಲ್ಲಿ ನಡೆದ ಉಪ ಚುನಾವಣೆಯಲ್ಲಿ ಮೂರೂ ಕ್ಷೇತ್ರಗಳಲ್ಲಿ ಬಿಜೆಪಿಗೆ ಆಘಾತ ಎದುರಾಗಿದೆ. ರಾಷ್ಟ್ರೀಯ ಪೌರತ್ವ ನೋಂದಣಿಯನ್ನು (ಎನ್ಆರ್ಸಿ) ಮುಂದಿಟ್ಟುಕೊಂಡು ಪ್ರಚಾರ ನಡೆಸಿದ್ದ ಬಿಜೆಪಿಗೆ ಮತದಾರರ ಬೆಂಬಲ ದೊರಕಿಲ್ಲ.
ಆರು ತಿಂಗಳ ಹಿಂದಷ್ಟೇ ನಡೆದ ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ಗೆ ಸೆಡ್ಡು ಹೊಡೆದು ಅನಿರೀಕ್ಷಿತ ಫಲಿತಾಂಶ ಪಡೆದಿದ್ದ ಬಿಜೆಪಿಗೆ ಕಾಲಿಯಾಗಂಜ್, ಖಾರಗ್ಪುರ-ಸಾದರ್ ಮತ್ತು ಕರೀಂಪುರ ವಿಧಾನಸಭೆ ಉಪ ಚುನಾವಣೆಯಲ್ಲಿ ಟಿಎಂಸಿ ಎದಿರೇಟು ನೀಡಿದೆ.
ಬಾಂಗ್ಲಾ ವಲಸಿಗರಿಗೆ ಭೂಮಿ ನೀಡಿದ ದೀದಿ ಸರ್ಕಾರ
2021ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯ ಕ್ಷೇತ್ರಗಳನ್ನು ಗೆದ್ದು, ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಹೊಡೆತ ನೀಡಲು ಉದ್ದೇಶಿಸಿರುವ ಬಿಜೆಪಿಗೆ ಮೊದಲ ಹೆಜ್ಜೆಯಲ್ಲಿಯೇ ಹಿನ್ನಡೆಯಾಗಿದೆ. ಉಪ ಚುನಾವಣೆ ನಡೆದ ಮೂರು ಕ್ಷೇತ್ರಗಳ ಪೈಕಿ ಎರಡರಲ್ಲಿ ಬಿಜೆಪಿ ಪ್ರಾಬಲ್ಯ ಹೊಂದಿತ್ತು. ಕಾಲಿಯಾಗಂಜ್ ಮತ್ತು ಖಾರಗ್ಪುರ-ಸಾದರ್ ಕ್ಷೇತ್ರಗಳು ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ ಜಯಗಳಿಸಿದ ರಾಯ್ಗಂಜ್ ಮತ್ತು ಮೇದಿನಾಪುರ ಕ್ಷೇತ್ರಗಳಲ್ಲಿದ್ದು, ಮುಂಬರುವ ಚುನಾವಣೆಯಲ್ಲಿ ಈ ಕ್ಷೇತ್ರಗಳನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ ಎಂದೇ ಊಹಿಸಲಾಗಿತ್ತು. ಕಾಲಿಯಾಗಂಜ್ನಲ್ಲಿ ಇದೇ ಮೊದಲ ಸಲ ಟಿಎಂಸಿ ಜಯಗಳಿಸಿದೆ.
ದುರಹಂಕಾರಕ್ಕೆ ತಕ್ಕ ಉತ್ತರ
'ಬಿಜೆಪಿಯ ಅಧಿಕಾರದ ದುರಹಂಕಾರಕ್ಕೆ ಮತದಾರರು ಸರಿಯಾದ ಉತ್ತರ ನೀಡಿದ್ದಾರೆ. ಈ ಗೆಲುವನ್ನು ಪಶ್ಚಿಮ ಬಂಗಾಳದ ಜನತೆಗೆ ಅರ್ಪಿಸುತ್ತೇವೆ. ಬಂಗಾಳದ ಜನರನ್ನು ಅವಮಾನಿಸಿದ್ದಕ್ಕೆ ಮತ್ತು ಅಧಿಕಾರದ ಮದವನ್ನು ಪ್ರದರ್ಶಿಸಿದ್ದಕ್ಕೆ ಬಿಜೆಪಿಗೆ ತಕ್ಕಪಾಠ ಸಿಕ್ಕಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಬಿಜೆಪಿಗೆ ಎದಿರೇಟು ಕೊಟ್ಟಿದ್ದೇವೆ
'ನಮ್ಮ ಪಕ್ಷ ಸ್ಥಾಪನೆಯಾದ 21 ವರ್ಷಗಳಲ್ಲಿ ಖಾರಗ್ಪುರ -ಸಾದರ್ ಅಥವಾ ಕಾಲಿಯಾಗಂಜ್ನಲ್ಲಿ ನಾವು ಒಮ್ಮೆಯೂ ಗೆದ್ದಿರಲಿಲ್ಲ. ಈ ಗೆಲುವಿಗಾಗಿ ಜನರಿಗೆ ಧನ್ಯವಾದಗಳನ್ನು ಹೇಳುತ್ತೇನೆ. ಲೋಕಸಭೆ ಚುನಾವಣೆಯಲ್ಲಿ ಇವಿಎಂಗಳನ್ನು ತಿರುಚಲಾಗಿತ್ತು. ಆದರೂ ಖಾರಗ್ಪುರ ಮತ್ತು ಕಾಲಿಯಾಗಂಜ್ ಕ್ಷೇತ್ರಗಳಲ್ಲಿ ಬಿಜೆಪಿಯ ಭಾರಿ ಮುನ್ನಡೆಗೆ ಪ್ರತಿರೋಧ ಒಡ್ಡಿದ್ದೇವೆ. ಕರೀಂಪುರದಲ್ಲಿ ನಮ್ಮ ಮುನ್ನಡೆಯನ್ನು ದುಪ್ಪಟ್ಟುಗೊಳಿಸಿಕೊಂಡಿದ್ದೇವೆ' ಎಂದಿದ್ದಾರೆ.
ವಿಡಿಯೋ: ಚುನಾವಣಾ ಅಭ್ಯರ್ಥಿಗೆ ಒದ್ದ ವಿಪಕ್ಷದ ಕಾರ್ಯಕರ್ತರು
'ಬಂಗಾಳಿಗಳನ್ನು ಕೊಲ್ಲಲಾಗುತ್ತಿದೆ'
'ರಾಷ್ಟ್ರೀಯ ಪೌರತ್ವ ನೋಂದಣಿಯ ಹೆಸರಿನಲ್ಲಿ ಬಿಜೆಪಿಯು ಜನರಲ್ಲಿ ಆತಂಕ ಸೃಷ್ಟಿಸಿತ್ತು. ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ ಹಾಗೂ ಮಧ್ಯಪ್ರದೇಶಗಳಿಗೆ ಕೆಲಸಕ್ಕಾಗಿ ಹೋದ ಬಂಗಾಳಿಗಳನ್ನು ಕೊಲ್ಲಲಾಗುತ್ತಿದೆ. ಬಂಗಾಳದಲ್ಲಿ ಯುವಜನರಿಗೆ ಉದ್ಯೋಗ ಸಿಗುತ್ತಿಲ್ಲ. ಇದು ಬಿಜೆಪಿಯ ಅಹಂಕಾರ ಮತ್ತು ಅಧಿಕಾರ ದಾಹದ ವಿರುದ್ಧದ ಗೆಲುವು. ನಮಗೆ ಬಂಗಾಳಿಗಳು ಮತ್ತು ಬಂಗಾಳಿಯೇತರರ ಮತಗಳು ಸಿಕ್ಕಿವೆ' ಎಂದು ಹೇಳಿದ್ದಾರೆ.
ಎನ್ಆರ್ಸಿ ಕಾರಣ ಎಂದ ಬಿಜೆಪಿ ಅಭ್ಯರ್ಥಿ
ಉಪ ಚುನಾವಣೆಯಲ್ಲಿ ತಮ್ಮ ಸೋಲಿಗೆ ಎನ್ಆರ್ಸಿ ಮುಖ್ಯ ಕಾರಣ ಎಂದು ಕಾಲಿಯಾಗಂಜ್ನ ಬಿಜೆಪಿ ಅಭ್ಯರ್ಥಿ ಕಮಲ್ ಚಂದ್ರ ಸರ್ಕಾರ್ ಒಪ್ಪಿಕೊಂಡಿದ್ದಾರೆ. 'ರಾಜಬೋಶ್ನಿ ಸಮುದಾಯದ ಜನರು ಯಾರಿಗೆ ಮತಹಾಕಿದ್ದಾರೆ ಎಂಬ ಬಗ್ಗೆ ನಾನು ಹೇಳಿಕೆ ನೀಡಲು ಹೋಗುವುದಿಲ್ಲ. ಆದರೆ ಒಂದಂತೂ ಸ್ಪಷ್ಟ, ಅಲ್ಪಸಂಖ್ಯಾತರು ಟಿಎಂಸಿಗೆ ಮತಹಾಕಿದ್ದಾರೆ. ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ನನ್ನ ಸೋಲಿನ ಹಿಂದೆ ಇದೆ ಎಂದು ನಾನು ಒಪ್ಪಿಕೊಳ್ಳುತ್ತೇನೆ. ಜನರಿಗೆ ಎನ್ಆರ್ಸಿ ಬಗ್ಗೆ ಭಯ ಉಂಟಾಗಿದೆ' ಎಂದು ಹೇಳಿದರು.
'ಎನ್ಆರ್ಸಿಯು ಅಸ್ಸಾಂಗಿಂತ ವಿಭಿನ್ನ ಎಂಬುದನ್ನು ಜನರಿಗೆ ಅರ್ಥಮಾಡಿಸುವಲ್ಲಿ ನಾವು ವಿಫಲರಾದೆವು. ಎನ್ಆರ್ಸಿಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿದೆಯೇ ಹೊರತು ಒಂದು ಪಕ್ಷವಾಗಿ ಬಿಜೆಪಿಯಲ್ಲ. ಜನರು ಬಿಜೆಪಿಯೇ ಎನ್ಆರ್ಸಿ ಜಾರಿ ಮಾಡುತ್ತಿದೆ ಎಂದು ಭಾವಿಸಿ ನಮ್ಮ ವಿರುದ್ಧ ಮತಚಲಾಯಿಸಿದರು' ಎಂದರು.
ಕಾಲಿಯಾಗಂಜ್ನಲ್ಲಿ ಬಿಜೆಪಿಗೆ ಸೋಲು
ಕಾಲಿಯಾಗಂಜ್ನಲ್ಲಿ ಟಿಎಂಸಿಯ ತಪನ್ ದೇಬ್ ಸಿಂಘಾ ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಕಮಲ್ ಚಂದ್ರ ಸರ್ಕಾರ್ ವಿರುದ್ಧ 2,304 ಅಲ್ಪ ಮತಗಳಿಂದ ಗೆಲುವು ಸಾಧಿಸಿದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದ ಕಾಂಗ್ರೆಸ್ನ ಪ್ರಮತ ನಾಥ್ ರಾಯ್ ನಿಧನದಿಂದ ತೆರವಾಗಿದ್ದ ಕ್ಷೇತ್ರಕ್ಕೆ ಕಾಂಗ್ರೆಸ್, ಅವರ ಮಗಳು ಧೃತಾಶ್ರೀ ಅವರನ್ನು ಸ್ಪರ್ಧೆಗಿಳಿಸಿತ್ತು. ಆದರೆ ಅವರು ಮೂರನೇ ಸ್ಥಾನ ಪಡೆದರು. ಈ ಕ್ಷೇತ್ರವನ್ನು ಒಳಗೊಂಡಿರುವ ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ 57,000 ಮತಗಳಿಂದ ಗೆಲುವು ಸಾಧಿಸಿತ್ತು.
ಬಿಜೆಪಿ ಅಧ್ಯಕ್ಷನ ಕ್ಷೇತ್ರದಲ್ಲೇ ಮುಖಭಂಗ
ಖಾರಗ್ಪುರ-ಸಾದರ್ ಕ್ಷೇತ್ರದಲ್ಲಿ ಟಿಎಂಸಿಯ ಪ್ರದೀಪ್ ಸರ್ಕಾರ್ ಅವರು ಬಿಜೆಪಿಯ ಪ್ರೇಮ್ ಚಂದ್ರ ಝಾ ಅವರನ್ನು 20,788 ಮತಗಳಿಂದ ಸೋಲಿಸಿದರು. ಇಲ್ಲಿನ ಸೋಲು ಬಿಜೆಪಿಗೆ ದೊಡ್ಡ ಆಘಾತ ನೀಡಿದೆ. ಪಶ್ಚಿಮ ಬಂಗಾಳದ ರಾಜ್ಯ ಘಟಕದ ಬಿಜೆಪಿ ಅಧ್ಯಕ್ಷರಾಗಿರುವ ಮೇದಿನಾಪುರ ಲೋಕಸಭೆ ಕ್ಷೇತ್ರದ ಸಂಸದ ದಿಲೀಪ್ ಘೋಷ್ ಈ ಕ್ಷೇತ್ರದಿಂದ ಮೊದಲು ಶಾಸಕರಾಗಿ ಆಯ್ಕೆಯಾಗಿದ್ದರು.
ಕರೀಂಪುರ ಕ್ಷೇತ್ರದಲ್ಲಿ ಟಿಎಂಸಿಯ ಬಿಮಲೇಂದು ಸಿಂಘಾ ಅವರು ಬಿಜೆಪಿ ಅಭ್ಯರ್ಥಿಗಿಂತ 22,394 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.