"ಪೌರತ್ವ ಕಾಯ್ದೆಯೂ ಇಲ್ಲ, ರಾಷ್ಟ್ರೀಯ ನಾಗರಿಕ ನೊಂದಣಿಯೂ ಇಲ್ಲ"
ಕೋಲ್ಕತ್ತಾ, ಡಿಸೆಂಬರ್.20: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶವ್ಯಾಪಿ ಪ್ರತಿಭಟನೆ ತೀವ್ರಗೊಂಡಿದೆ. ದೇಶದ ಹಲವೆಡೆ ಶಾಂತಿಯುತವಾಗಿ ನಡೆಯುತ್ತಿದ್ದ ಹೋರಾಟ ದಿಢೀರ್ ಹಿಂಸಾಚಾರಕ್ಕೆ ತಿರುಗಿದೆ. ಲಾಠಿಪ್ರಹಾರ, ಗೋಲಿಬಾರ್, ಅಶ್ರುವಾಯು ಸಿಡಿಸಿದ್ದು, ಪ್ರತಿಭಟನಾಕಾರರನ್ನು ಮತ್ತಷ್ಟು ಕೆರಳಿಸಿದೆ.
ದೇಶದಲ್ಲಿ ಕೇಂದ್ರ ಸರ್ಕಾರದ ನೂತನ ಕಾಯ್ದೆಗೆ ತೀವ್ರ ವಿರೋಧವೇನೋ ವ್ಯಕ್ತವಾಗಿದೆ. ಆದರೆ, ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ ಜಾರಿಗೊಳಿಸದಿರುವ ಬಗ್ಗೆ ಚರ್ಚೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುಂದಾಗಿದ್ದಾರೆ.
ಗುಜರಾತ್ ನಲ್ಲಿ ಪೊಲೀಸರ ಜೀಪ್ ಶೇಕ್, 3 ಸಾವಿರ ಮಂದಿ ವಿರುದ್ಧ ಎಫ್ಐಆರ್
ಡಿಸೆಂಬರ್.23ರಂದು ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ವಪಕ್ಷಗಳ ನಾಯಕರ ಸಭೆ ಕರೆದಿದ್ದಾರೆ. ರಾಜ್ಯದ ಎಲ್ಲ ಉಪ ವಿಭಾಗದ ಕೇಂದ್ರ ಕಚೇರಿಯಲ್ಲಿ ಚರ್ಚೆ ನಡೆಸುವ ಬಗ್ಗೆ ಎಲ್ಲ ಪಕ್ಷಗಳ ನಾಯಕರಿಗೂ ಮಾಹಿತಿ ನೀಡಲಾಗಿದೆ.
ಪಶ್ಚಿಮ ಬಂಗಾಳ ಸಿಎಂ ಬಗ್ಗೆ ಸುಳ್ಳು ವದಂತಿ?
ಕೇಂದ್ರ ಬಿಜೆಪಿ ಸರ್ಕಾರ ತಮ್ಮ ಹೆಸರಿಗೆ ಧಕ್ಕೆ ಉಂಟು ಮಾಡುವಂತಾ ಕೆಲಸ ಮಾಡುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ನಕಲಿ ವಿಡಿಯೋ ಹಾಗೂ ಸುಳ್ಳು ಸುದ್ದಿಗಳ ಮೂಲಕ ಬಿಜೆಪಿ ನನ್ನ ಹೆಸರನ್ನು ಹಾಳು ಮಾಡಲು ತಂತ್ರ ರೂಪಿಸಿದೆ ಎಂದು ದೀದಿ ಆರೋಪಿಸಿದ್ದಾರೆ.
ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನಾಕಾರರಿಗೆ ರಾಜ್ಯ ಗೃಹ ಸಚಿವರ ಸಂದೇಶ
"ಪರ-ವಿರೋಧದ ಬಗ್ಗೆ ಮೊದಲು ತಿಳಿದುಕೊಳ್ಳಿ"
ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ತೀವ್ರ ಪ್ರತಿಭಟನೆ ನಡೆಯುತ್ತಿದೆ. ಈ ಬಗ್ಗೆ ಅಂತಾರಾಷ್ಟ್ರೀಯ ನಿಸ್ಪಕ್ಷಪಾತ ಸಂಸ್ಥೆಗಳು ಗಮನ ಹರಿಸಬೇಕು ಎಂದು ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ. ರಾಷ್ಟ್ರೀಯ ಮಾನವಹಕ್ಕುಗಳ ಆಯೋಗ ಹಾಗೂ ವಿಶ್ವಸಂಸ್ಥೆಯ ನಿಸ್ಪಕ್ಷಪಾತ ಸಂಸ್ಥೆಗಳು ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಪರಾಮರ್ಶೆ ಮಾಡಬೇಕು. ದೇಶದಲ್ಲಿ ಈ ಕಾಯ್ದೆಗೆ ಪರವೆಷ್ಟು ವಿರೋಧವೆಷ್ಟು ಎಂದು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ದೇಶದಲ್ಲಿ ಅಭಿಪ್ರಾಯ ಸಮೀಕ್ಷೆ ನಡೆಸಲು ಆಗ್ರಹ
ಇನ್ನು, ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೇಶದಲ್ಲಿ ಅಭಿಪ್ರಾಯ ಸಂಗ್ರಹ ಸಮೀಕ್ಷೆ ನಡೆಸುವಂತೆ ಆಗ್ರಹಿಸಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಜನರು ಏನು ಹೇಳುತ್ತಾರೆ ಎಂಬುದರ ಬಗ್ಗೆ ಸಮೀಕ್ಷೆ ನಡೆಯಲಿ ಎಂದು ದೀದಿ ಆಗ್ರಹಿಸಿದ್ದಾರೆ.
ದೀದಿ ವಿರುದ್ಧ ಕಿಡಿ ಕಾರಿದ ಸ್ಮೃತಿ ಇರಾನಿ
ಪೌರತ್ವ ತಿದ್ದುಪಡಿ ವಿರುದ್ಧ ಜನಾಭಿಪ್ರಾಯ ಸಂಗ್ರಹ ಮಾಡಬೇಕು ಎಂಬ ಹೇಳಿಕೆಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕಿಡಿ ಕಾರಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಮಮತಾ ಬ್ಯಾನರ್ಜಿ, ದೇಶದ ಸಂಸತ್ ಗೆ ಅಗೌರವ ತೋರುವ ನಿಟ್ಟಿನಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.