ನರೇಂದ್ರ ಮೋದಿ ಪ್ರಚಾರಪ್ರಿಯ ಪ್ರಧಾನಿ : ಚಂದ್ರಬಾಬು ನಾಯ್ಡು ತೀಕ್ಷ್ಣ ವಾಗ್ದಾಳಿ
ಕೋಲ್ಕತಾ, ಜನವರಿ 19 : "ನರೇಂದ್ರ ಮೋದಿಯವರು ಪ್ರಚಾರಪ್ರಿಯ ಪ್ರಧಾನ ಮಂತ್ರಿ. ನಮಗೆ ಬೇಕಾಗಿರುವುದು ಕಾರ್ಯ ನಿರ್ವಾಹಕ ಪ್ರಧಾನ ಮಂತ್ರಿ" ಎಂದು ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರು ಮೋದಿಯವರನ್ನು ತೀಕ್ಷ್ಣವಾಗಿ ಟೀಕಿಸಿದ್ದಾರೆ.
ಮಹಾಘಟಬಂಧನ Rally LIVE :ದೇವೇಗೌಡರ ಸ್ವಗುಣಗಾನಕ್ಕೆ ವೇದಿಕೆಯಾದ rally!
ಲೋಕಸಭೆ ಚುನಾವಣೆಗೆ ಪೂರ್ವಭಾವಿಯಾಗಿ ಕೋಲ್ಕತಾದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆಯೋಜಿಸಿರುವ 'ಯುನೈಟೆಡ್ ಇಂಡಿಯಾ ರ್ಯಾಲಿ'ಯಲ್ಲಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ನಾಯ್ಡು, ಕೇಂದ್ರ ಸರಕಾರ ಇಡೀ ದೇಶದ ಜನರಿಗೆ ಮೋಸ ಮಾಡಿದೆ ಎಂದು ವಾಗ್ದಾಳಿ ಮಾಡಿದರು.
ಮಹಾಘಟಬಂಧನ rally ಯಲ್ಲಿ ಮೋದಿ ಮೇಲೆ ಹಾರ್ದಿಕ್ ವಾಗ್ದಾಳಿ
ಐದು ವರ್ಷಗಳ ಹಿಂದೆ ದೇಶದ ಆಡಳಿತದ ಚುಕ್ಕಾಣಿಯನ್ನು ರಾಷ್ಟ್ರದ ಜನತೆ ಬಿಜೆಪಿಗೆ ನೀಡಿದರು. ಆದರೆ, ಬಿಜೆಪಿ ಜನತೆಗೆ ಮೋಸ ಮಾಡಿದ್ದಾರೆ. ಅವರು ನೀಡಿರುವುದು ಬರೀ ಘೋಷಣೆಗಳು ಮಾತ್ರ. ಜನ್ ಧನ್, ಮುದ್ರಾ ಸಾಲ, ಸ್ಮಾರ್ಟ್ ಸಿಟಿ, ಕಪ್ಪು ಹಣ ವಾಪಸ್ ತರುವುದು, ಎರಡು ಕೋಟಿ ಉದ್ಯೋಗ, ಅಚ್ಛೇದಿನ್ ಬರೀ ಘೋಷಣೆಗಳಾಗಿ ಉಳಿದಿವೆ ಎಂದು ಅವರು ಟೀಕಾಪ್ರಹಾರ ಮಾಡಿದರು.
ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನ ನೀಡಬೇಕೆಂದು ಕೇಂದ್ರವನ್ನು ತೆಲುಗು ದೇಶಂ ಪಕ್ಷ ಆಗ್ರಹಿಸುತ್ತಲೇ ಇತ್ತು. ಇದು ಸಾಕಾರವಾಗದಿದ್ದಾಗ ಕಳೆದ ವರ್ಷ ಮಾರ್ಚ್ ನಲ್ಲಿಯೇ ಎನ್ಡಿಎನಿಂದ ಟಿಡಿಪಿ ಹೊರಗೆ ಬಂದಿತ್ತು. ಮೈತ್ರಿಕೂಟದಿಂದ ಹೊರಬಂದಂದಿನಿಂದ ಕೇಂದ್ರ ಸರಕಾರವನ್ನು ಮತ್ತು ವಿಶೇಷವಾಗಿ ನರೇಂದ್ರ ಮೋದಿಯವರನ್ನು ಟೀಕಿಸುತ್ತಲೇ ಬಂದಿದ್ದಾರೆ ಚಂದ್ರಬಾಬು ನಾಯ್ಡು.
ಮಹಾಘಟಬಂಧನಕ್ಕಾಗಿ ಕೋಲ್ಕತ್ತಾದಲ್ಲಿ ಇಂದು ವಿಪಕ್ಷಗಳ ಬೃಹತ್ rally
"ನಮಗಿರುವುದು ಒಂದೇ ಗುರಿ. ದೇಶವನ್ನುಳಿಸಿ, ಪ್ರಜಾಪ್ರಭುತ್ವವನ್ನು ಕಾಪಾಡಿ. ಬಿಜೆಪಿ ದೇಶವನ್ನು ಇಬ್ಬಾಗಿಸುತ್ತಿದೆ, ನಮಗೆ ಭಾರತದ ಐಕ್ಯತೆ ಬೇಕಾಗಿದೆ. ಈ ಕಾರಣದಿಂದಾಗಿ ನಾವೆಲ್ಲ ಬಿಜೆಪಿ ವಿರೋಧಿ ನಾಯಕರು ಒಂದುಗೂಡಿದ್ದೇವೆ" ಎಂದು ಸುಮಾರು ಹದಿಮೂರು ನಿಮಿಷಗಳ ಕಾಲ ಕೇಂದ್ರ ಸರಕಾರದ ಮೇಲೆ ಚಂದ್ರಬಾಬು ನಾಯ್ಡು ಕಿಡಿ ಕಾರಿದರು.
ರಫೇಲ್ ಡೀಲ್ ವಿವಾದಕ್ಕೆ ಸಂಬಂಧಿಸಿದಂತೆ ಮತ್ತೆ ವಾಗ್ದಾಳಿ ಮುಂದುವರಿಸಿದ ಅವರು, ಹಳೆ ನೋಟು ನಿಷೇಧ ಮಾಡಿ ರೈತರು ಮತ್ತು ಸಣ್ಣ ಉದ್ಯಮಿಗಳಿಗೆ ಭಾರೀ ಹೊಡೆತ ಕೇಂದ್ರ ಸರಕಾರ ನೀಡಿದೆ ಎಂದರು. ಸರಕು ಮತ್ತು ಸೇವಾ ತೆರಿಗೆ ಕೂಡ ಮೋಸದಿಂದ ಕೂಡಿದ್ದು, ದೇಶದ ಆರ್ಥಿಕ ಸ್ಥಿತಿಯ ಮೇಲೆ ಭಾರೀ ಹೊಡೆತ ನೀಡಿದೆ, ಆರ್ಥಿಕ ಪ್ರಗತಿ ಕುಂಠಿತಗೊಂಡಿದೆ ಎಂದರು.
ಕೇಂದ್ರ ಸರಕಾರ ಕೆಲ ರಾಜ್ಯ ಸರಕಾರಗಳಿಗೆ ಭಾರೀ ತೊಂದರೆ ನೀಡುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಂದ್ರ ಯಾವ ರೀತಿ ನಡೆದುಕೊಂಡಿದೆ ಎಂದು ನೋಡಿದ್ದೀರಿ. ಕರ್ನಾಟಕದಲ್ಲಿ ಕೂಡ ಜನರಿಂದಲೇ ಆಯ್ಕೆಯಾಗಿರುವ ಸರಕಾರವನ್ನು ಅಲುಗಾಡಿಸಲು ನರೇಂದ್ರ ಮೋದಿ ಹೊರಟಿದ್ದಾರೆ. ಅವರು ಇದಕ್ಕೆ ತಕ್ಕ ಬೆಲೆ ತೆರಲಿದ್ದಾರೆ. ಅವರು ಶಾಸಕರಿಗೆ ಭಾರೀ ಹಣದ ಆಮಿಷ ತೋರುತ್ತಿದ್ದಾರೆ ಎಂದು ಎಚ್ ಡಿ ಕುಮಾರಸ್ವಾಮಿಯವರು ಸರಿಯಾಗಿಯೇ ಹೇಳಿದ್ದಾರೆ. ಶಾಸಕರನ್ನು ಪ್ರಾಣಿಗಳಂತೆ ಕೊಳ್ಳಲು ಬಿಜೆಪಿ ಮುಂದಾಗಿದೆ ಎಂದು ಚಂದ್ರಬಾಬು ನಾಯ್ಡು ಆಕ್ರೋಶ ವ್ಯಕ್ತಪಡಿಸಿದರು.