ನಾರದ ಪ್ರಕರಣ: ಬಂಧಿತ ಟಿಎಂಸಿ ಮುಖಂಡರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದ ಹೈಕೋರ್ಟ್
ಕೋಲ್ಕತ್ತಾ, ಮೇ 28: ನಾರದ ಪ್ರಕರಣದಲ್ಲಿ ಸಿಬಿಐನಿಂದ ಬಂಧನಕ್ಕೆ ಒಳಗಾಗಿದ್ದ ಪಶ್ಚಿಮ ಬಂಗಾಳ ಸಚಿವರಾದ ಸುಬ್ರತಾ ಮುಖರ್ಜಿ ಮತ್ತು ಫಿರ್ಹಾದ್ ಹಕಿಮ್, ಟಿಎಂಸಿ ಶಾಸಕ ಮದನ್ ಮಿತ್ರಾ ಹಾಗೂ ಮಾಜಿ ಸಚಿವ ಸೋವನ್ ಚಟರ್ಜಿಗೆ ಕೋಲ್ಕತ್ತಾ ಹೈಕೋರ್ಟ್ ಶುಕ್ರವಾರ ಮಧ್ಯಂತರ ಜಾಮೀನು ನೀಡಿದೆ.
"ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳು ಸಾರ್ವಜನಿಕವಾಗಿ ಅಥವಾ ಮಾಧ್ಯಮದ ಮುಂದೆ ಯಾವುದೇ ಹೇಳಿಕೆ ನೀಡುವಂತಿಲ್ಲ. ಹಾಗೆಯೇ ಅಗತ್ಯವಿದ್ದ ವೇಳೆ ವರ್ಚುವಲ್ ಮೂಲಕ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು" ಎಂದು ಸೂಚನೆ ನೀಡಿದ ಕೋಲ್ಕತ್ತಾ ಹೈಕೋರ್ಟ್ನ ಪಂಚ ಸದಸ್ಯ ನ್ಯಾಯಪೀಠ, ಮಧ್ಯಂತರ ಜಾಮೀನು ಮಂಜೂರು ಮಾಡಿ, ನಾಲ್ವರು ಆರೋಪಿಗಳಿಗೆ ತಲಾ 2 ಲಕ್ಷ ರೂ. ಮೊತ್ತದ ಬಾಂಡ್ ನೀಡುವಂತೆ ನಿರ್ದೇಶಿಸಿದೆ.
ನಾರದ ಹಗರಣ: ಟಿಎಂಸಿ ಮುಖಂಡರ ಮಧ್ಯಂತರ ಜಾಮೀನು ರದ್ದು
ನಾರದ ಸ್ಟಿಂಗ್ ಕಾರ್ಯಾಚರಣೆಯನ್ನು ನಾರದ ಸುದ್ದಿ ಸಂಸ್ಥಾಪಕ ಮ್ಯಾಥ್ಯೂ ಸ್ಯಾಮ್ಯುಯೆಲ್ ಪಶ್ಚಿಮ ಬಂಗಾಳದಲ್ಲಿ ನಡೆಸಿದ್ದರು. ಮಾರುವೇಷದ ಕಾರ್ಯಾಚರಣೆ ನಡೆಸಿದ ನಾರದ ಸುದ್ದಿ ಸಂಸ್ಥಾಪಕರು ಲಂಚ ಸ್ವೀಕಾರ ಮಾಡುತ್ತಿದ್ದ ಮೂವರು ಟಿಎಂಸಿ ನಾಯಕರಾದ ಫಿರ್ಹಾದ್ ಹಕೀಮ್, ಸುಬ್ರತಾ ಮುಖರ್ಜಿ ಮತ್ತು ಮದನ್ ಮಿತ್ರ ಹಾಗೂ ಕೋಲ್ಕತ್ತಾದ ಮಾಜಿ ಮೇಯರ್ ಸೋವನ್ ಚಟರ್ಜಿಯನ್ನು ಕ್ಯಾಮರಾದಲ್ಲಿ ಸೆರೆಹಿಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿ ಮೇ 17ರಂದು ಈ ನಾಲ್ವರು ಆರೋಪಿಗಳನ್ನು ಸಿಬಿಐ ಬಂಧಿಸಿದೆ. ಬಳಿಕ ಕೋಲ್ಕತ್ತಾ ಹೈಕೋರ್ಟ್ ನಾಲ್ವರಿಗೂ ಗೃಹ ಬಂಧನ ವಿಧಿಸಿ ಆದೇಶಿಸಿತ್ತು. ಕೋಲ್ಕತ್ತಾ ಹೈಕೋರ್ಟ್ನ ಈ ಆದೇಶ ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈಗ ಕೋಲ್ಕತ್ತಾ ಹೈಕೋರ್ಟ್ ಈ ಆರೋಪಿಗಳಿಗೆ ಮಧ್ಯಂತರ ಜಾಮೀನು ನೀಡಿದೆ.
ಜಾಮೀನು ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್, ನ್ಯಾಯಮೂರ್ತಿಗಳಾದ ಐಪಿ ಮುಖರ್ಜಿ, ಹರೀಶ್ ಟಂಡನ್, ಸೌಮೆನ್ ಸೇನ್ ಮತ್ತು ಅರಿಜಿತ್ ಮುಖರ್ಜಿ ಅವರನ್ನೊಳಗೊಂಡ ನ್ಯಾಯಪೀಠ, ಸಾರ್ವಜನಿಕವಾಗಿ ಅಥವಾ ಮಾಧ್ಯಮದ ಮುಂದೆ ಯಾವುದೇ ಹೇಳಿಕೆ ನೀಡುವಂತಿಲ್ಲ ಎಂದು ಆರೋಪಿಗಳಿಗೆ ಸೂಚಿಸಿದೆ.
'ಪಶ್ಚಿಮ ಬಂಗಾಳ ರಾಜ್ಯಪಾಲ ಧಂಕರ್ ನಿವೃತ್ತರಾದ ಬಳಿಕ ಜೈಲಿಗಟ್ಟಬಹುದು'- ಟಿಎಂಸಿ ಸಂಸದ
ಸಿಬಿಐ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, "ಮಧ್ಯಂತರ ಜಾಮೀನು ನೀಡುವುದನ್ನು ವಿರೋಧಿಸಿದ್ದು, ಮಧ್ಯಂತರ ಜಾಮೀನು ನೀಡಿದರೆ, ಬಾಕಿ ಇರುವ ವಿಚಾರಣೆಯ ಮೇಲೆ ಪರಿಣಾಮ ಬೀರುವಷ್ಟು ಆರೋಪಿಗಳು ಪ್ರಭಾವಶಾಲಿಗಳು ಎಂದು ಹೇಳಿದ್ದಾರೆ. ಜನರನ್ನು ಪ್ರಚೋದಿಸಿ ಒಟ್ಟುಗೂಡಿಸುವ ಸಾಮರ್ಥ್ಯ ಆರೋಪಿಗಳಿಗೆ ಇದೆ. ಇದು ತನಿಖೆ ಅಥವಾ ವಿಚಾರಣೆಯನ್ನು ಹಳಿ ತಪ್ಪಿಸುತ್ತದೆ" ಎಂದು ಕೂಡಾ ವಾದಿಸಿದ್ದಾರೆ.
ಈ ಸಂದರ್ಭದಲ್ಲಿ ನ್ಯಾಯಪೀಠವು, "4 ವರ್ಷಗಳ ಕಾಲ ತನಿಖೆಯ ಸಮಯದಲ್ಲಿ ಆರೋಪಿಗಳನ್ನು ಬಂಧಿಸಲಿಲ್ಲ. ಬಂಧಿತ ನಾಯಕರ ಪೈಕಿ ಇಬ್ಬರು ಕ್ಯಾಬಿನೆಟ್ ಸಚಿವರುಗಳು, ಒಬ್ಬರು ಶಾಸಕರು ಅವರನ್ನು ಬಂಧನದಲ್ಲಿಡಬೇಕಾದ ಅಗತ್ಯವಿದೆಯೇ" ಎಂದು ಸಾಲಿಸಿಟರ್ ಜನರಲ್ ತುಷಾರ್ಗೆ ಪ್ರಶ್ನಿಸಿದೆ.
"ಸಾಲಿಸಿಟರ್ ಜನರಲ್ ಅವರೇ, ನಾವು ಒಂದು ಅವಲೋಕನ ಮಾಡಲು ಬಯಸುತ್ತೇವೆ. ತನಿಖೆ 2017 ರಲ್ಲಿ ಪ್ರಾರಂಭವಾಯಿತು. ತನಿಖೆಯ ವೇಳೆ ಈ ನಾಯಕರುಗಳನ್ನು ಬಂಧಿಸಿಲ್ಲ. ಸಾಮಾನ್ಯವಾಗಿ, ಬಂಧನವು ತನಿಖೆಗೆ ಅನುಕೂಲವಾಗಲಿದೆ. ಆದರೆ ಇಷ್ಟು ಸಮಯದ ಬಳಿಕ ಈಗ ಏಕೆ ಬಂಧಿಸಬೇಕು?" ಎಂದು ನ್ಯಾಯಪೀಠದ ಎರಡನೇ ಹಿರಿಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಐಪಿ ಮುಖರ್ಜಿ ಕೇಳಿದ್ದಾರೆ.
ನಾರದ ಪ್ರಕರಣ- ಟಿಎಂಸಿ ನಾಯಕರ ಗೃಹಬಂಧನಕ್ಕೆ ಕೊಲ್ಕತ್ತಾ ಹೈಕೋರ್ಟ್ ಆದೇಶ
"ಈ ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಈ ಸಚಿವರು, ಶಾಸಕರುಗಳು ಕಾರ್ಯನಿರ್ವಹಿಸಬೇಕಾಗಿದೆ. ಹಾಗಿರುವಾಗ 4 ವರ್ಷಗಳಿಂದ ತನಿಖೆಯ ಸಮಯದಲ್ಲಿ ಅವರನ್ನು ಬಂಧಿಸದೆ, ಈಗ ಗೃಹ ಬಂಧನದಲ್ಲಿರಿಸಿದರೆ, ಅವರು ಈ ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಕಾರ್ಯ ನಿರ್ವಹಿಸುವುದು ಹೇಗೆ?" ಎಂದು ಕೂಡಾ ನ್ಯಾಯಪೀಠ ಪ್ರಶ್ನಿಸಿದೆ.
ಈ ಸಂದರ್ಭ ಸಾಲಿಸಿಟರ್ ಜನರಲ್, ಈ ಆರೋಪಿಗಳು ತನಿಖೆ ಅಥವಾ ವಿಚಾರಣೆಗೆ ಹಾಜರಾಗಬೇಕು. ಜನರನ್ನು ಒಟ್ಟುಗೂಡಿಸಿ ಸಭೆ ಸೇರುವುದು ಅಥವಾ ಸಾರ್ವಜನಿಕ ಪ್ರತಿಭಟನೆ ನಡೆಸಲು ಕಾರಣವಾಗಬಾರದು ಷರತ್ತು ವಿಧಿಸಬೇಕೆಂದು ಆಗ್ರಹಿಸಿದ್ದು ಆರೋಪಿಗಳ ಪರ ಹಾಜರಾದ ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಗ್ವಿ ಇದನ್ನು ವಿರೋಧಿಸಿದರು.
"ನ್ಯಾಯಾಲಯವು ಈ ಆದೇಶವನ್ನು ನೀಡಿದರೆ, ಬಳಿಕ ಜನರು ಪ್ರತಿಭಟಿಸಿದರು ಅದು ನನ್ನ ಕಕ್ಷಿದಾರರು ಕೋರ್ಟ್ ಆಜ್ಞೆ ಉಲ್ಲಂಘಿಸಿದ್ದಾರೆ ಎಂದು ಭಾವಿಸಲಾಗುತ್ತದೆ. ಇದು ಸರಿಯಲ್ಲ" ಎಂದು ಹೇಳಿದರು.
ಈ ಎಲ್ಲಾ ವಾದ ವಿವಾದ ಆಲಿಸಿದ ನ್ಯಾಯಾಲಯ ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳು ಸಾರ್ವಜನಿಕವಾಗಿ ಅಥವಾ ಮಾಧ್ಯಮದ ಮುಂದೆ ಯಾವುದೇ ಹೇಳಿಕೆ ನೀಡುವಂತಿಲ್ಲ ಎಂದು ಆದೇಶಿಸಿದೆ.
(ಒನ್ಇಂಡಿಯಾ ಸುದ್ದಿ)