ಮೇಲ್ಜಾತಿ ಮೀಸಲಾತಿ, ಮೋದಿ ಆಡಳಿತದ ಬಗ್ಗೆ ಅಮರ್ತ್ಯ ಸೇನ್ ಹೇಳಿದ್ದೇನು?
ಕೋಲ್ಕತ್ತಾ, ಜನವರಿ 9: ಸಾಮಾನ್ಯ ವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ ಹತ್ತು ಪರ್ಸೆಂಟ್ ಮೀಸಲಾತಿ ಕಲ್ಪಿಸುವ ಪ್ರಸ್ತಾವವೇ ಗೊಂದಲಮಯ ಚಿಂತನೆ ಎಂದು ನೊಬೆಲ್ ವಿಜೇತ ಅರ್ಥಶಾಸ್ತ್ರಜ್ಞ ಅಮರ್ತ್ಯಸೇನ್ ಬುಧವಾರ ಅಭಿಪ್ರಾಯ ಪಟ್ಟಿದ್ದಾರೆ. ಇದರ ರಾಜಕೀಯ ಹಾಗೂ ಆರ್ಥಿಕ ಪ್ರಭಾವಗಳ ಬಗ್ಗೆ ಗಂಭೀರ ಪ್ರಶ್ನೆಗಳು ಏಳುತ್ತವೆ ಎಂದಿದ್ದಾರೆ.
ಯುಪಿಎ ಅವಧಿಯಲ್ಲಿ ಸಾಧಿಸಿದ ಉತ್ತಮ ಆರ್ಥಿಕ ಪ್ರಗತಿಯನ್ನು ಮುಂದುವರಿಸಿಕೊಂಡು ಹೋಗಲು ಮೋದಿ ಸರಕಾರಕ್ಕೆ ಸಾಧ್ಯವಾಯಿತು. ಆದರೆ ಅದನ್ನು ಉದ್ಯೋಗ ಸೃಷ್ಟಿ, ಬಡತನ ನಿರ್ಮೂಲನೆ, ಆರೋಗ್ಯ ಸುರಕ್ಷೆ ಹಾಗೂ ಎಲ್ಲರಿಗೂ ಶಿಕ್ಷಣ ದೊರೆಯುವಂತೆ ಮಾಡಲು ಆಗಲಿಲ್ಲ ಎಂದಿದ್ದಾರೆ.
ರಾಜ್ಯಸಭೆಯಲ್ಲಿಯೂ ಇಬಿಸಿ ಕೋಟಾ ಮಸೂದೆಗೆ ಅಂಗೀಕಾರ
ಮೇಲ್ಜಾತಿಯ ಕಡಿಮೆ ಆದಾಯದವರಿಗೆ ಮೀಸಲಾತಿ ಒದಗಿಸುವುದು ಬೇರೆಯದೇ ರೀತಿಯ ಸಮಸ್ಯೆ. ಇಡೀ ಜನಸಂಖ್ಯೆಯೇ ಮೀಸಲಾತಿ ಅಡಿಯಲ್ಲಿ ಬಂದುಬಿಟ್ಟರೆ ಅದರಿಂದ ಮೀಸಲಾತಿ ವ್ಯವಸ್ಥೆಯನ್ನೇ ತೆಗೆದಂತೆ. ಇದೊಂದು ಗೊಂದಲಮಯ ಚಿಂತನೆ. ಆದರೆ ಈ ಚಿಂತನೆಯು ಗಂಭೀರವಾದ ರಾಜಕೀಯ ಹಾಗೂ ಆರ್ಥಿಕ ಪರಿಣಾಮ ಬೀರಬಹುದು. ಅವುಗಳನ್ನು ಗಂಭೀರವಾಗಿ ಪ್ರಶ್ನಿಸಬೇಕು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಮೋದಿ ಅಧಿಕಾರಕ್ಕೆ ಬರುವ ಮುಂಚೆ ಭಾರತ ಸಾಧಿಸಿದ್ದ ಆರ್ಥಿಕ ಬೆಳವಣಿಗೆಯನ್ನು ಹಾಗೇ ಮುಂದುವರಿಸಿಕೊಂಡು ಬರುವಲ್ಲಿ ಈಗಿನ ಸರಕಾರ ಯಶಸ್ವಿಯಾಗಿದೆ. ನಾವದನ್ನು ಮುಂದುವರಿಸಿದ್ದೇವೆ ಎಂದು ಮೋದಿ ಹೇಳಬಹುದು. ಭಾರತದ ಆರ್ಥಿಕ ಪ್ರಗತಿಯಲ್ಲಿ ದೊಡ್ಡ ಇಳಿಕೆ ಆಗಿಲ್ಲ ಎಂದು ಅಮರ್ತ್ಯಸೇನ್ ಹೇಳಿದ್ದಾರೆ.
ಮೇಲ್ವರ್ಗದವರಿಗೂ ಉದ್ಯೋಗದಲ್ಲಿ ಮೀಸಲಾತಿ, ಯಾರು ಇದಕ್ಕೆ ಅರ್ಹರು?
ಅಪನಗದೀಕರಣ ಹಾಗೂ ಜಿಎಸ್ ಟಿ ಜಾರಿ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿರುವ ಅಮರ್ತ್ಯಸೇನ್, ಅಪನಗದೀಕರಣ ನಕಾರಾತ್ಮಕ ಅಥವಾ ಕೆಟ್ಟ ಆರ್ಥಿಕ ನೀತಿ ಹಾಗೂ ಜಿಎಸ್ ಟಿ ತೀರಾ ಕೆಟ್ಟದಾಗಿ ಅನುಷ್ಠಾನಕ್ಕೆ ತರಲಾಯಿತು ಎಂಬುದನ್ನೆಲ್ಲ ಚುನಾವಣೆಯ ಯಶಸ್ಸು ಹಾಗೂ ವೈಫಲ್ಯಕ್ಕೆ ತರಬಾರದು ಎಂದಿದ್ದಾರೆ.
ಅಪನಗದೀಕರಣ ಹಾಗೂ ಜಿಎಸ್ ಟಿ ಜಾರಿಯಿಂದ ಏನಾದರೂ ಈಚಿನ ಪಂಚ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿತೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದಕ್ಕೆ ಉತ್ತರಿಸಲು ಚುನಾವಣೆ ಬಗ್ಗೆ ಅಧ್ಯಯನ ಮಾಡಿರಬೇಕು. ಆದರೆ ನಾನದನ್ನು ಮಾಡಿಲ್ಲ ಎಂದಿದ್ದಾರೆ.