ಮಮತಾ ಬ್ಯಾನರ್ಜಿಗೆ ಆಘಾತ: ಐವರು ಟಿಎಂಸಿ ಸಂಸದರು ಬಿಜೆಪಿಗೆ?
ಕೋಲ್ಕತಾ, ನವೆಂಬರ್ 21: ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ಭಾರಿ ರಾಜಕೀಯ ಸ್ಥಿತ್ಯಂತರಗಳು ನಡೆಯುವ ಸೂಚನೆ ದೊರಕಿದೆ. ತೃಣಮೂಲ ಕಾಂಗ್ರೆಸ್ನ ಅನೇಕ ಪ್ರಮುಖ ನಾಯಕರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಸಚಿವ ಸುವೇಂದು ಅಧಿಕಾರಿ ಅವರ ಭವಿಷ್ಯದ ಬಗ್ಗೆ ಅನೇಕ ಊಹಾಪೋಹಗಳು ನಡೆಯುತ್ತಿರುವಾಗಲೇ ಬಿಜೆಪಿ ಸಂಸದ ಅರ್ಜುನ್ ಸಿಂಗ್ ಹೊಸ ಬಾಂಬ್ ಸಿಡಿಸಿದ್ದಾರೆ. ತೃಣಮೂಲ ಕಾಂಗ್ರೆಸ್ನ ಹಿರಿಯ ನಾಯಕ, ಸಂಸದ ಸೌಗತ ರಾಯ್ ಹಾಗೂ ಇತರೆ ನಾಲ್ವರು ಸಂಸದರು ಟಿಎಂಸಿಗೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಅರ್ಜುನ್ ಸಿಂಗ್ ಹೇಳಿದ್ದಾರೆ.
ಓವೈಸಿ ಕಣ್ಣು ಬಂಗಾಳದ ಮೇಲೆ: ಬಿಜೆಪಿಗೆ ಲಾಭದ ನಿರೀಕ್ಷೆ
ಶನಿವಾರ ಉತ್ತರ 24 ಪರಗಣಸ್ ಜಿಲ್ಲೆಯ ಜಗದಾಳ್ ಘಾಟ್ನಲ್ಲಿ ಛಠ್ ಪೂಜೆಯಲ್ಲಿ ಭಕ್ತರನ್ನು ಸೇರಿಕೊಂಡ ಅರ್ಜುನ್ ಸಿಂಗ್, ಡುಮ್ ಡುಮ್ನ ಸಂಸದ ಸೌಗತ ರಾಯ್ ಅವರು ಟಿಎಂಸಿಗೆ ರಾಜೀನಾಮೆ ನೀಡಲು ಯೋಚಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಮುಂದೆ ಓದಿ.
ಯಾವಾಗ ಬೇಕಾದರೂ ಬರಬಹುದು
'ನಾನು ಪದೇ ಪದೇ ಹೇಳುತ್ತೇನೆ, ತೃಣಮೂಲ ಕಾಂಗ್ರೆಸ್ನ ಐವರು ಸಂಸದರು ಯಾವುದೇ ಸಮಯದಲ್ಲಿ ಟಿಎಂಸಿಗೆ ರಾಜೀನಾಮೆ ನೀಡಬಹುದು ಮತ್ತು ಬಿಜೆಪಿ ಸೇರಬಹುದು' ಎಂದು ಬರಾಕ್ ಪೊರ್ ಕ್ಷೇತ್ರದ ಬಿಜೆಪಿ ಸಂಸದ ಅರ್ಜುನ್ ಸಿಂಗ್ ಹೇಳಿದ್ದಾರೆ.
ಕ್ಯಾಮೆರಾ ಮುಂದೆ ಸೌಗತ ನಟನೆ
ಈ ಪಟ್ಟಿಯಲ್ಲಿ ಸೌಗತ ರಾಯ್ ಕೂಡ ಇದ್ದಾರೆಯೇ ಎಂಬ ಪ್ರಶ್ನೆಗೆ ಅವರು, 'ಸೌಗತ ರಾಯ್ ಅವರು ಟಿಎಂಸಿ ಮುಖಂಡರಾಗಿರುವಂತೆ ನಟಿಸುತ್ತಿದ್ದಾರೆ. ಜತೆಗೆ ಕ್ಯಾಮೆರಾಗಳ ಮುಂದೆ ಮಮತಾ ಬ್ಯಾನರ್ಜಿ ಅವರ ಮಧ್ಯಸ್ಥಿಕೆಗಾರನಂತೆ ಕಾಣಿಸುತ್ತಾರೆ. ಅವರು ಕೂಡ ಸುವೇಂದು ಅಧಿಕಾರಿ ಜತೆಗೆ ಸಮಾಲೋಚನೆ ನಡೆಸಿದ್ದಾರೆ. ಆದರೆ ಕ್ಯಾಮೆರಾ ಆಚೆ ಚಲಿಸಿದಂತೆ ನೀವು ಸೌಗತ ರಾಯ್ ಹೆಸರನ್ನು ಕೂಡ ಸೇರಿಸಬಹುದು' ಎಂದಿದ್ದಾರೆ.
ಪಶ್ಚಿಮ ಬಂಗಾಳ ಅಸೆಂಬ್ಲಿ ಚುನಾವಣೆ: ಪ್ರಮುಖ ನಿರ್ಧಾರ ತೆಗೆದುಕೊಂಡ ಅಮಿತ್ ಶಾ
ಸೋದರಳಿಯ ಮೇಲೆ ಮಮತಾಗೆ ಪ್ರೀತಿ
ಪಶ್ಚಿಮ ಬಂಗಾಳದಲ್ಲಿ ಸಾರಿಗೆ ಸಚಿವರಾಗಿರುವ ಸುವೇಂದು ಅಧಿಕಾರಿ ಅವರ ಟಿಎಂಸಿ ವಿರುದ್ಧದ ಬಹಿರಂಗ ಬಂಡಾಯದ ಬಗ್ಗೆ ಪ್ರತಿಕ್ರಿಯಿಸಿದ ಅರ್ಜುನ್ ಸಿಂಗ್, 'ಸುವೇಂದು ಅಧಿಕಾರಿ ಒಬ್ಬ ಮಾಸ್ ಲೀಡರ್. ಅಧಿಕಾರಿ ಹಾಗೂ ಹೋರಾಟ ಮಾಡಿ ಪಕ್ಷಕ್ಕಾಗಿ ರಕ್ತ ನೀಡಿದವರನ್ನು ಅವಲಂಬಿಸಿ ಮಮತಾ ಬ್ಯಾನರ್ಜಿ ಅವರು ನಾಯಕಿಯಾದರು. ಈಗ ಅವರು ಹಳೆಯದನ್ನು ನಿರಾಕರಿಸುತ್ತಿದ್ದಾರೆ ಮತ್ತು ತಮ್ಮ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರನ್ನು ಕುರ್ಚಿಯ ಮೇಲೆ ಕೂರಿಸಲು ಪ್ರಯತ್ನಿಸುತ್ತಿದ್ದಾರೆ. ಇದನ್ನು ಯಾವ ಮಾಸ್ ಲೀಡರ್ ಕೂಡ ಒಪ್ಪುವುದಿಲ್ಲ' ಎಂದು ಹೇಳಿದ್ದಾರೆ.
ಸುಬೇಂದುಗೆ ಬಿಜೆಪಿ ಸ್ವಾಗತ
'ಸುಬೇಂದು ಅಧಿಕಾರಿ ಅವರನ್ನು ಅವಮಾನಿಸಲಾಗುತ್ತಿದೆ ಮತ್ತು ಅವರು ತೃಣಮೂಲ ಕಾಂಗ್ರೆಸ್ ತ್ಯಜಿಸಬೇಕು. ಅವರ ಆಪ್ತೇಷ್ಟರನ್ನು ಸುಳ್ಳು ಮೊಕದ್ದಮೆಗಳಲ್ಲಿ ಸಿಲುಕಿಸಲಾಗುತ್ತಿದೆ. ನನಗೂ ಅನೇಕ ಬಾರಿ ಕಿರುಕುಳ ನೀಡಲಾಗಿತ್ತು. ಆದರೆ ಒಬ್ಬ ಮಾಸ್ ಲೀಡರ್ನನ್ನು ತಡೆಯಲಾಗದು. ಅಧಿಕಾರಿ ಒಬ್ಬ ಮಾಸ್ ಲೀಡರ್ ಆಗಿದ್ದು, ಅವರನ್ನು ಬಿಜೆಪಿ ಯಾವಾಗಲೂ ಸ್ವಾಗತಿಸುತ್ತದೆ' ಎಂದು ಟಿಎಂಸಿಯ ನಾಯಕರಾಗಿದ್ದ ಅರ್ಜುನ್ ಸಿಂಗ್ ತಿಳಿಸಿದ್ದಾರೆ.