Video: ಪಶ್ಚಿಮ ಬಂಗಾಳದಲ್ಲಿ ದೀದಿ ವಿರುದ್ಧ "ಶ್ರೀರಾಮ" ಬಾಣ ಬಿಟ್ಟ ಅಮಿತ್ ಶಾ!
ಕೋಲ್ಕತ್ತಾ, ಫೆಬ್ರವರಿ.11: ಪಶ್ಚಿಮ ಬಂಗಾಳದಲ್ಲಿ ಭಾರತೀಯ ಜನತಾ ಪಕ್ಷವು ನಡೆಸುತ್ತಿರುವ "ಪರಿವರ್ತನ ಯಾತ್ರೆ"ಯು ರಾಜ್ಯವನ್ನು ಬುವಾ-ಭಾಟಿಜಾ(ಚಿಕ್ಕಮ್ಮ ಮತ್ತು ಸೋದರಳಿ)ನಿಂದ ನಡೆಯುತ್ತಿರುವ ಭ್ರಷ್ಟಾಚಾರ ನಿಗ್ರಹಿಸುವ ಗುರಿಯನ್ನು ಹೊಂದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ವಿಧಾನಸಭಾ ಚುನಾವಣೆ ಹಿನ್ನೆಲೆ ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ನಲ್ಲಿ ನಡೆದ ಪರಿವರ್ತನ ಯಾತ್ರೆ ಉದ್ದೇಶಿಸಿ ಮಾತನಾಡಿದ ಅವರು, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಶ್ರೀರಾಮ ಬಾಣ ಬಿಟ್ಟರು.
ಮಮತಾ ಬಜೆಟ್ ಮಂಡಿಸುವಾಗ 'ಜೈ ಶ್ರೀರಾಮ್' ಘೋಷಣೆ ಕೂಗಿದ ಬಿಜೆಪಿ
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜಾರಿಗೊಳಿಸಿರುವ ಯೋಜನೆಗಳನ್ನು ನೀವು ಮತ್ತು ನಿಮ್ಮ ಸೋದರಳಿ ಸೇರಿಕೊಂಡು ತಡೆ ಹಿಡಿದಿದ್ದೀರಿ. ಆದರೆ ಮೇ ತಿಂಗಳ ನಂತರದಲ್ಲಿ ನೀವು ಮುಖ್ಯಮಂತ್ರಿಯಾಗಿ ಮುಂದುವರಿಯುವುದಿಲ್ಲ. ಅಂದಿನಿಂದ ಯಾವುದೇ ಯೋಜನೆಗಳನ್ನು ತಡೆಯುವುದಕ್ಕೆ ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡುವ ರೀತಿಯಲ್ಲಿ ಹೇಳಿದರು.
|
ಪಾಕಿಸ್ತಾನದಲ್ಲಿ ಶ್ರೀರಾಮ ಪರ ಘೋಷಣೆ ಕೂಗುಬೇಕೇ?
ಪಶ್ಚಿಮ ಬಂಗಾಳದಲ್ಲಿ ಇತ್ತೀಚಿಗೆ ಸುದ್ದಿಯಾದ ಜೈ ಶ್ರೀರಾಮ ಘೋಷಣೆಯನ್ನೇ ಸಚಿವ ಅಮಿತ್ ಶಾ ಅವರು ಚುನಾವಣೆ ಅಸ್ತ್ರವಾಗಿ ಬಳಸಿಕೊಂಡರು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರೆ ಕೋಪ ಬರುತ್ತದೆ. ಬಂಗಾಳದಲ್ಲಿ ಅಲ್ಲದೇ ಪಾಕಿಸ್ತಾನಕ್ಕೆ ಹೋಗಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗುವುದಕ್ಕೆ ಆಗುತ್ತದೆಯೇ ಎಂದು ಅಮಿತ್ ಶಾ ಪ್ರಶ್ನೆ ಮಾಡಿದರು.
ಶ್ರೀರಾಮನಿಗೆ ಜೈಕಾರ ಹಾಕಿಸುತ್ತೇನೆ ಎಂದು ಸವಾಲು
ಬಿಜೆಪಿ ಪರಿವರ್ತನ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ತುಂಬಿದ ಸಭೆಯ ಎದುರು ಜೈ ಶ್ರೀರಾಮ್.. ಜೈಶ್ರೀರಾಮ್ ಎಂದು ಘೋಷಣೆ ಕೂಗಿದರು. ಕಾರ್ಯಕರ್ತರಿಗೂ ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಕರೆ ಕೊಟ್ಟರು. ಅಲ್ಲದೇ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಫಲಿತಾಂಶದ ನಂತದಲ್ಲಿ ಸ್ವತಃ ಮಮತಾ ಬ್ಯಾನರ್ಜಿ ಅವರಿಂದಲೂ ಜೈ ಶ್ರೀರಾಮ್ ಘೋಷಣೆಯನ್ನು ಕೂಗಿಸುತ್ತೇವೆ ಎಂದು ಅಮಿತ್ ಶಾ ಸವಾಲು ಹಾಕಿದರು.
ವಿನಾಶ ಮತ್ತು ಅಭಿವೃದ್ಧಿ ನಡುವಿನ ಹೋರಾಟ
ಪ್ರಧಾನಿ ನರೇಂದ್ರ ಮೋದಿಯವರು ಜನರ ಕಲ್ಯಾಣಕ್ಕೋಸ್ಕರ ಕೆಲಸ ಮಾಡುತ್ತಿದ್ದರೆ, ಮಮತಾ ಬ್ಯಾನರ್ಜಿಯವರು ಸೋದರಳಿಯ ಕಲ್ಯಾಣಕ್ಕಾಗಿ ಆಡಳಿತ ನಡೆಸುತ್ತಿದ್ದಾರೆ ಎಂದು ಅಮಿತ್ ಶಾ ದೂಷಿಸಿದರು. ಅಲ್ಲದೇ, ಪಶ್ಚಿಮ ಬಂಗಾಳದಲ್ಲಿ ಈ ಬಾರಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯ ಮಾದರಿ ಮತ್ತು ಮಮತಾ ಬ್ಯಾನರ್ಜಿಯವರ ವಿನಾಶದ ಮಾದರಿ ನಡುವಿನ ಹೋರಾಟದ ಸಂಕೇತವಾಗಿರಲಿದೆ ಎಂದು ಹೇಳಿದರು.
ಬಂಗಾಳದಲ್ಲಿ ಸದ್ದು ಮಾಡಿದ ಜೈ ಶ್ರೀರಾಮ್ ಘೋಷಣೆ
ಕಳೆದ ಜನವರಿ.23ರಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದ ವಿಕ್ಟೋರಿಯಾ ಸ್ಮಾರಕದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಶ್ ಚಂದ್ರ ಭೋಸ್ ಅವರ 125ನೇ ಜನ್ಮದಿನದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಒಂದೇ ವೇದಿಕೆಯಲ್ಲಿ ಸೇರಿದ್ದರು. ಈ ವೇಳೆ ಮಮತಾ ಬ್ಯಾನರ್ಜಿ ಭಾಷಣಕ್ಕೆ ಎದ್ದು ನಿಲ್ಲುತ್ತಿದ್ದಂತೆ "ಜೈ ಶ್ರೀರಾಮ್" ಎಂಬ ಘೋಷಣೆ ಕೂಗಿಲಾಗಿತ್ತು. ಸರ್ಕಾರದ ಕಾರ್ಯಕ್ರಮದಲ್ಲಿ ಇಂಥ ಘೋಷಣೆ ಕೂಗುವುದಕ್ಕೆ ಇದೇನು ಯಾವುದೋ ಒಂದು ಪಕ್ಷದ ಕಾರ್ಯಕ್ರಮವಲ್ಲ ಎಂದ ದೀದಿ, ಭಾರತ್ ಮಾತಾ ಕೀ ಜೈ ಎಂದು ಕೂಗಿ ಭಾಷಣವನ್ನು ಮೊಟಕುಗೊಳಿಸಿ ಅಲ್ಲಿಂದ ತೆರಳಿದ್ದರು.
ಕೇಸರಿ ಪಡೆ ವಿರುದ್ಧ ಮಮತಾ ಬ್ಯಾನರ್ಜಿ ಸಿಡಿಮಿಡಿ
ಅವರು ಆಹ್ವಾನ ನೀಡಿದ್ದರು ಎಂಬ ಕಾರಣಕ್ಕೆ ನಾನು ಕಾರ್ಯಕ್ರಮಕ್ಕೆ ಹೋಗಿದ್ದೆ. ಸರ್ಕಾರಿ ಪರ ಕಾರ್ಯಕ್ರಮದಲ್ಲಿ ಕೆಲವು ಮತಾಂಧ ದೇಶದ್ರೋಹಿಗಳು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಎದುರಿಗೆ ನನಗೇ ಕೀಟಲೆ ಮಾಡುವ ಧೈರ್ಯ ಪ್ರದರ್ಶಿಸಿದರು. ಅವರು ಯಾರು ಎಂಬ ಬಗ್ಗೆ ನನಗೆ ಗೊತ್ತಿಲ್ಲ. ನೀವು ನನಗೆ ಗನ್ ತೋರಿಸಿದರೆ, ನಾನು ನಿಮಗೆ ಶಸ್ತ್ರಾಸ್ತ್ರಗಳನ್ನು ತೋರಿಸಬಲ್ಲೆ. ಆದರೆ ನನಗೆ ಗನ್ ಹಿಡಿದು ಮಾಡುವ ರಾಜಕಾರಣದ ಮೇಲೆ ನಂಬಿಕೆಯಿಲ್ಲ ಎಂದರು. ಅಲ್ಲದೇ, "ನೀವು ನೇತಾಜಿಯವರನ್ನು ಅವಮಾನಿಸಿದ್ದೀರಿ. ನೀವು ಟ್ಯಾಗೋರ್ ಅವರ ಜನ್ಮಸ್ಥಳವನ್ನೇ ತಪ್ಪಾಗಿ ಉಲ್ಲೇಖಿಸಿದ್ದೀರಿ. ವಿದ್ಯಾಸಾಗರ್ ಅವರ ಪ್ರತಿಮೆಯನ್ನು ನೀವು ನಾಶಪಡಿಸಿದ್ದೀರಿ. ಬಿರ್ಸಾ ಮುಂಡಾ ಎಂದು ಭಾವಿಸಿ ಬೇರೆ ಯಾವುದೋ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದೀರಿ. ಇದು ನಿಮ್ಮ ತಪ್ಪುಗಳಿಗೆ ಹಿಡಿದ ಕೈಗನ್ನಡಿ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು.