ಟಿಎಂಸಿ ತೊರೆದು ಬಿಜೆಪಿ ಸೇರಿದ ಶಾಸಕ ಮಿಹಿರ್ ಗೋಸ್ವಾಮಿ
ಕೋಲ್ಕತಾ, ನ. 27: ಕೂಚ್ ಬೆಹಾರ್ ದಕ್ಷಿಣ ಕ್ಷೇತ್ರದ ಶಾಸಕ ಮಿಹಿರ್ ಗೋಸ್ವಾಮಿ ಅವರು ತೃಣಮೂಲ ಕಾಂಗ್ರೆಸ್ ಪಕ್ಷದ ತೊರೆದು ಭಾರತೀಯ ಜನತಾ ಪಕ್ಷ ಸೇರಿಕೊಂಡಿದ್ದಾರೆ.
ದೆಹಲಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗಿಯಾ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡರು.
ಟಿಎಂಸಿಯಲ್ಲಿ ಬಿಕ್ಕಟ್ಟು: ಮಮತಾ ಸಂಪುಟದಿಂದ ಪ್ರಮುಖ ಸಚಿವ ಹೊರಕ್ಕೆ
''ಅಕ್ಟೋಬರ್ 3ರಿಂದಲೇ ನನಗೆ ವಹಿಸಿದ್ದ ಎಲ್ಲಾ ಸಂಘಟನಾ ಜವಾಬ್ದಾರಿಗಳಿಂದ ಮುಕ್ತನಾಗಿ ರಾಜೀನಾಮೆ ಸಲ್ಲಿಸಿದ್ದೇನೆ. ಇದಾಗಿ ಎರಡು ತಿಂಗಳಾಗುತ್ತಾ ಬಂದಿದ್ದು, ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬಹುದು ಎನಿಸುತ್ತದೆ. ಪಕ್ಷದ ವರಿಷ್ಠರು ನಿರ್ಧರಿಸಿದಂತೆ ಆಗಲಿ, ನನ್ನ ನಿರ್ಧಾರವನ್ನು ಅನೇಕರು ಸ್ವಾಗತಿಸಿದ್ದಾರೆ. ಕಳೆದ ಹತ್ತು ವರ್ಷಗಳಿಂದ ನಿರ್ಲಕ್ಷ್ಯಕ್ಕೊಳಗಾಗಿ, ಅಪಮಾನಕ್ಕೊಳಗಾಗಿದ್ದೇನೆ'' ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಗೋಸ್ವಾಮಿ ಬರೆದುಕೊಂಡಿದ್ದರು.
20 ವರ್ಷಗಳ ಹಿಂದೆ ನಾನು ಸೇರಿದಾಗ ಇದ್ದ ಪಕ್ಷದ ಸಿದ್ಧಾಂತ ಈಗ ಕಾಣುತ್ತಿಲ್ಲ. ಪಕ್ಷದ ಹಿರಿಯ ಮುಖಂಡರು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ನನಗೆ ಇನ್ನು ಈ ಪಕ್ಷದಲ್ಲಿ ಸ್ಥಾನವಿಲ್ಲ. ನಾನು ಎಲ್ಲಾ ಬಂಧಗಳನ್ನು ಕಳಚಿಕೊಳ್ಳುತ್ತಿದ್ದೇನೆ. ನನ್ನ ಹಿತೈಷಿಗಳು, ಬಹುಕಾಲದ ಗೆಳೆಯರು ನನ್ನ ನಿರ್ಣಯವನ್ನು ಮನ್ನಿಸಲಿದ್ದಾರೆ ಎಂಬ ನಂಬಿಕೆಯಿದೆ ಎಂದು ಗೋಸ್ವಾಮಿ ಹೇಳಿದ್ದರು.
ಎರಡು ಬಾರಿ ಶಾಸಕ ಗೋಸ್ವಾಮಿ ತಾವು ರಾಜೀನಾಮೆ ನೀಡಲು ಪಕ್ಷದ ರಾಜತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಐ ಪ್ಯಾಕ್ ಮೂಗು ತೂರಿಸಿದ್ದು ಕಾರಣ ಎಂದಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಕೂಚ್ ಬಿಹಾರ ಕ್ಷೇತ್ರವನ್ನು ಬಿಜೆಪಿ ಗೆದ್ದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.