ಕೇಂದ್ರದ ಸಮನ್ಸ್ಗೆ ಸೆಡ್ಡುಹೊಡೆದ ಮಮತಾ: ಅಧಿಕಾರಿಗಳನ್ನು ಕಳುಹಿಸಲು ನಕಾರ
ಕೋಲ್ಕತಾ, ಡಿಸೆಂಬರ್ 11: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಕಾರಿನ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ ನೀಡಿರುವ ಸಮನ್ಸ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಪಶ್ಚಿಮ ಬಂಗಾಳ ಮುಖ್ಯ ಕಾರ್ಯದರ್ಶಿ, ತಾವು ಹಾಗೂ ರಾಜ್ಯದ ಇತರೆ ಅಧಿಕಾರಿಗಳು ದೆಹಲಿಗೆ ಬರುವುದಿಲ್ಲ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರವು ಈಗಾಗಲೇ ಈ ಘಟನೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿದೆ ಎಂದು ಗೃಹ ಸಚಿವಾಲಯಕ್ಕೆ ಹಿರಿಯ ಅಧಿಕಾರಿ ಅಳಪನ್ ಬಂಡೋಪಾಧ್ಯಾಯ ಪತ್ರದಲ್ಲಿ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೂರು ಪ್ರಕರಣಗಳು ದಾಖಲಾಗಿವೆ. ಏಳು ಮಂದಿಯನ್ನು ಬಂಧಿಸಲಾಗಿದೆ. ಡಿಸೆಂಬರ್ 14ರಂದು ಕೇಂದ್ರ ಗೃಹ ಕಾರ್ಯದರ್ಶಿಗಳು ಕರೆದಿರುವ ಸಭೆಗೆ ರಾಜ್ಯದ ಅಧಿಕಾರಿಗಳು ಹಾಜರಾಗಬೇಕೆಂಬ ಸಮನ್ಸ್ಅನ್ನು ಪರಿಗಣಿಸದಂತೆ ಮನವಿ ಮಾಡಲು ತಮಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ನಡ್ಡಾ ಬೆಂಗಾವಲು ವಾಹನದ ಮೇಲೆ ದಾಳಿ; ಮೂವರ ಮೇಲೆ FIR, ಏಳು ಮಂದಿ ಬಂಧನ
ಝೆಡ್ ಭದ್ರತೆಯಲ್ಲಿರುವ ನಡ್ಡಾ ಅವರಿಗೆ ಸೂಕ್ತ ಭದ್ರತಾ ವ್ಯವಸ್ಥೆಗಳನ್ನು ಮಾಡಿರಲಿಲ್ಲ ಎಂಬ ವರದಿಗಳ ಕುರಿತು ಪ್ರತಿಕ್ರಿಯಿಸಿರುವ ಅವರು, ಅವರಿಗೆ ಬುಲೆಟ್ ಪ್ರೂಫ್ ಕಾರು, ಒಂದು ಬೆಂಗಾವಲು ವಾಹನ ಮತ್ತು ಭದ್ರತಾ ಅಧಿಕಾರಿಗಳನ್ನು ನೀಡಲಾಗಿತ್ತು. ಒಟ್ಟಾರೆ ಭದ್ರತೆಯನ್ನು ಪರಿಶೀಲಿಸಲು ಡಿಐಜಿ ಕೂಡ ನಿಯೋಜನೆಗೊಂಡಿದ್ದರು. ನಾಲ್ವರು ಎಸ್ಪಿಗಳು, ಎಂಟು ಡಿಎಸ್ಪಿಗಳು, 14 ಇನ್ಸ್ಪೆಕ್ಟರ್ಗಳು, 70 ಸಬ್ ಇನ್ಸ್ಪೆಕ್ಟರ್ಗಳು, 40 ಆರ್ಎಎಫ್ ಸಿಬ್ಬಂದಿ, 259 ಕಾನ್ಸ್ಟೆಬಲ್ ಮತ್ತು 350 ಇತರೆ ಪಡೆಗಳನ್ನು ನಡ್ಡಾ ಅವರು ತೆರಳುವ ಸ್ಥಳಗಳುದ್ದಕ್ಕೂ ನಿಯಜಿಸಲಾಗಿತ್ತು ಎಂದು ತಿಳಿಸಿದ್ದಾರೆ.