ಆಟಿಕೆ ಬಂದೂಕು ತೋರಿಸಿ ಮುಖ್ಯಮಂತ್ರಿ ಅಣ್ಣನನ್ನೇ ಅಪಹರಿಸಿದ ಐನಾತಿಗಳು
ಕೊಲ್ಕತ್ತ, ಡಿಸೆಂಬರ್ 14: ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಬಂದ ನಾಲ್ವರು ಐನಾತಿ ಅಪಹರಣಕಾರರು, ಹಾಲಿ ಮುಖ್ಯಮಂತ್ರಿಯ ಅಣ್ಣನನ್ನೇ ಅಪಹರಿಸಿದ್ದಾರೆ.
ಕೊಲ್ಕತ್ತದಲ್ಲಿದ್ದ ಮಣಿಪುರ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರ ಅಣ್ಣನನ್ನೇ ಅಪಹರಿಸಿದ್ದಾರೆ. ಆದರೆ ಅಪಹರಣ ನಡೆದ ಕೆಲವೇ ಗಂಟೆಗಳಲ್ಲಿ ಅಪಹರಣಾಕರರನ್ನು ಬಂಧಿಸಲು ಪೊಲೀಸರು ಯಶಸ್ವಿಯಾಗಿದ್ದಾರೆ.
ನ್ಯೂಟೌನ್ ನಲ್ಲಿರುವ ಸಿಎಂ ಅಣ್ಣ ಟೋಂಗ್ ಬ್ರಾಮ್ ಲುಖೋಯ್ ಸಿಂಗ್ ಅವರ ಮನೆಗೆ ನಿನ್ನೆ ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಬಂದ ಅಪಹರಣಕಾರರು. ಆಟಿಕೆ ಬಂದೂಕುಗಳನ್ನು ಪ್ರದರ್ಶಿಸಿ ಸಿಂಗ್ ಅವರನ್ನು ಹಾಗೂ ಅವರ ಸಹಚರ ಒಬ್ಬರನ್ನು ಅಪಹರಣ ಮಾಡಿದ್ದರು.
ಅಪಹರಣ ಮಾಡಿದ ಕೆಲವು ಗಂಟೆಗಳ ಬಳಿಕ ಸಿಂಗ್ ಅವರ ಪತ್ನಿಗೆ ಕರೆ ಮಾಡಿದ ಅಪಹರಣಕಾರರು 15 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಸಿಂಗ್ ಅವರ ಪತ್ನಿ ಆವೇಳೆಗಾಗಲೆ ಪೊಲೀಸರಿಗೆ ದೂರು ನೀಡಿದ್ದರು.
ಶೀಘ್ರವಾಗಿ ತನಿಖೆ ನಡೆಸಿದ ಪೊಲೀಸರು ಶುಕ್ರವಾರ ಸಂಜೆ ವೇಳೆಗೆ ಸಿಎಂ ಅಣ್ಣ ಹಾಗೂ ಅವರ ಸಹಚರರನ್ನು ರಕ್ಷಿಸಿದ್ದಾರೆ. ಜೊತೆಗೆ ಐವರು ಅಪಹರಣಕಾರರನ್ನೂ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ ಎರಡು ಲಕ್ಷ ನಗದು, ಒಂದು ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರಲ್ಲಿ ಇಬ್ಬರು ಮಣಿಪುರ, ಇಬ್ಬರು ಕೊಲ್ಕತ್ತಾ, ಒಬ್ಬ ಪಂಜಾಬ್ ನವರಾಗಿದ್ದಾರೆ.