ಬಿಜೆಪಿ ಅಧ್ಯಕ್ಷನಿಂದಾದ ಎಡವಟ್ಟು: ಹಸು ಅಡವಿಟ್ಟು ಗೋಲ್ಡ್ ಲೋನ್ ಕೇಳಿದ ಆಸಾಮಿ!
ಕೋಲ್ಕತ್ತಾ, ನ 7: ರಾಜಕೀಯ ಮುಖಂಡರು ನೀಡುವ ಬೇಕಾಬಿಟ್ಟಿ ಹೇಳಿಕೆಯಿಂದ, ಕೆಲವು ಸಾರ್ವಜನಿಕರು ಎಷ್ಟು ಪ್ರಭಾವಕ್ಕೆ ಒಳಗಾಗುತ್ತಾರೆ ಎನ್ನುವುದಕ್ಕೆ ಇದೊಂದು ಉದಾಹರಣೆ.
ಪಶ್ಚಿಮ ಬಂಗಾಳದ ಧಾನ್ಕುನಿ ಪ್ರದೇಶದ ಮುಗ್ದ ಆಸಾಮಿಯೊಬ್ಬ, ಮಣ್ಣಪುರಂ ಫೈನಾನ್ಸ್ ಕಚೇರಿಗೆ ತನ್ನ ಎರಡು ಹಸುಗಳು ಜೊತೆ ತೆರಳಿ, ಅದನ್ನು ಅಡವಿಟ್ಟು ಚಿನ್ನದ ಲೋನ್ ಕೊಡಿ ಎನ್ನುವ ಬೇಡಿಕೆಯನ್ನು ಇಟ್ಟಿದ್ದಾನೆ.
ಪಶ್ಚಿಮ ಬಂಗಾಳದಲ್ಲಿ ಇಂದಿನಿಂದ ಗುಟ್ಕಾ, ಪಾನ್ ಮಸಾಲಾ ನಿಷೇಧ
"ಹಸುವಿನ ಹಾಲಿನಲ್ಲಿ ಚಿನ್ನದ ಅಂಶವಿರುತ್ತದೆ" ಎನ್ನುವ ರಾಜಕಾರಣಿಯೊಬ್ಬರ ಹೇಳಿಕೆಯಿಂದ ಪ್ರೇರಿತರಾಗಿ, ಹಾಲು ಕೊಡುವ ಹಸುವನ್ನು ಅಡವಿಟ್ಟು ಗೋಲ್ಡ್ ಲೋನ್ ತೆಗೆದುಕೊಳ್ಳಲು ಈತ ಬಂದಿದ್ದ.
ಪಶ್ಚಿಮ ಬಂಗಾಳ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್, "ಭಾರತೀಯ ಹಸುಗಳು ಉತ್ಪಾದಿಸುವ ಹಾಲಿನಲ್ಲಿ ಚಿನ್ನವಿದೆ" ಎನ್ನುವ ಹೇಳಿಕೆಯನ್ನು ನೀಡಿ, ವಿವಾದವನ್ನು ಹುಟ್ಟುಹಾಕಿದ್ದರು.
ದಿಲೀಪ್ ಘೋಷ್ ಹೇಳಿಕೆಯ ನಂತರ, ಪಶ್ಚಿಮ ಬಂಗಾಳದ ಸುದ್ದಿ ವಾಹಿನಿಯೊಂದು ಹಸು ಅಡವಿಟ್ಟು ಚಿನ್ನದ ಸಾಲ ತೆಗೆದುಕೊಳ್ಳಲು ಬಂದವನ ಬಳಿ ಮಾತನಾಡಿಸಿದೆ. "ನಾನು ಚಿನ್ನದ ಸಾಲಕ್ಕಾಗಿ ಮಣ್ಣಪುರಂ ಕಚೇರಿಗೆ ಬಂದಿದ್ದೇನೆ, ಜೊತೆಗೆ ಎರಡು ಹಸುಗಳನ್ನೂ ಕರೆತಂದಿದ್ದೇನೆ".
"ಹಸುವಿನ ಹಾಲಿನಲ್ಲಿ ಚಿನ್ನವಿದೆ ಎನ್ನುವ ಸುದ್ದಿಯನ್ನು ಕೇಳಿದ್ದೆ. ನನ್ನ ಕುಟುಂಬ ಹಸುಗಳ ಮೇಲೆ ಅವಲಂಬಿತವಾಗಿದೆ. ನನ್ನ ಬಳಿ 20 ಹಸುಗಳಿವೆ ಮತ್ತು ಅದರೆ ಮೇಲೆ ಸಾಲ ಪಡೆದರೆ, ನನ್ನ ವ್ಯಾಪರವನ್ನು ವಿಸ್ತರಿಸಲು ನನಗೆ ಸಾಧ್ಯವಾಗುತ್ತದೆ" ಎನ್ನುವ ಮುಗ್ದ ಹೇಳಿಕೆಯನ್ನು ನೀಡಿದ್ದಾನೆ.
"ಹಸುವಿನ ಹಾಲಿನಲ್ಲಿ ಚಿನ್ನವಿದೆ ಎಂದು ಹೇಳಿದ ದಿಲೀಪ್ ಘೋಷ್ ಗೆ ನೊಬೆಲ್ ಪ್ರಶಸ್ತಿ ನೀಡಬೇಕು. ಪ್ರತೀದಿನ, ಜನ, ಹಸುವಿನೊಂದಿಗೆ ಪಂಚಾಯತಿ ಕಚೇರಿಗೆ ಬಂದು, ಎಷ್ಟು ಸಾಲ ಸಿಗಬಹುದು ಎಂದು ಕೇಳುತ್ತಿದ್ದಾರೆ. ನಮ್ಮ ಹಸು ದಿನಕ್ಕೆ 15-16 ಲೀಟರ್ ಹಾಲು ಕೊಡುತ್ತದೆ. ನಮಗೆ ಲೋನ್ ಬೇಕೆಂದು ಡಿಮಾಂಡು ಮಾಡುತ್ತಿದ್ದಾರೆ" ಎಂದು ತಾಲೂಕು ಪಂಚಾಯತಿ ಮುಖ್ಯಸ್ಥರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
ಕೊನೇ ಮಾತು: ಫೈನಾನ್ಸ್ ಸಂಸ್ಥೆಯವರು ಲೋನ್ ಕೊಡಲು ಬರುವುದಿಲ್ಲ ಎಂದಮೇಲೆ, ಸೀದಾ ಬಿಜೆಪಿ ಅಧ್ಯಕ್ಷರ ಮನೆಯ ಮುಂದೆ ಹಸುಗಳನ್ನು ಕಟ್ಟಿ ಅವರಿಂದಲೇ ಸಾಲ ಕೇಳಬೇಕಿತ್ತು. ಹಾಗಾದರೂ, ಈ ರಾಜಕಾರಣಿಗಳು ಬೇಕಾಬಿಟ್ಟಿ ಹೇಳಿಕೆ ನೀಡುವುದು ತಪ್ಪುವುದೋ ಏನೋ?