ಬಂಗಾಳ ಆಳಲು ಸಾಧ್ಯವಾಗದ ಮಮತಾ ಬ್ಯಾನರ್ಜಿಗೆ ದೇಶ ನಡೆಸುವ ಕನಸು; ರೂಪಾ ಗಂಗೂಲಿ
ಕೋಲ್ಕತ್ತಾ, ಜುಲೈ 22: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ನಂತರದ ಗಲಭೆಗಳ ಕುರಿತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಮಾತನಾಡಿರುವ ಬಿಜೆಪಿ ಮುಖ್ಯಸ್ಥೆ ರೂಪಾ ಗಂಗೂಲಿ, "ರಾಜ್ಯದಲ್ಲಿ ಸಣ್ಣ ವಿಷಯವನ್ನೂ ಬಗೆಹರಿಸಲು ಸಾಧ್ಯವಾಗದ ಟಿಎಂಸಿ ಮುಖ್ಯಸ್ಥೆ ದೇಶವನ್ನು ಆಳುವ ಕನಸು ಕಾಣುತ್ತಿದ್ದಾರೆ" ಎಂದು ಟೀಕಿಸಿದ್ದಾರೆ.
ರಾಜ್ಯದಲ್ಲಿ ಚುನಾವಣಾ ನಂತರ ನಡೆದ ಹಿಂಸಾಚಾರದಲ್ಲಿ ಸುಮಾರು 35 ಸಾವಿರ ಮಹಿಳೆಯರಿಗೆ ಹಿಂಸೆ ನೀಡಲಾಗಿದೆ ಎಂದು ದೂರಿದ್ದಾರೆ.
"ಭಾರತದ ಜನಕ್ಕೆ ಪಶ್ಚಿಮ ಬಂಗಾಳದಲ್ಲಿ ನಡೆಯುವ ಗಲಭೆಗಳ ಕುರಿತು ತಿಳಿದಿಲ್ಲ ಎಂದು ಅಂದುಕೊಂಡಂತಿದೆ. ಕಳೆದ 10 ವರ್ಷಗಳಿಂದ ಮಮತಾ ಬ್ಯಾನರ್ಜಿ ಅಧಿಕಾರದಲ್ಲಿದ್ದಾರೆ. ಮಮತಾ ಬ್ಯಾನರ್ಜಿ ಅಧಿಕಾರಕ್ಕೆ ಬಂದಾಗಿನಿಂದ, 2015-16ರಿಂದ ಏನೇನು ನಡೆದಿದೆಯೋ ಅವೆಲ್ಲವೂ ಸರಿಯಿದೆಯೇ? ಈಚೆಗೆ ನಡೆದ ವಿಧಾನಸಭೆ ಚುನಾವಣೆ ನಂತರವೂ ಮಹಿಳೆಯರ ಮೇಲೆ ಹಿಂಸಾಚಾರ ನಡೆದಿದೆ" ಎಂದು ಹೇಳಿದರು.
'ಮೋದಿ ಜಿ, ಇದು ವೈಯಕ್ತಿಕವಲ್ಲ': ಪೆಗಾಸಸ್ ವಿಚಾರದಲ್ಲಿ ದೀದಿ ವಾಗ್ದಾಳಿ
"ಮಮತಾ ಬ್ಯಾನರ್ಜಿ ತುಂಬಾ ಸುಳ್ಳುಗಳನ್ನು ಹೇಳುತ್ತಾರೆ. ಈಗ ಪಶ್ಚಿಮ ಬಂಗಾಳದಲ್ಲಿ ಅವರಿಂದ ಉಂಟಾಗಿರುವ ಪರಿಸ್ಥಿತಿ ಇಡೀ ಭಾರತದಲ್ಲೇ ನಡೆದಿಲ್ಲ. ಆಗಸ್ಟ್ 16 ಅನ್ನು ಏಕೆ ಖೇಲಾ ದಿವಸ್ ಎಂದು ಆಚರಿಸಲು ನಿರ್ಧರಿಸಿದ್ದಾರೆ? ಈ ದಿನದೊಂದಿಗೆ ಕಳಂಕದ ಇತಿಹಾಸವಿದೆ. ಹಲವು ಜನರು ಆ ದಿನ ಸತ್ತಿದ್ದಾರೆ. ಆದರೂ ಆ ದಿವಸದಲ್ಲಿ ಆಚರಣೆ ಮಾಡುತ್ತಿದ್ದಾರೆ" ಎಂದು ಹೇಳಿದರು.
"ಮಮತಾ ಬ್ಯಾನರ್ಜಿ ಮಾತುಗಳಿಗೆ ಗಮನ ನೀಡಬೇಡಿ. ಪಶ್ಚಿಮ ಬಂಗಾಳದಲ್ಲಿ ಸಣ್ಣ ಸಮಸ್ಯೆ ಬಗೆಹರಿಸಲೂ ಅವರಿಂದ ಸಾಧ್ಯವಾಗಿಲ್ಲ. ಹೀಗಿದ್ದೂ ದೇಶ ನಡೆಸುವ ಕನಸು ಕಾಣುತ್ತಿದ್ದಾರೆ" ಎಂದು ಟೀಕಿಸಿದರು.