ಲೋಕಸಭೆ, ವಿಧಾನಸಭೆ ಉಪಚುನಾವಣೆಗೆ ಟಿಎಂಸಿ ಟಿಕೆಟ್ ಹಂಚಿದ ಮಮತಾ
ಕೋಲ್ಕತ್ತಾ ಮಾರ್ಚ್ 13: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಲೋಕಸಭೆ, ಬಂಗಾಳ ವಿಧಾನಸಭೆ ಉಪಚುನಾವಣೆಗೆ ಟಿಎಂಸಿ ಟಿಕೆಟ್ ಮೂಲಕ ಸ್ಪರ್ಧಿಸಲು ಶತ್ರುಘ್ನ ಸಿನ್ಹಾ, ಬಾಬುಲ್ ಸುಪ್ರಿಯೊ ಅವರನ್ನು ಭಾನುವಾರ ನಾಮನಿರ್ದೇಶನ ಮಾಡಿದ್ದಾರೆ. "ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಪರವಾಗಿ ಮಾಜಿ ಕೇಂದ್ರ ಸಚಿವ ಮತ್ತು ಪ್ರಸಿದ್ಧ ನಟ ಶತ್ರುಘ್ನ ಸಿನ್ಹಾ, ಅಸನ್ಸೋಲ್ನಿಂದ ಲೋಕಸಭೆಯ ಉಪಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯಾಗುತ್ತಾರೆ ಎಂದು ಘೋಷಿಸಲು ಸಂತೋಷವಾಗಿದೆ" ಎಂದು ಟಿಎಂಸಿ ಬಾಸ್ ಟ್ವೀಟ್ ಮಾಡಿದ್ದಾರೆ.
"ಮಾಜಿ ಕೇಂದ್ರ ಸಚಿವ ಮತ್ತು ಹೆಸರಾಂತ ಗಾಯಕ ಬಾಬುಲ್ ಸುಪ್ರಿಯೋ ಅವರು ಬ್ಯಾಲಿಗುಂಗೆಯಿಂದ ವಿಧಾನಸಭಾ ಉಪಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯಾಗುತ್ತಾರೆ. ಜೈ ಹಿಂದ್, ಜೈ ಬಾಂಗ್ಲಾ, ಜೈ ಮಾ-ಮತಿ- ಮನುಷ್" ಎಂದು ಅವರು ಬರೆದಿದ್ದಾರೆ. ಎರಡು ಬಾರಿ ಬಿಜೆಪಿ ಸಂಸದರಾಗಿದ್ದ ಸುಪ್ರಿಯೊ ಅವರು ಕಳೆದ ವರ್ಷ ಕೇಸರಿ ಪಕ್ಷವನ್ನು ತೊರೆದು ಟಿಎಂಸಿ ಸೇರಿದ ನಂತರ ಅಸನ್ಸೋಲ್ ಲೋಕಸಭಾ ಸ್ಥಾನ ತೆರವಾಗಿತ್ತು. ರಾಜ್ಯ ಸಚಿವ ಸುಬ್ರತಾ ಮುಖರ್ಜಿ ಅವರ ನಿಧನದ ನಂತರ ಬ್ಯಾಲಿಗಂಜ್ ವಿಧಾನಸಭಾ ಸ್ಥಾನ ತೆರವಾಗಿತ್ತು.
ಪಶ್ಚಿಮ ಬಂಗಾಳ 4 ಪಾಲಿಕೆ ಚುನಾವಣೆಯಲ್ಲಿ ಟಿಎಂಸಿ ಗೆಲುವು, ಮಮತಾ ಅಭಿನಂದನೆ
ಕಾಂಗ್ರೆಸ್ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಬಂಗಾಳ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಧೀರ್ ರಂಜನ್ ಚೌಧರಿ, ಬಿಜೆಪಿ ಏಜೆಂಟ್ ಎಂದು ಟೀಕಿಸಿದ್ದಾರೆ. ದೇಶಾದ್ಯಂತ ಕಾಂಗ್ರೆಸ್ ಅಸ್ತಿತ್ವ ಇರುವುದನ್ನು ವಿವರಿಸಿರುವ ಚೌಧರಿ, ವಿರೋಧಪಕ್ಷಗಳ ಮತ ಹಂಚಿಕೆಯಲ್ಲಿ ಶೇ 20ರಷ್ಟು ಪಾಲನ್ನು ಕಾಂಗ್ರೆಸ್ ಹೊಂದಿದೆ. ರಾಜಕೀಯದಲ್ಲಿ ನಿಮ್ಮ ಪಕ್ಷ ಎಲ್ಲಿ ನಿಂತಿದೆ ಎಂದು ಟಿಎಂಸಿ ಮುಖ್ಯಸ್ಥೆಯೂ ಆಗಿರುವ ಮಮತಾ ಅವರನ್ನು ಪ್ರಶ್ನಿಸಿದ್ದಾರೆ.
ಐದು ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾದ ಬಳಿಕ ಕಾಂಗ್ರೆಸ್ನ ಶೋಚನೀಯ ಸೋಲಿನ ಬಗ್ಗೆ ಶುಕ್ರವಾರ ಮಾತನಾಡಿದ್ದ ಮಮತಾ ಬ್ಯಾನರ್ಜಿ, "ಬಿಜೆಪಿ ವಿರುದ್ಧ ಹೋರಾಡಲು ಬಯಸಿರುವ ಎಲ್ಲ ರಾಜಕೀಯ ಪಕ್ಷಗಳೂ ಜತೆಗೂಡಬೇಕು. ಕಾಂಗ್ರೆಸ್ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದೆ. ನಾವು ಕಾಂಗ್ರೆಸ್ ಅನ್ನು ಅವಲಂಬಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದರು.
ಮಮತಾ ಹೇಳಿಕೆಗೆ ತಿರುಗೇಟು ನೀಡಿರುವ ಅಧೀರ್ ರಂಜನ್ ಚೌಧರಿ ಅವರು, ದೇಶಾದ್ಯಂತ ಕಾಂಗ್ರೆಸ್ ಅಸ್ತಿತ್ವದಲ್ಲಿ ಇದೆ ಎಂದು ಹೇಳಿದ್ದಾರೆ. "ಹುಚ್ಚು ವ್ಯಕ್ತಿಗೆ ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ದೇಶಾದ್ಯಂತ ಕಾಂಗ್ರೆಸ್ 700 ಶಾಸಕರನ್ನು ಹೊಂದಿದೆ. ದೀದಿ ಬಳಿ ಅಷ್ಟು ಶಾಸಕರಿದ್ದಾರೆಯೇ? ವಿರೋಧಪಕ್ಷಗಳ ಮತ ಹಂಚಿಕೆಯಲ್ಲಿ ಕಾಂಗ್ರೆಸ್ ಶೇ 20ರಷ್ಟು ಪಾಲು ಹೊಂದಿದೆ. ಅಷ್ಟು ಅವರ ಬಳಿ ಇದೆಯೇ? ಅವರು ಬಿಜೆಪಿಯನ್ನು ಓಲೈಸುವುದಕ್ಕಾಗಿ ಈ ರೀತಿ ಹೇಳುತ್ತಿದ್ದಾರೆ. ಅವರು ಅದರ ಏಜೆಂಟ್ ರೀತಿ ವರ್ತಿಸುತ್ತಿದ್ದಾರೆ. ಸುದ್ದಿಯಲ್ಲಿ ಇರುವ ಸಲುವಾಗಿ ಅವರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ" ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯನ್ನು ಸೋಲಿಸಲು ಎಲ್ಲಾ ವಿರೋಧ ಪಕ್ಷಗಳು ಒಂದಾಗಬೇಕು ಎಂದು ಮತ್ತೊಮ್ಮೆ ಕರೆ ನೀಡಿದರು. ಕೆಲವು ರಾಜ್ಯಗಳಲ್ಲಿ ಗೆದ್ದಿದ್ದೇವೆ ಎಂದು ಬಿಜೆಪಿಯವರು ಧ್ವನಿ ಎತ್ತಬಾರದು. ಈ ಗೆಲುವು ಜನಾಭಿಪ್ರಾಯ ಸಂಗ್ರಹಕ್ಕೆ ಸಾಕ್ಷಿಯಲ್ಲ. ಈ ಚುನಾವಣೆಯ ಪರಿಣಾಮ ಸಾರ್ವತ್ರಿಕ ಚುನಾವಣೆ ಮೇಲೆ ಇರುವುದಿಲ್ಲ. ಬಿಜೆಪಿಯವರು ಹಗಲುಗನಸು ಕಾಣುವುದನ್ನು ಬಿಡಬೇಕು ಎಂದರು.