ನಂದಿಗ್ರಾಮದಲ್ಲಿ ಸುವೇಂದು ಗೆಲುವು; ಮಮತಾ ಬ್ಯಾನರ್ಜಿ ತಕರಾರು ಅರ್ಜಿ
ಕೋಲ್ಕತ್ತಾ, ಜೂನ್ 18: ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯ ಸುವೇಂದು ಅಧಿಕಾರಿ ಗೆಲುವನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೋಲ್ಕತ್ತಾ ಹೈಕೋರ್ಟ್ನಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದಾರೆ.
ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮ ಪ್ರತಿಷ್ಠೆಯ ಕಣವಾಗಿತ್ತು. ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ವಿರುದ್ಧ ಸುಮಾರು ಎರಡು ಸಾವಿರ ಮತಗಳಿಂದ ಅಲ್ಲಿ ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಗೆಲುವು ಸಾಧಿಸಿದ್ದರು.
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರವನ್ನು ಕೆಣಕಿದ ರಾಜ್ಯಪಾಲರ ಪತ್ರ!
ಸುವೇಂದು ಅಧಿಕಾರಿ 1,10,764 ಮತ ಗಳಿಸಿದ್ದರೆ, ಮಮತಾ ಬ್ಯಾನರ್ಜಿ 1,08808 ಮತಗಳನ್ನು ಪಡೆದುಕೊಂಡಿದ್ದರು.
ನಂದಿಗ್ರಾಮದಲ್ಲಿ ಸುವೇಂದು ಗೆಲುವನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೋಲ್ಕತ್ತಾ ಹೈಕೋರ್ಟ್ನಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದು, ಶುಕ್ರವಾರ ವಿಚಾರಣೆ ನಡೆಸಲಾಗುತ್ತಿದೆ.
ನ್ಯಾಯಮೂರ್ತಿ ಕೌಶಿಕ್ ಚಂದಾ ಅವರಿರುವ ನ್ಯಾಯಪೀಠ, ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳಲಿದೆ ಎಂದು ಹೈಕೋರ್ಟ್ ವೆಬ್ಸೈಟ್ನಲ್ಲಿ ಗುರುವಾರ ಪ್ರಕಟಿಸಿದೆ.
ಚುನಾವಣಾ ಸಮಯದಲ್ಲಿ ಇವಿಎಂಗಳ ದುರ್ಬಳಕೆ ಮಾಡಲಾಗಿದೆ. ಸುವೇಂದು ಅಧಿಕಾರಿ ಅಕ್ರಮ ಮಾರ್ಗಗಳನ್ನು ಅನುಸರಿಸಿದ್ದಾರೆ. ಹಣದ ಆಸೆ ತೋರಿಸಿ, ಶತ್ರುತ್ವವನ್ನು ಪ್ರಚೋದಿಸಿದ್ದಾರೆ. ಧರ್ಮದ ಹೆಸರು ಹೇಳಿಕೊಂಡು ಮತ ಪಡೆಯುವ ಪ್ರಯತ್ನಗಳನ್ನು ಮಾಡಿದ್ದಾರೆ ಎಂದು ಮಮತಾ ಬ್ಯಾನರ್ಜಿ ತಕರಾರು ಅರ್ಜಿ ಸಲ್ಲಿಸಿದ್ದಾರೆ.
ಮತಗಳ ಮರು ಎಣಿಕೆ ಮಾಡಬೇಕು ಎಂಬ ನನ್ನ ಮನವಿಯನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ. ಎಂದು ಮಮತಾ ಬ್ಯಾನರ್ಜಿ ಅವರು ಅರ್ಜಿಯಲ್ಲಿ ದೂರಿದ್ದಾರೆ.